ಢಾಕಾದಲ್ಲಿ ನಡೆದ ವಿಚಾರ ಸಂಕಿರಣದ ಸಂದರ್ಭದಲ್ಲಿ ಬಾಂಗ್ಲಾದೇಶದ ತಪ್ಪಾದ ಭಾರತೀಯ ನಕ್ಷೆಯನ್ನು ಪ್ರದರ್ಶಿಸಿದ್ದಕ್ಕೆ ಭಾರತ ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿತು. ಸಾರ್ಕ್ ಅನ್ನು ಪುನರುಜ್ಜೀವನಗೊಳಿಸುವ ಮಾರ್ಗಗಳು ಎಂಬ ವಿಷಯದ ಮೇಲೆ ಈ ವಿಚಾರ ಸಂಕಿರಣವನ್ನು ಬಾಂಗ್ಲಾದೇಶ ಅಂತರರಾಷ್ಟ್ರೀಯ ಮತ್ತು ಕಾರ್ಯತಂತ್ರದ ಅಧ್ಯಯನ ಸಂಸ್ಥೆಯಲ್ಲಿ (BIISS) ನಡೆಸಲಾಯಿತು.
ಬಾಂಗ್ಲಾದೇಶದ ಮಾಜಿ ಹೈಕಮಿಷನರ್ ಅಹ್ಮದ್ ತಾರಿಕ್ ಕರೀಮ್ ಪ್ರಸ್ತುತಿ ಪಡಿಸುತ್ತಿದ್ದಾಗ ಜಮ್ಮು ಮತ್ತು ಕಾಶ್ಮೀರವನ್ನು ಪಾಕಿಸ್ತಾನದ ಭಾಗವಾಗಿ ಚಿತ್ರಿಸುವ ನಕ್ಷೆಯನ್ನು ಪ್ರದರ್ಶಿಸಿದರು. ಇದನ್ನು ನೋಡಿದ ಢಾಕಾದಲ್ಲಿರುವ ಭಾರತೀಯ ಹೈಕಮಿಷನ್ನ ಎರಡನೇ ಕಾರ್ಯದರ್ಶಿ ಪೂಜಾ ಕುಮಾರಿ ಝಾ ಅವರು ತಕ್ಷಣವೇ ಆಕ್ಷೇಪಿಸಿದರು. ನಕ್ಷೆ ತಪ್ಪಾಗಿದೆ ಮತ್ತು ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದೆ ಎಂದು ಝಾ ಸ್ಪಷ್ಟವಾಗಿ ಹೇಳಿದರು.
ನಕ್ಷೆಯನ್ನು ಸಾಂಕೇತಿಕವಾಗಿ ಮಾತ್ರ ಬಳಸಲಾಗಿದೆ. ನಿಜವಾದ ಗಡಿಗಳನ್ನು ಪ್ರತಿಬಿಂಬಿಸುವುದಿಲ್ಲ ಎಂದು ಕರೀಮ್ ಸ್ಪಷ್ಟಪಡಿಸಿದರು. ಇದಕ್ಕೆ ತೃಪ್ತರಾಗದ ಪೂಜಾ, ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದೆ. ಅದನ್ನು ತಪ್ಪಾಗಿ ನಿರೂಪಿಸಲಾಗಿದೆ ಎಂದು ಪುನರುಚ್ಚರಿಸಿದರು. ಅದಕ್ಕಾಗಿಯೇ ಅವರು ಈ ಅಂಶವನ್ನು ಹೈಲೈಟ್ ಮಾಡಲು ಬಯಸಿದ್ದರು. ನಂತರ ಕರೀಮ್, ಪೂಜಾರನ್ನು ಭಾರತದಿಂದ ಬಂದವರೇ ಎಂದು ಕೇಳಿದರು, ಅದಕ್ಕೆ ತಾನು ಭಾರತೀಯ ಹೈಕಮಿಷನ್ನ ಅಧಿಕಾರಿ ಎಂದು ಪರಿಚಯಿಸಿಕೊಂಡರು. ಕರೀಮ್ 'ಇದು ಗಮನಕ್ಕೆ ಬಂದಿದೆ' ಎಂದು ಉತ್ತರಿಸಿ ತಮ್ಮ ಪ್ರಸ್ತುತಿಯನ್ನು ಮುಂದುವರೆಸಿದರು.
ಬಾಂಗ್ಲಾದೇಶದ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವೆ ಶಮಾ ಒಬೈದ್ ಸೆಮಿನಾರ್ನಲ್ಲಿ ಮುಖ್ಯ ಅತಿಥಿಯಾಗಿದ್ದರು. ತಮ್ಮ ಭಾಷಣದಲ್ಲಿ, ದಕ್ಷಿಣ ಏಷ್ಯಾದಲ್ಲಿ ಹೆಚ್ಚಿದ ಸಹಕಾರದ ಅಗತ್ಯವನ್ನು ಅವರು ಒತ್ತಿ ಹೇಳಿದರು ಮತ್ತು ಸಾರ್ಕ್ ಅನ್ನು ಪುನರುಜ್ಜೀವನಗೊಳಿಸಲು ಹಲವಾರು ಸಲಹೆಗಳನ್ನು ನೀಡಿದರು. ಸಂಸ್ಥೆಗೆ ಸುಧಾರಿತ ಕಾರ್ಯಾಚರಣೆಯ ಸಾಮರ್ಥ್ಯ, ಬಲವಾದ ಆರ್ಥಿಕ ಸ್ಥಿತಿ ಮತ್ತು ಪರಿಣಾಮಕಾರಿ ಅನುಸರಣೆಯ ಅಗತ್ಯವಿದೆ ಎಂದು ಹೇಳಿದರು. ಮುಂಬರುವ ತಿಂಗಳುಗಳಲ್ಲಿ ಬಾಂಗ್ಲಾದೇಶವು ಸಾರ್ಕ್ ದೇಶಗಳೊಂದಿಗೆ ಹಲವಾರು ವಿಶ್ವಾಸ-ನಿರ್ಮಾಣ ಕ್ರಮಗಳನ್ನು ತೆಗೆದುಕೊಳ್ಳುವ ಬಗ್ಗೆ ಪರಿಗಣಿಸುತ್ತಿದೆ ಎಂದು ಒಬೈದ್ ಹೇಳಿದರು.
ಇದರಲ್ಲಿ ಢಾಕಾದಲ್ಲಿ ಸಾರ್ಕ್ ರಾಯಭಾರಿಗಳೊಂದಿಗೆ ಚರ್ಚೆಗಳು ಮತ್ತು ಕಠ್ಮಂಡುವಿನಲ್ಲಿ ಸಾರ್ಕ್ ಸಚಿವಾಲಯವನ್ನು ಸಂಪರ್ಕಿಸುವುದು ಸೇರಿವೆ. ಝಾ ಮತ್ತು ಕರೀಮ್ ನಡುವಿನ ಈ ಸಂಭಾಷಣೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೇಗವಾಗಿ ವೈರಲ್ ಆಗಿದೆ. ಅನೇಕ ಭಾರತೀಯ ಬಳಕೆದಾರರು ಝಾ ಅವರನ್ನು ಹೊಗಳಿದರು, ಯಾವುದೇ ವಿಳಂಬವಿಲ್ಲದೆ ತಪ್ಪು ನಕ್ಷೆಯನ್ನು ಆಕ್ಷೇಪಿಸುವ ಮೂಲಕ ಭಾರತದ ದೃಷ್ಟಿಕೋನವನ್ನು ಬಲವಾಗಿ ಪ್ರಸ್ತುತಪಡಿಸಿದ್ದಾರೆ ಎಂದು ಹೇಳಿದರು.