ಸಂಗ್ರಹ ಚಿತ್ರ 
ವಿದೇಶ

ಸತತ 13ನೇ ದಿನವೂ ಇರಾನ್ ಮೇಲೆ ಅಮೆರಿಕ ಕ್ಷಿಪಣಿಗಳ ಸುರಿಮಳೆ: ಸೇನಾ ನೆಲೆಗಳೇ ಪ್ರಮುಖ ಗುರಿ, 'ಇನ್ನೂ ದೊಡ್ಡ ಹೊಡೆತ ನೀಡುತ್ತೇವೆ'- ಟ್ರಂಪ್ ಎಚ್ಚರಿಕೆ

ಅಮೆರಿಕ ಸೇನೆಯು, ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ವಾಣಿಜ್ಯ ಹಡಗುಗಳಿಗೆ ಒಡ್ಡುತ್ತಿರುವ ಬೆದರಿಕೆಗೆ ಉತ್ತರ ನೀಡುವುದು ಹಾಗೂ ಅದರ ಸಾಮರ್ಥ್ಯವನ್ನು ಕುಗ್ಗಿಸುವುದೇ ಈ ದಾಳಿಯ ಉದ್ದೇಶ ಎಂದು ಹೇಳಿದೆ.

ವಾಷಿಂಗ್ಟನ್/ಟೆಹ್ರಾನ್: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿರುವ ನಡುವೆಯೇ, ಅಮೆರಿಕ ಇರಾನ್ ವಿರುದ್ಧ ಸತತ 13ನೇ ರಾತ್ರಿ ವೈಮಾನಿಕ ದಾಳಿ ನಡೆಸಿದೆ.

ಇರಾನ್ ಮೇಲೆ ಇದುವರೆಗಿನ ಅತಿದೊಡ್ಡ ದಾಳಿ ನಡೆಸುವ ಕುರಿತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ ಬೆನ್ನಲ್ಲೇ ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ಹೊಸ ಕಾರ್ಯಾಚರಣೆ ನಡೆಸಿರುವುದಾಗಿ ಘೋಷಿಸಿದೆ.

ಅಮೆರಿಕದ ಪೂರ್ವ ಕಾಲಮಾನ (ET) ಪ್ರಕಾರ ಗುರುವಾರ ರಾತ್ರಿ 9 ಗಂಟೆಗೆ 13ನೇ ದಿನದ ಕಾರ್ಯಾಚರಣೆ ಪೂರ್ಣಗೊಂಡಿದ್ದು, ಶುಕ್ರವಾರ ಮುಂಜಾನೆ ಸೆಂಟ್‌ಕಾಮ್ ಸಾಮಾಜಿಕ ಜಾಲತಾಣ ಎಕ್ಸ್ (X)ನಲ್ಲಿ ಈ ಕುರಿತು ಮಾಹಿತಿ ಪ್ರಕಟಿಸಿದೆ.

ಸೆಂಟ್‌ಕಾಮ್ ಪ್ರಕಾರ, ಈ ಕಾರ್ಯಾಚರಣೆಯಲ್ಲಿ ಇರಾನ್‌ನ ಸೇನಾ ಕಮಾಂಡ್ ಮತ್ತು ನಿಯಂತ್ರಣ ಕೇಂದ್ರಗಳು, ಡ್ರೋನ್ ಸಂಗ್ರಹ ಕೇಂದ್ರಗಳು, ಸೇನಾ ಸಂವಹನ ಜಾಲಗಳು, ಕರಾವಳಿ ನಿಗಾ ಕೇಂದ್ರಗಳು ಹಾಗೂ ಸಮುದ್ರ ಕಾರ್ಯಾಚರಣೆಗೆ ಸಂಬಂಧಿಸಿದ ಸಾಮರ್ಥ್ಯಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ತಿಳಿಸಿದೆ.

ಅಮೆರಿಕ ಸೇನೆಯು, ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ವಾಣಿಜ್ಯ ಹಡಗುಗಳಿಗೆ ಒಡ್ಡುತ್ತಿರುವ ಬೆದರಿಕೆಗೆ ಉತ್ತರ ನೀಡುವುದು ಹಾಗೂ ಅದರ ಸಾಮರ್ಥ್ಯವನ್ನು ಕುಗ್ಗಿಸುವುದೇ ಈ ದಾಳಿಯ ಉದ್ದೇಶ ಎಂದು ಹೇಳಿದೆ.

ಸೆಂಟ್‌ಕಾಮ್, ಇತ್ತೀಚಿನ ಐಆರ್‌ಜಿಸಿ ದಾಳಿಗಳ ನಡುವೆಯೂ ಹೋರ್ಮುಜ್ ಜಲಸಂಧಿ ವಾಣಿಜ್ಯ ಹಡಗುಗಳ ಸಂಚಾರಕ್ಕೆ ಮುಕ್ತವಾಗಿದ್ದು, ಅಮೆರಿಕ ಸೇನೆಯ ಬೆಂಬಲದೊಂದಿಗೆ ಹಡಗುಗಳು ಯಾವುದೇ ಅಡೆತಡೆ ಇಲ್ಲದೆ ಸಂಚರಿಸುತ್ತಿವೆ ಎಂದು ತಿಳಿಸಿದೆ.

ಆದರೆ, ಇದಕ್ಕೆ ಪ್ರತಿಕ್ರಿಯಿಸಿರುವ ಐಆರ್‌ಜಿಸಿ, ಹಾರ್ಮುಜ್ ಜಲಸಂಧಿಯ ಮೇಲೆ ಸಂಪೂರ್ಣ ನಿಯಂತ್ರಣ ನಮ್ಮದಾಗಿದ್ದು, ಇರಾನ್‌ನೊಂದಿಗೆ ಸಮನ್ವಯ ಮಾಡಿಕೊಂಡರೆ ಮಾತ್ರ ಸುರಕ್ಷಿತ ಸಂಚಾರ ಸಾಧ್ಯ ಎಂದು ಪುನರುಚ್ಚರಿಸಿದೆ.

ಇರಾನ್‌ನಲ್ಲಿ ಹಲವು ಕಡೆ ಸ್ಫೋಟ

ಅಮೆರಿಕದ ದಾಳಿಯ ಬಳಿಕ ಇರಾನ್‌ನ ಹಲವು ಪ್ರದೇಶಗಳಲ್ಲಿ ಸ್ಫೋಟಗಳ ಶಬ್ದ ಕೇಳಿಬಂದಿರುವ ವರದಿಗಳು ಪ್ರಕಟವಾಗಿವೆ.

ಮಾಧ್ಯಮ ವರದಿಗಳ ಪ್ರಕಾರ, ಕ್ವೆಶ್ಮ್ (Qeshm) ದ್ವೀಪದಲ್ಲಿ ಭಾರೀ ಸ್ಫೋಟಗಳು ಸಂಭವಿಸಿವೆ. ಇದರ ಜೊತೆಗೆ ಖುಜೆಸ್ತಾನ್ ಪ್ರಾಂತ್ಯದ ರಾಜಧಾನಿ ಅಹ್ವಾಝ್ (Ahvaz) ನಗರದಲ್ಲಿಯೂ ಸ್ಫೋಟಗಳ ಶಬ್ದ ಕೇಳಿಬಂದಿದೆ.

ಇದೇ ಖುಜೆಸ್ತಾನ್ ಪ್ರಾಂತ್ಯದ ಅಂಡಿಮೆಶ್ಕ್ (Andimeshk) ಹಾಗೂ ಒಮಿದಿಯೆಹ್ (Omidiyeh) ನಗರಗಳ ಮೇಲೂ ಅಮೆರಿಕ ಕ್ಷಿಪಣಿ ದಾಳಿ ನಡೆಸಿದೆ ಎಂದು ಇರಾನ್‌ನ ಮೆಹರ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಇದಲ್ಲದೆ, ಇರಾನ್‌ನ ಪ್ರಮುಖ ಬಂದರು ನಗರ ಬಂದರ್ ಅಬ್ಬಾಸ್ (Bandar Abbas)ನ ವಸತಿ ಪ್ರದೇಶದ ಮೇಲೂ ಅಮೆರಿಕ ದಾಳಿ ನಡೆಸಿದ್ದು, ಘಟನೆಯಲ್ಲಿ ಕನಿಷ್ಠ ಇಬ್ಬರು ಗಾಯಗೊಂಡಿದ್ದಾರೆ ಎಂದು ಇರಾನ್‌ನ ಅರ್ಧ-ಅಧಿಕೃತ ಫಾರ್ಸ್ ಸುದ್ದಿ ಸಂಸ್ಥೆ ತಿಳಿಸಿದೆ.

ಮತ್ತಷ್ಟು ಭಾರೀ ದಾಳಿ ಎಚ್ಚರಿಕೆ

ಇದಕ್ಕೂ ಮುನ್ನ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ವಿರುದ್ಧ ತಮ್ಮ ಹೇಳಿಕೆಗಳನ್ನು ಮತ್ತಷ್ಟು ತೀವ್ರಗೊಳಿಸಿದ್ದರು.

ಅಮೆರಿಕದ ಆಕ್ಸಿಯೊಸ್ (Axios) ಸುದ್ದಿ ಜಾಲತಾಣಕ್ಕೆ ನೀಡಿದ ಸಂದರ್ಶನದಲ್ಲಿ, ಗಲ್ಫ್ ಪ್ರದೇಶದಲ್ಲಿರುವ ಅಮೆರಿಕದ ಮಿತ್ರ ರಾಷ್ಟ್ರಗಳ ಮೇಲೆ ಇರಾನ್ ಮತ್ತೊಮ್ಮೆ ಪ್ರತಿದಾಳಿ ನಡೆಸಿದ ಹಿನ್ನೆಲೆಯಲ್ಲಿ, ಇರಾನ್ ವಿರುದ್ಧ ಇದುವರೆಗಿನ ಅತಿದೊಡ್ಡ ದಾಳಿಯನ್ನು ನಡೆಸುವ ಬಗ್ಗೆ ಚಿಂತನೆ ನಡೆಸುತ್ತಿದ್ದೇನೆ ಎಂದು ಹೇಳಿದ್ದಾರೆ.

ವಿಶೇಷವಾಗಿ, ಕುವೈತ್‌ನಲ್ಲಿರುವ ದೂರಸಂಪರ್ಕ ಗೋಪುರದ ಮೇಲೆ ಇರಾನ್ ದಾಳಿ ನಡೆಸಿದ ನಂತರ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿದೆ ಎಂದು ತಿಳಿಸಿದ್ದಾರೆ.

"ನಾವು ಇದುವರೆಗೂ ನಡೆಸಿದ್ದಕ್ಕಿಂತಲೂ ದೊಡ್ಡ ಮಟ್ಟದ ದಾಳಿಯನ್ನು ಪರಿಗಣಿಸುತ್ತಿದ್ದೇವೆ. ಅದು ಹಿಂದಿನ ಎಲ್ಲ ಕಾರ್ಯಾಚರಣೆಗಳಿಗಿಂತಲೂ ಹೆಚ್ಚು ತೀವ್ರವಾಗಿರಲಿದೆ," ಎಂದು ಎಚ್ಚರಿಕೆ ನೀಡಿದ್ದಾರೆ.

ಉದ್ವಿಗ್ನತೆ ಮತ್ತಷ್ಟು ಹೆಚ್ಚಳ

ಸತತ 13 ದಿನಗಳಿಂದ ಅಮೆರಿಕ ಇರಾನ್ ಮೇಲೆ ವೈಮಾನಿಕ ದಾಳಿ ನಡೆಸುತ್ತಿರುವುದು ಮತ್ತು ಅದಕ್ಕೆ ಪ್ರತಿಯಾಗಿ ಇರಾನ್ ಕೂಡ ವಿವಿಧ ರೀತಿಯ ಪ್ರತಿದಾಳಿಗಳನ್ನು ಮುಂದುವರಿಸುತ್ತಿರುವುದು ಮಧ್ಯಪ್ರಾಚ್ಯದಲ್ಲಿ ಯುದ್ಧದ ವಾತಾವರಣವನ್ನು ಮತ್ತಷ್ಟು ಉಲ್ಬಣಗೊಳಿಸಿದೆ.

ಹಾರ್ಮುಜ್ ಜಲಸಂಧಿಯ ಭದ್ರತೆ, ಜಾಗತಿಕ ತೈಲ ಸರಬರಾಜು ಹಾಗೂ ಅಂತರರಾಷ್ಟ್ರೀಯ ಸಮುದ್ರ ವ್ಯಾಪಾರದ ಮೇಲೂ ಈ ಸಂಘರ್ಷದ ಪರಿಣಾಮಗಳು ಹೆಚ್ಚಾಗುವ ಸಾಧ್ಯತೆಯಿದ್ದು, ಜಾಗತಿಕ ಸಮುದಾಯ ತೀವ್ರ ಕಳವಳದಿಂದ ಬೆಳವಣಿಗೆಗಳನ್ನು ಗಮನಿಸುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕೇಂದ್ರದ ಭರವಸೆಗೆ ಮಣಿದ Sonam Wangchuk: 26 ದಿನಗಳ ಉಪವಾಸ ಅಂತ್ಯ, Dharmendra Pradhan ರಾಜೀನಾಮೆ ನೀಡದ ಹೊರತು ಪ್ರತಿಭಟನೆ ನಿಲ್ಲಲ್ಲ ಎಂದ CJP..!

NEET Paper Leak: ವಿದ್ಯಾರ್ಥಿಗಳ ಪ್ರತಿಭಟನೆ ನಡುವೆಯೇ ಕೇಂದ್ರ ಸರ್ಕಾರದಿಂದ ಮೊದಲ ಕ್ರಮ, ಶಿಕ್ಷಣ ಇಲಾಖೆ ಕಾರ್ಯದರ್ಶಿ ಎತ್ತಂಗಡಿ

INDIA bloc march to Gandhi Smriti: 'ನಮ್ಮನ್ನು ತಡೆಯಲು ಸಾಧ್ಯವೇ ಇಲ್ಲ.. ಧರ್ಮೇಂದ್ರ ಪ್ರಧಾನ್ ರಾಜಿನಾಮೆ ನೀಡಲೇಬೇಕು': ರಾಹುಲ್ ಗಾಂಧಿ

CJP Protest: 'ಕಠಿಣ ಪರಿಶ್ರಮಕ್ಕೆ ಪ್ರತಿಫಲ ಸಿಗುವ ಸಂಸ್ಕೃತಿ ಸೃಷ್ಟಿಸಬೇಕು': ಕೊನೆಗೂ ಮೌನ ಮುರಿದ Sachin Tendulkar

ಇಂಟರ್ನೆಟ್ ಸೇವೆ ಸ್ಥಗಿತ; ಇಂದು ರಾತ್ರಿ ಪ್ರತಿಭಟನೆ ದಮನ ಮಾಡುವ ಯಾವುದೇ ಯೋಜನೆ ಇಲ್ಲ: ದೆಹಲಿ ಪೊಲೀಸರು