ಢಾಕಾ: ಪ್ರಯಾಣಿಕ ಬಸ್ ವೊಂದು ಪದ್ಮಾ ನದಿಗೆ ಉರುಳಿ ಬಿದ್ದು 40ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿರುವ ಧಾರುಣ ಘಟನೆ ಬುಧವಾರ ಬಾಂಗ್ಲಾದೇಶದಲ್ಲಿ ನಡೆದಿದೆ.
ಮಾರ್ಚ್ 25 ಬುಧವಾರ ಅಂದರೆ ನಿನ್ನೆ ಬಾಂಗ್ಲಾದೇಶದ ದೌಲತ್ಡಿಯಾ ಘಾಟ್ನಲ್ಲಿ ಪದ್ಮಾ ನದಿಯಲ್ಲಿ ಈ ದುರಂತ ಸಂಭವಿಸಿದೆ. ಕೆಂಪು ಬಣ್ಣದ ಖಾಸಗಿ ಪ್ರಯಾಣಿಕ ಬಸ್ ನಿಯಂತ್ರಣ ತಪ್ಪಿ ನದಿಗೆ ಬೀಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ. ಬೃಹತ್ ಸಾರಿಗೆ ಧೋಣಿ (Ferry) ಹತ್ತಲು ಬಸ್ ಪ್ರಯತ್ನಿಸುವಾಗ ಈ ದುರಂತ ಸಂಭವಿಸಿದೆ ಎಂದು ಹೇಳಲಾಗಿದೆ.
ಕನಿಷ್ಠ 23 ಮಂದಿ ಸಾವು
ಈ ದುರಂತ ನಡೆಯುವ ಸಂದರ್ಭದಲ್ಲಿ ಬಸ್ ನಲ್ಲಿ ಸುಮಾರು 40ಕ್ಕೂ ಅಧಿಕ ಮಂದಿ ಪ್ರಯಾಣಿಕರು ಇದ್ದರು ಎಂದು ಹೇಳಲಾಗಿದೆ. ಅಪಘಾತದ ಸಮಯದಲ್ಲಿ ಕನಿಷ್ಠ 40 ಪ್ರಯಾಣಿಕರು ಬಸ್ನಲ್ಲಿದ್ದರು. ಈ ಪೈಕಿ 11 ಪ್ರಯಾಣಿಕರು ಸುರಕ್ಷಿತವಾಗಿ ಈಜಿ ದಡಸೇರುವಲ್ಲಿ ಯಶಸ್ವಿಯಾದರು ಎಂದು ಪೊಲೀಸರು ಮತ್ತು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ.
ವಿಚಾರ ತಿಳಿಯುತ್ತಲೇ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯ ಈಜುಗಾರರು ಅಪಘಾತದ ನಂತರ ಆರಂಭದಲ್ಲಿ ಎರಡು ಶವಗಳನ್ನು ಹೊರತೆಗೆಯುವಲ್ಲಿ ಯಶಸ್ವಿಯಾದರು. ಬಳಿಕ 18 ಶವಗಳನ್ನು ಕಾರ್ಯಾಚರಣೆ ಮೂಲಕ ಮೇಲಕ್ಕೆ ಎತ್ತಿದರು.
ನಂತರ, ರಕ್ಷಣಾ ಹಡಗು ಹಮ್ಜಾ ರಾತ್ರಿ 11.50 ಕ್ಕೆ ಮುಳುಗಿದ ಬಸ್ ಅನ್ನು ಮೇಲಕ್ಕೆತ್ತಿತು. ಈ ಸಮಯದಲ್ಲಿ ಇನ್ನೂ 16 ಶವಗಳು ಪತ್ತೆಯಾಗಿವೆ ಎಂದು ರಾಜ್ಬರಿ ಅಗ್ನಿಶಾಮಕ ಸೇವೆ ಮತ್ತು ನಾಗರಿಕ ರಕ್ಷಣಾ ಇಲಾಖೆಯ ಉಪ ಸಹಾಯಕ ನಿರ್ದೇಶಕ ದಿವಾನ್ ಸೊಹೆಲ್ ರಾಣಾ ತಿಳಿಸಿದ್ದಾರೆ.
ಮೃತರಲ್ಲಿ ನಾಲ್ವರು ಪುರುಷರು, ಹತ್ತು ಮಹಿಳೆಯರು ಮತ್ತು ಇಬ್ಬರು ಮಕ್ಕಳು ಎಂದು ಗುರುತಿಸಲಾಗಿದೆ. ಮೃತರಲ್ಲಿ ಇಬ್ಬರನ್ನು ರೆಹೆನಾ ಬೇಗಂ (60) ಮತ್ತು ಮರ್ಜಿನಾ ಬೇಗಂ (55) ಎಂದು ಗುರುತಿಸಲಾಗಿದೆ ಎಂದು ದೌಲತ್ಡಿಯಾ ಉಪಜಿಲ್ಲಾ ಆರೋಗ್ಯ ಸಂಕೀರ್ಣದ ನಿವಾಸ ವೈದ್ಯಾಧಿಕಾರಿ ಡಾ. ಎಂ.ಡಿ. ಶರೀಫುಲ್ ಇಸ್ಲಾಂ ದೃಢಪಡಿಸಿದ್ದಾರೆ ಎಂದು ದಿ ಡೈಲಿ ಸ್ಟಾರ್ ವರದಿ ಮಾಡಿದೆ.
ಇಷ್ಟಕ್ಕೂ ಆಗಿದ್ದೇನು?
ರಂಜಾನ್ ನಿಮಿತ್ತ ಬಾಂಗ್ಲಾದೇಶದ ರಾಜಧಾನಿ ಢಾಕಾದಿಂದ ಸುಮಾರು 40ಕ್ಕೂ ಹೆಚ್ಚು ಪ್ರಯಾಣಿಕರ ಹೊತ್ತು ತಂದಿದ್ದ ಬಸ್ ರಾಜ್ ಭರಿ ಜಿಲ್ಲೆಯ ದೌಲತ್ಡಿಯಾ ಘಾಟ್ನಲ್ಲಿ ಇದ್ದ ಬೃಹತ್ ಸಾರಿಗೆ ಧೋಣಿ (Ferry) ಹತ್ತಲು ಪ್ರಯತ್ನಿಸಿದೆ.
ಇದೇ ಸಂದರ್ಭದಲ್ಲಿ ಬಸ್ ಪಾಂಟೂನ್ನಿಂದ ದೋಣಿಯ ಕಡೆಗೆ ಹೋಗುತ್ತಿದ್ದಾಗ, ಮತ್ತೊಂದು ಸಣ್ಣ ಸಾರಿಗೆ ದೋಣಿ ಪಾಂಟೂನ್ (Ferry)ಗೆ ಢಿಕ್ಕಿ ಹೊಡೆದಿದೆ.
ಇದರಿಂದ ಬಸ್ ಚಾಲಕ ಸ್ಟೀರಿಂಗ್ ನಿಯಂತ್ರಣ ಕಳೆದುಕೊಂಡು ನೋಡ ನೋಡುತ್ತಲೇ ಬಸ್ ಹೋಗಿ ನೇರವಾಗಿ ಪದ್ಮಾನದಿಗೆ ಉರುಳಿದೆ" ಎಂದು ಟರ್ಮಿನಲ್ನ ಮೇಲ್ವಿಚಾರಕ ಮೋನಿರ್ ಹೊಸೈನ್ ಹೇಳಿದ್ದಾರೆ.
ಪ್ರಯಾಣಿಕರ ಬಸ್ ಪಾಂಟೂನ್ ಸಂಖ್ಯೆ 3 ಕ್ಕೆ ಬಂದಾಗ ಸಂಜೆ 5 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ. ಸಂಜೆ 5.15 ರ ಸುಮಾರಿಗೆ, ಹಸ್ನಾ ಹೆನಾ ಎಂಬ ಸಣ್ಣ ಉಪಯುಕ್ತ ದೋಣಿ ಪಾಂಟೂನ್ಗೆ ಬಲವಾಗಿ ಡಿಕ್ಕಿ ಹೊಡೆದಿದೆ. ಈ ಡಿಕ್ಕಿಯ ಪರಿಣಾಮವಾಗಿ ಬಸ್ ನಿಯಂತ್ರಣ ತಪ್ಪಿ ನದಿಗೆ ಬಿದ್ದಿತು ಎಂದು ಅವರು ಹೇಳಿದ್ದಾರೆ.