ಜೈಲಿನಲ್ಲಿರುವ ಪಾಕಿಸ್ತಾನ ಕ್ರಿಕೆಟ್ ದಂತಕಥೆ ಮತ್ತು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಇದೀಗ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ವರದಿಯಾಗಿದೆ. ಈ ವರದಿ ಬೆನ್ನಲ್ಲೇ ಸುನೀಲ್ ಗವಾಸ್ಕರ್, ಕಪಿಲ್ ದೇವ್, ಗ್ರೆಗ್ ಚಾಪೆಲ್ ಮತ್ತು ಕ್ಲೈವ್ ಲಾಯ್ಡ್ ಸೇರಿದಂತೆ ಹಲವಾರು ಅಂತರರಾಷ್ಟ್ರೀಯ ಕ್ರಿಕೆಟ್ ಮಾಜಿ ನಾಯಕರು ಇಮ್ರಾನ್ ಖಾನ್ ಅವರಿಗೆ 'ನ್ಯಾಯಯುತವಾಗಿ ನಡೆಸಿಕೊಳ್ಳುವಂತೆ' ಒತ್ತಾಯಿಸಿ ಪಾಕಿಸ್ತಾನ ಸರ್ಕಾರಕ್ಕೆ ಜಂಟಿ ಮನವಿ ಪತ್ರ ಸಲ್ಲಿಸಿದ್ದಾರೆ. ಈ ನಡುವೆ ಖಾನ್ ಅವರ ಸಹೋದರಿಯರು, ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಮತ್ತು ದೇಶದ ಆಂತರಿಕ ಸಚಿವ ಮೊಹ್ಸಿನ್ ನಖ್ವಿ ಇಮ್ರಾನ್ ಖಾನ್ ಅವರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇಮ್ರಾನ್ ಖಾನ್ ಸಹೋದರಿಯರಾದ ಡಾ. ಉಜ್ಮಾ ಖಾನ್ ಮತ್ತು ಅಲೀಮಾ ಖಾನ್, ಮೊಹ್ಸಿನ್ ನಖ್ವಿ ಮತ್ತು ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸೀಮ್ ಮುನೀರ್ ಅವರು ಕ್ರಿಕೆಟ್ ದಿಗ್ಗಜರನ್ನು ಕೊಲ್ಲಲು ಸಂಚು ರೂಪಿಸುತ್ತಿದ್ದಾರೆ. ಇತ್ತೀಚಿಗೆ ಭೇಟಿ ಮಾಡಿದ್ದ ವೇಳೆ ಖಾನ್ ತಮ್ಮ ಜೀವಕ್ಕೆ ಬೆದರಿಕೆಯಿದೆ ಎಂಬುದನ್ನು ತಿಳಿಸಿದ್ದಾರೆ ಎಂದು ಸಹೋದರಿಯರು ಆರೋಪಿಸಿದ್ದಾರೆ.
'ಈ ಜನರು ನನ್ನನ್ನು ಕೊಲ್ಲುತ್ತಾರೆ; ಅವರು ನನ್ನನ್ನು ಕೊಲ್ಲಲು ಯೋಜನೆ ರೂಪಿಸಿದ್ದಾರೆ' ಎಂದು ಇಮ್ರಾನ್ ಖಾನ್ ತಮಗೆ ತಿಳಿಸಿದ್ದಾಗೆ ಅವರೊಂದಿಗೆ ನಡೆಸಿದ ಸಂಭಾಷಣೆಯನ್ನು ಉಜ್ಮಾ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.
ತಮ್ಮ ಸಹೋದರನ ಕಣ್ಣಿನ ಸ್ಥಿತಿ ಹದಗೆಡುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಅಲೀಮಾ ಖಾನ್, ನಮ್ಮ ವಿಶ್ವಾಸಾರ್ಹ ವೈದ್ಯಕೀಯ ತಂಡಕ್ಕೆ ಪ್ರವೇಶ ನಿರಾಕರಿಸಲಾಗುತ್ತಿದೆ ಎಂದು ದೂರಿದರು.
'ಮೊಹ್ಸಿನ್ ನಖ್ವಿ ನಮಗೆ ಬೆದರಿಕೆ ಹಾಕುತ್ತಿದ್ದಾರೆ; ಅವರು ರಕ್ತದ ರುಚಿ ನೋಡಿದ್ದಾರೆ. ಇಮ್ರಾನ್ ಖಾನ್ ಅಥವಾ ನಮಗೆ ಏನಾದರೂ ಸಂಭವಿಸಿದರೆ, ನನ್ನ ಮಾತುಗಳನ್ನು ಗಮನಿಸಿ, ನಾವು ಯಾರ ಭವಿಷ್ಯದ ಪೀಳಿಗೆಯನ್ನೂ ಉಳಿಸುವುದಿಲ್ಲ' ಎಂದು ಅಲೀಮಾ ಹೇಳಿದ್ದಾರೆ.
ಇಮ್ರಾನ್ ಖಾನ್ ಅವರನ್ನು ಅವರ ವೈಯಕ್ತಿಕ ವೈದ್ಯರಾದ ಡಾ. ಅಸಿಮ್ ಮತ್ತು ಡಾ. ಫೈಸಲ್ ಅವರಿಂದ ಪರೀಕ್ಷಿಸಬೇಕೆಂದು ನಾವು ವಿನಂತಿಸಿದೆವು. ಆದರೆ, ಈ ವಿನಂತಿಯನ್ನು ನಿರಾಕರಿಸಲಾಯಿತು. ನಮ್ಮ ವೈದ್ಯರು ಶಿಫಾರಸು ಮಾಡಿದ ತಜ್ಞರನ್ನು ಸರ್ಕಾರ ತಿರಸ್ಕರಿಸಿತು. ಹೀಗಾಗಿ, ಪರ್ಯಾಯ ಹೆಸರುಗಳನ್ನು ನೀಡಲಾಯಿತು. ನಂತರ ನಾವು ಕುಟುಂಬವನ್ನು ಪ್ರತಿನಿಧಿಸಲು ನಮ್ಮ ಸೋದರಸಂಬಂಧಿ ನೌಶರ್ವಾನ್ ಬುರ್ಕಿ ಅವರ ಹೆಸರನ್ನು ಮುಂದಿಟ್ಟೆವು. ಅವರು ಅವರ ಹೆಸರನ್ನು ಸಹ ತಿರಸ್ಕರಿಸಿದ್ದರಿಂದ ನಮಗೆ ತುಂಬಾ ಬೇಸರವಾಗಿದೆ. ಇದು ಸ್ವೀಕಾರಾರ್ಹವಲ್ಲ!' ಎಂದಿದ್ದಾರೆ.
ಇಮ್ರಾನ್ ಖಾನ್ ಚಿಕಿತ್ಸೆಗೆ ಅಂತರರಾಷ್ಟ್ರೀಯ ನಾಯಕರ ಮನವಿ
ಪಾಕಿಸ್ತಾನದ ವಾಸಿಮ್ ಅಕ್ರಮ್, ವಕಾರ್ ಯೂನಿಸ್ ಮತ್ತು ಭಾರತದ ಕ್ರಿಕೆಟ್ ದಂತಕಥೆಗಳಾದ ಸುನೀಲ್ ಗವಾಸ್ಕರ್ ಮತ್ತು ಕಪಿಲ್ ದೇವ್ ಸೇರಿದಂತೆ 14 ಅಂತರರಾಷ್ಟ್ರೀಯ ಕ್ರಿಕೆಟ್ ಮಾಜಿ ನಾಯಕರು ಪಾಕಿಸ್ತಾನ ಸರ್ಕಾರವು ಮಾಜಿ ಪ್ರಧಾನಿಯವರ ಯೋಗಕ್ಷೇಮದ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.