ರನ್ನ ಹಲವು ಎಡರುತೊಡರುಗಳ ನಡುವೆಯೇ ಭಾರಿ ಸಕ್ಸಸ್ ಕಂಡ ಸಿನಿಮಾ. ನಿರ್ದೇಶಕ ನಂದಕಿಶೋರ್ ಪಾಲಿಗಂತೂ ರನ್ನ ಚಿತ್ರವನ್ನು ಹೊಸ ಅಗ್ನಿ ಪರೀಕ್ಷೆ ಎಂದು ಹೇಳಲಾಗುತ್ತಿತ್ತು. ಆದರೆ ಚಿತ್ರ ತೆರೆಕಂಡ ಬಳಿಕ ಮಿಶ್ರ ಪ್ರತಿಕ್ರಿಯೆ ನಡುವೆಯೇ ಗಳಿಕೆಯಲ್ಲಿ ಬರೋಬ್ಬರಿ 20 ಕೋಟಿ ಗಡಿ ದಾಟಿ ಯಶಸ್ಸಿನಿಂದ ಸಾಗಿದೆ. ರನ್ನ ಸಕ್ಸಸ್ ಖುಷಿಯ ನಡುವೆಯೇ ನಿರ್ದೇಶಕ ನಂದಕಿಶೋರ್ ತಂಡ ಮತ್ತೊಂದು ಚಿತ್ರ ತಯಾರಿಗೆ ಮುಂದಾಗಿದೆ. ಈ ಬಾರಿ ನಂದಕಿಶೋರ್ ಆಯ್ಕೆ ಪ್ರದೀಪ್. ಬಹುಶಃ ಈ ಹೆಸರು ಹೇಳಿದರೆ ಗುರುತಿಸುವುದು ಕಡಿಮೆ ಎನಿಸುತ್ತದೆ. ಸಿಸಿಎಲ್ ಟೂರ್ನಿಯ ಕರ್ನಾಟಕ ಬುಲ್ಡೋಜರ್ಸ್ ತಂಡದ ಆಟಗಾರ ಎಂದರೆ ಎಲ್ಲರಿಗೂ ಅರ್ಥವಾಗುತ್ತದೆ ಅದು ಜಾಲಿಡೇಸ್ ಪ್ರದೀಪ್ ಎಂದು.
ಜಾಲಿಡೇಸ್ ಸಕ್ಸಸ್ ಬಳಿಕ ಪ್ರದೀಪ್ ಹಲವು ಚಿತ್ರಗಳಲ್ಲಿ ನಟಿಸಿದ್ದರಾದರೂ ಅವರ ಪಾತ್ರಕ್ಕೆ ಸರಿಯಾದ ಮನ್ನಣೆ ಸಿಕ್ಕಿರಲಿಲ್ಲ. ಸುದೀಪ್ ಅಭಿನಯದ ಕೆಂಪೇಗೌಡ, ದರ್ಶನ್ ಅಭಿನಯದ ಚಿಂಗಾರಿ ಚಿತ್ರಗಳಲ್ಲಿ ಕಾಣಿಸಿಕೊಂಡರೂ ಹೇಳಿಕೊಳ್ಳುವಂತಹ ಅವಕಾಶಗಳು ಲಭಿಸಲಿಲ್ಲ. ಇನ್ನೂ ತಾವೇ ನಾಯಕನಾಗಿ ಅಭಿನಯಿಸಿದ "ರಂಗನ್ ಸ್ಟೈಲ್" ಚಿತ್ರ ಕೂಡ ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿತು. ಇದೀಗ ಪ್ರದೀಪ್ ಸ್ಯಾಂಡಲ್ ವುಡ್ ನ ಸಕ್ಸಸ್ ಫುಲ್ ಡೈರೆಕ್ಟರ್ ಎಂದೇ ಖ್ಯಾತಿ ಗಳಿಸಿರುವ ನಂದಕಿಶೋರ್ ಅವರೊಂದಿಗೆ ಚಿತ್ರವೊಂದನ್ನು ಮಾಡುತ್ತಿದ್ದಾರೆ. ಚಿತ್ರದ ಶೀರ್ಷಿಕೆ ಇನ್ನೂ ಖಚಿತವಾಗಿಲ್ಲವಾದರೂ ನಂದಕಿಶೋರ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಇನ್ನು ಚಿತ್ರಕ್ಕೆ ಪ್ರದೀಪ್ ಅವರ ಮಾವ ಕೆ ಶಿವರಾಮ್ ಅವರು ಬಂಡವಾಳ ಹೂಡುತ್ತಿದ್ದು, ರನ್ನ ಚಿತ್ರದ ಟೆಕ್ನಿಕಲ್ ತಂಡವೇ ಈ ಚಿತ್ರಕ್ಕೂ ತಾಂತ್ರಿಕ ನೆರವು ನೀಡಲಿದೆ ಎಂದು ತಿಳಿದುಬಂದಿದೆ.
ಈಗಾಗಲೇ ನಿರ್ದೇಶಕ ನಂದಕಿಶೋರ್ ಅವರು ಚಿತ್ರದ ಹಾಡುಗಳ ಸಂಯೋಜನೆಗಾಗಿ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರೊಂದಿಗೆ ಬಿಸಿಯಾಗಿದ್ದು, ಚಿತ್ರದ ಮುಹೂರ್ತ ಕೂಡ ನಡೆದಿದೆ. ಶರಣ್ ಅಭಿನಯದ ವಿಕ್ಟರಿ ಮತ್ತು ಅಧ್ಯಕ್ಷ, ಸುದೀಪ್ ಅಭಿನಯದ ರನ್ನ ಸಕ್ಸಸ್ ಬಳಿಕ ನಂದಕಿಶೋರ್ ಆತ್ಮವಿಶ್ವಾಸ ಹೆಚ್ಚಾಗಿದ್ದು, ಈ ಬಾರಿ ವಿನೂತನ ಚಿತ್ರಕಥೆಯೊಂದಿಗೆ ಪ್ರದೀಪ್ ರನ್ನು ತೆರೆಗೆ ತರುವ ಕಾಯಕದಲ್ಲಿ ತೊಡಗಿದ್ದಾರೆ. ಈ ಬಗ್ಗೆ ಮಾತನಾಡಿರುವ ನಿರ್ದೇಶಕ ನಂದಕಿಶೋರ್, "ಪ್ರದೀಪ್ ನನಗೇನೂ ಹೊಸಬನಲ್ಲ. ಇದಕ್ಕೂ ಮೊದಲು ಸಿಸಿಎಲ್ ಪಂದ್ಯಾವಳಿಯ ಸಮಯದಲ್ಲಿ ನಾನು ಪ್ರದೀಪ್ ಹಲವು ಭಾರಿ ಭೇಟಿಯಾಗಿದ್ದೇವೆ. ಚರ್ಚಿಸಿದ್ದೇವೆ. ಸುಮಾರು ನಾಲ್ಕು ವರ್ಷದಿಂದ ಪ್ರದೀಪ್ ಪರಿಚಯವಿದ್ದು, ಆತನ ಸಕಾರಾತ್ಮಕ ಮತ್ತು ನಕಾರಾತ್ಮಕ ಅಂಶಗಳ ಕುರಿತು ನನಗರಿವಿದೆ. ಪ್ರದೀಪ್ ಪ್ರಸ್ತುತ ಸಾಹಸ ಮತ್ತು ನೃತ್ಯ ತರಬೇತಿ ಪಡೆಯುತ್ತಿದ್ದು, ಶೀಘ್ರದಲ್ಲಿಯೇ ಚಿತ್ರೀಕರಣ ಆರಂಭಿಸುತ್ತೇವೆ" ಎಂದು ಹೇಳಿದ್ದಾರೆ.
ಸುದೀಪ್ ಜೊತೆ ಎರಡನೇ ಚಿತ್ರ ಸದ್ಯಕ್ಕಿಲ್ಲ
ಇದೇ ವೇಳೆ ರನ್ನ ಸಕ್ಸಸ್ ಬೆನ್ನಹಿಂದೆಯೇ ನಂದಕಿಶೋರ್ ಸುದೀಪ್ ಅವರೊಂದಿಗೆ ಎರಡನೇ ಚಿತ್ರದಲ್ಲಿ ತೊಡಗಲಿದ್ದಾರೆ ಎಂದು ಹಬ್ಬಿದ್ದ ಊಹಾಪೋಹಗಳನ್ನು ನಂದಕಿಶೋರ್ ಅವರು ತಳ್ಳಿಹಾಕಿದ್ದು, ಸುದೀಪ್ ರೊಂದಿಗೆ ಎರಡನೇ ಚಿತ್ರದ ಅವಕಾಶ ಲಭಿಸಿದರೆ ತುಂಬಾನೆ ಖುಷಿಯಾಗುತ್ತದೆ. ಆದರೆ ಪ್ರಸ್ತುತ ಇಬ್ಬರು ನಮ್ಮ ಪೂರ್ವ ನಿರ್ಧಾರಿತ ಯೋಜನೆಗಳಲ್ಲಿ ತೊಡಗಿರುವುದರಿಂದ ಎರಡನೇ ಚಿತ್ರದ ಮಾತು ಸಧ್ಯಕ್ಕಿಲ್ಲ. ಭವಿಷ್ಯದಲ್ಲಿ ಆ ಅವಕಾಶ ಲಭಿಸಿದರೆ ಖಂಡಿತ ಸಂತೋಷದಿಂದ ಮಾಡುತ್ತೇನೆ. ಪ್ರಸ್ತುತ ನಾನು ಪ್ರದೀಪ್ ಅವರ ಚಿತ್ರದಲ್ಲಿ ತೊಡಗಿದ್ದು, ಆ ಬಳಿಕ ಶ್ರೀ ಮುರಳಿ ಅವರೊಂದಿಗೆ ಚಿತ್ರವೊಂದನ್ನು ಮಾಡುತ್ತಿದ್ದೇನೆ. ನಂತರ ಪುನೀತ್ ರಾಜ್ ಕುಮಾರ್ ಅವರೊಂದಿಗೆ ಚಿತ್ರ ಮಾಡುತ್ತಿದ್ದೇನೆ. ಈ ಮೂರು ಚಿತ್ರಗಳಾದ ಬಳಿಕವೇ ಮುಂದಿನ ಚಿತ್ರಗಳಲ್ಲಿ ತೊಡಗಲಿದ್ದೇನೆ ಎಂದು ನಂದಕಿಶೋರ್ ಸ್ಪಷ್ಟಡಿಸಿದ್ದಾರೆ.
Advertisement