ಬೆಂಗಳೂರು: ಲೂಸ್ ಮಾದ ಖ್ಯಾತಿಯ ನಟ ಯೋಗೀಶ್ ಅವರಿಗೆ ಕಂಕಣ ಭಾಗ್ಯ ಕೂಡಿ ಬಂದಿದ್ದು, ತಮ್ಮ ಬಾಲ್ಯದ ಗೆಳತಿ ಸಾಹಿತ್ಯ ಅವರೊಂದಿಗೆ ಯೋಗಿ ನಿಶ್ಚಿತಾರ್ಥ ಕಾರ್ಯಕ್ರಮ ಭಾನುವಾರ ನೆರವೇರಿದೆ.
ಬೆಂಗಳೂರಿನ ಯಡಿಯೂರು ಕೆರೆ ಬಳಿಯಿರುವ ಸಾಹಿತ್ಯ ಅವರ ನಿವಾಸದಲ್ಲಿ ಯೋಗಿ ನಿಶ್ಚಿತಾರ್ಥ ಕಾರ್ಯಕ್ರಮ ನೆರವೇರಿದ್ದು, ಎರಡೂ ಕುಟುಂಬದ ಸದಸ್ಯರು ಮತ್ತು ಕೆಲವೇ ಅತ್ಯಾಪ್ತರು ಮಾತ್ರ ಸಮಾರಂಭದಲ್ಲಿ ಭಾಗಿಯಾಗಿದ್ದರು. ಸಾಹಿತ್ಯ ಮೈಸೂರಿನ ಅರಸು ಕುಟುಂಬದವರಾಗಿದ್ದು, ಬೆಂಗಳೂರಿನ ಕಂಪನಿಯೊಂದರಲ್ಲಿ ಸಾಫ್ಟ್ ವೇರ್ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದಾರೆ.
ಕುಟುಂಬದ ಮೂಲಗಳು ತಿಳಿಸಿರುವಂತೆ ಯೋಗಿ ಮತ್ತು ಸಾಹಿತ್ಯ ಅವರು, ಯಡಿಯೂರಿನ ಎಸ್ ವಿಕೆ ಶಾಲೆಯಲ್ಲಿ 1ನೇ ತರಗತಿಯಿಂದ 10ನೇ ತರಗತಿವರೆಗೂ ಒಟ್ಟಿಗೆ ವ್ಯಾಸಂಗ ಮಾಡಿದ್ದರಂತೆ. ಬಳಿಕ ಇವರಿಬ್ಬರ ನಡುವಿನ ಸ್ನೇಹಿ ಪ್ರೀತಿಯಾಗಿ ಬದಲಾಗಿದ್ದು, ಎರಡೂ ಕುಟುಂಬದವರು ಒಪ್ಪಿಗೆ ಸೂಚಿಸಿದ್ದಾರೆ. ಮುಂಬರುವ ನವೆಂಬರ್ 2ರಂದು ಮದುವೆ ಕಾರ್ಯಕ್ರಮ ನಡೆಸಲು ಗುರು ಹಿರಿಯರು ನಿಶ್ಚಯಿಸಿದ್ದು, ಕನಕಪುರ ರಸ್ತೆಯ ಶ್ರೀ ಕನ್ವೆನ್ಷನ್ ಸೆಂಟರ್ ನಲ್ಲಿ ಯೋಗಿ-ಸಾಹಿತ್ಯ ಮದುವೆ ಸಮಾರಂಭ ನೆರವೇರಲಿದೆ ಎಂದು ತಿಳಿದುಬಂದಿದೆ.
Advertisement