ಬೆಂಗಳೂರು: ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ಗರಡಿ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿದ್ದು, ರಾಜ್ಯಾದ್ಯಂತ ಭರ್ಜರಿ ಓಪನಿಂಗ್ ಕಂಡಿದೆ.
ಕುಸ್ತಿ ಕ್ರೀಡೆ ಆಧಾರಿತ ಚಿತ್ರದಲ್ಲಿ ನಟ ದರ್ಶನ್ ತೂಗುದೀಪ್, ಕೌರವ ಖ್ಯಾತಿಯ ನಟ ಬಿಸಿ ಪಾಟೀಲ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ರಾಜ್ಯಾದ್ಯಂತ ಉತ್ತಮ ಪ್ರದರ್ಶನ ಕಾಣುತ್ತಿದೆ. ಈಗಾಗಲೇ ಚಿತ್ರದ ಮೊದಲ ಪ್ರದರ್ಶನ ಮುಕ್ತಾಯಗೊಂಡಿದ್ದು, ಚಿತ್ರದ ಕುರಿತು ಪ್ರೇಕ್ಷಕರು ಸಾಕಾರಾತ್ಮಕ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಪ್ರಮುಖವಾಗಿ ಚಿತ್ರದ ನಾಯಕ ನಟ ಯಶಸ್ ಸೂರ್ಯ ನಟನೆ ಇಷ್ಟವಾಗಿದೆ. ಚಿತ್ರದಲ್ಲಿ ನಟ ದರ್ಶನ್ ತೂಗುದೀಪ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಇದು ದರ್ಶನ್ ಅಭಿಮಾನಿಗಳಿಗೆ ಸಂತಸ ತಂದಿದೆ. ದರ್ಶನ್ ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೂ ಅದು ಚಿತ್ರದಲ್ಲಿನ ಪ್ರಭಾವಿ ಪಾತ್ರ ಎನ್ನಲಾಗಿದೆ.
'ಗರಡಿ' ಸಿನಿಮಾದ ಕ್ಲೈಮ್ಯಾಕ್ಸ್ನಲ್ಲಿ ದರ್ಶನ್ ಅವರ ಎಂಟ್ರಿ ಇದೆ. ಆರಂಭದಿಂದಲೂ ಈ ಸಿನಿಮಾದಲ್ಲಿ ಅವರ ಪಾತ್ರವೇನು ಎಂಬ ಸೂಚನೆ ಪ್ರೇಕ್ಷಕರಿಗೆ ಮೊದಲೇ ಸಿಕ್ಕಿರುತ್ತದೆ. ಆದರೂ ಅವರ ಎಂಟ್ರಿ ಹೇಗಿರುತ್ತದೆ ಎಂಬ ಕುತೂಹಲ ಮಾತ್ರ ಕೊನೆವರೆಗೂ ಇರುತ್ತದೆ. ಸಿನಿಮಾದ ಕೊನೆಯ 20 ನಿಮಿಷ ಅವಧಿಯನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುವ ದರ್ಶನ್, ಮಸ್ತ್ ಡೈಲಾಗ್ ಹೊಡೆಯುತ್ತ, ವಿಲನ್ಗಳು ಸುಸ್ತು ಆಗುವವರೆಗೂ ಚಚ್ಚಿ ಹಾಕುತ್ತಾರೆ. ಇದು ದರ್ಶನ್ ಫ್ಯಾನ್ಸ್ಗೆ ಹಬ್ಬವೇ ಸರಿ.
ಸ್ಕ್ರೀನ್ ನಿಲ್ಲಿಸಿ ಆರತಿ ಮಾಡಿದ ಚನ್ನಪಟ್ಟಣದ ಅಭಿಮಾನಿ
ಇತ್ತ ಚಿತ್ರದಲ್ಲಿ ನಟ ದರ್ಶನ್ ಎಂಟ್ರಿ ಸೀನ್ ಬರುತ್ತಲೇ ಸ್ಕ್ರೀನಿಂಗ್ ಅನ್ನು ಕೆಲಕಾಲ ಪಾಸ್ ಮಾಡಿದ ಅಭಿಮಾನಿಗಳು ದರ್ಶನ್ ಸೀನ್ ಗೆ ಆರತಿ ಮಾಡಿ ಕುಂಬಳಕಾಯಿ ಹೊಡೆದು ತಮ್ಮ ಪ್ರೀತಿ ತೋರಿಸಿದ್ದಾರೆ. ಮಹಿಳಾ ಅಭಿಮಾನಿಗಳು ಕೂಡ ಚಿತ್ರ ಮಂದಿರದ ವೇದಿಕೆ ಮೇಲೆ ಹತ್ತಿ ಕುಣಿದುಕುಪ್ಪಳಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಅಂದಹಾಗೆ ಗರಡಿ ಚಿತ್ರ ರಾಜ್ಯಾದ್ಯಂತ ಸುಮಾರು 180ಕ್ಕೂ ಅಧಿೃಕ ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗಿದೆ.
Advertisement