

ಬೆಂಗಳೂರು: ತುಳುನಾಡಿನ ದೈವಕ್ಕೆ ʻಹೆಣ್ಣು ದೆವ್ವʼ ಎಂದು ಅಪಮಾನ ಮಾಡಿ, ಕ್ಷಮೆಯಾಚಿಸಿದರೂ ಬಾಲಿವುಡ್ ನಟ ರಣವೀರ್ ಸಿಂಗ್ ಸಂಕಷ್ಟ ಇನ್ನೂ ತಪ್ಪಿಲ್ಲ. ರಣವೀರ್ ಹೇಳಿಕೆ ವಿರುದ್ಧ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ನಟನ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಕೋರಿ ವಕೀಲ ಪ್ರಶಾಂತ್ ಮೆಥಲ್ ಎಂಬುವವರು ಡಿ.3ರಂದು ದೂರು ನೀಡಿದ್ದರು. ದೂರು ಆಧರಿಸಿ ಪೊಲೀಸರು ಎನ್ಸಿಆರ್ ದಾಖಲಿಸಿಕೊಂಡಿದ್ದರು. ಈಗ ನ್ಯಾಯಾಲಯದ ಸೂಚನೆಯ ಮೇರೆಗೆ ಎಫ್ಐಆರ್ ದಾಖಲು ಮಾಡಿಕೊಂಡಿದ್ದಾರೆ.
ರಣವೀರ್ ಸಿಂಗ್ ಅವರು ಹಿಂದೂಗಳು ಹಾಗೂ ಕರ್ನಾಟಕದ ತುಳು ಭಾಷಿಕರ ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆಯಿಂದ ನೋವು ಉಂಟಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.
2025ರ ನವೆಂಬರ್ನಲ್ಲಿ ಗೋವಾದಲ್ಲಿ ಇಂಟರ್ ನ್ಯಾಷನಲ್ ಫಿಲ್ಮ್ಫೆಸ್ಟಿವಲ್ ನಡೆದಿತ್ತು. ಈ ವೇಳೆ ರಿಷಬ್ ಶೆಟ್ಟಿ ನಟನೆಯನ್ನ ಹೊಗಳಲು ಮುಂದಾಗಿ ಬಾಲಿವುಡ್ ನಟ ಯಡವಟ್ಟು ಮಾಡಿಕೊಂಡಿದ್ದರು. ಕಾಂತಾರ ಚಿತ್ರದ ದೈವವನ್ನು ‘ಹೆಣ್ಣು ದೆವ್ವ’ ಎಂದು ಹೇಳಿ ಟೀಕೆಗೆ ಗುರಿಯಾಗಿದ್ದರು.
ರಿಷಬ್ ಅವರ ಕಾಂತಾರ ಸಿನಿಮಾವನ್ನ ಥಿಯೇಟರ್ನಲ್ಲಿ ನಾನು ನೋಡಿದೆ. ಅದ್ಭುತವಾಗಿತ್ತು ನಿಮ್ಮ ನಟನೆ. ಅದರಲ್ಲೂ ಹೆಣ್ಣು ದೆವ್ವ ನಿಮ್ಮ ಮೈಸೇರುವ ದೃಶ್ಯವಂತೂ ಅತ್ಯದ್ಭುತವಾಗಿತ್ತು. ಆ ದೃಶ್ಯದಲ್ಲಿ ನಿಮ್ಮ ನಟನೆ ಹಾಗೂ ನಿಮ್ಮ ನೋಟ ಮಜವಾಗಿತ್ತು ಅಂತ ರಣವೀರ್ ಸಿಂಗ್ ಅನುಕರಣೆ ಮಾಡಿದ್ದರು. ರಣವೀರ್ ಮಾಡಿದ ಅಪಹಾಸ್ಯಕ್ಕೆ ದೈವಾರಾಧಕರು ಆಕ್ರೋಶ ಹೊರಹಾಕಿದ್ದರು. ಆ ಬಳಿಕ ರಣವೀರ್ ಸಿಂಗ್ ಕ್ಷಮೆ ಕೋರಿದ್ದರು
Advertisement