

ಬೆಂಗಳೂರು: ಬಹು ನಿರೀಕ್ಷಿತ ಬಿಗ್ ಬಾಸ್ ಸೀಸನ್ 13 ಆರಂಭವಾಗಿದ್ದು, ಶೋ ಆರಂಭವಾದ ಮೊದಲ ದಿನದಿಂದಲೇ ಒಂದಲ್ಲಾ ಒಂದು ಕಾರಣಕ್ಕೆ ಸುದ್ದಿಗೆಯಾಗುತ್ತಿದೆ.
ಹೌದು.. ಬಿಗ್ ಬಾಸ್ ಮನೆಯಲ್ಲಿ ಹಲವು ನಿಯಮಗಳಿದ್ದು, ಅವುಗಳನ್ನು ಪ್ರತಿಯೊಬ್ಬ ಸ್ಪರ್ಧಿಯೂ ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ. ಅದರಲ್ಲೂ ಮನೆಯ ಮೂಲ ನಿಯಮಗಳನ್ನು ಉಲ್ಲಂಘಿಸಿದರೆ ವಾರಾಂತ್ಯದ ಪಂಚಾಯ್ತಿಯಲ್ಲಿ ಕಿಚ್ಚ ಸುದೀಪ್ ಅವರಿಂದ ಕ್ಲಾಸ್ ಸಿಗುವುದು ಖಚಿತ.
ಇದೀಗ ಗಗನ್ ಚಿನ್ನಪ್ಪ ಹಾಗೂ ತಾಂಡವ್ ರಾಮ್ ಇದೇ ವಿಚಾರದಲ್ಲಿ ಕಿಚ್ಚನ ಕ್ಲಾಸ್ ಎದುರಿಸುವ ಸಾಧ್ಯತೆ ಎದುರಾಗಿದೆ. ಬಿಗ್ ಬಾಸ್ ಮನೆಯಲ್ಲಿ ಯಾರನ್ನು ನಾಮಿನೇಟ್ ಮಾಡಬೇಕು ಎಂಬುದು ಸಂಪೂರ್ಣವಾಗಿ ಸ್ಪರ್ಧಿಗಳ ವೈಯಕ್ತಿಕ ನಿರ್ಧಾರವಾಗಿರಬೇಕು. ಆದರೆ, ಗಗನ್ ಹಾಗೂ ತಾಂಡವ್ ಈ ವಿಚಾರದಲ್ಲಿ ಚರ್ಚೆ ನಡೆಸಿರುವುದು ಕಂಡುಬಂದಿದೆ.
ಮಂಜು ಟಾರ್ಗೆಟ್?
ಈ ವಾರ ಯಾರನ್ನು ನಾಮಿನೇಟ್ ಮಾಡಬೇಕು ಎಂಬುದರ ಬಗ್ಗೆ ಇಬ್ಬರೂ ಮಾತುಕತೆ ನಡೆಸಿದ್ದು, ತಮ್ಮ ಆಯ್ಕೆಗೆ ಮನೆಯ ಇತರ ಸ್ಪರ್ಧಿಗಳ ಬೆಂಬಲ ಪಡೆಯುವ ಬಗ್ಗೆಯೂ ಯೋಜನೆ ರೂಪಿಸಿದ್ದಾರೆ. ‘ನೀನು ಯಾರನ್ನು ನಾಮಿನೇಟ್ ಮಾಡ್ತೀಯಾ?’ ಎಂದು ಗಗನ್ ಅವರು ತಾಂಡವ್ ಬಳಿ ಪ್ರಶ್ನಿಸಿದ್ದಾರೆ. ಇದಕ್ಕೆ ತಾಂಡವ್ ಅವರು ‘ಮಾಡರ್ನ್ ಮಹಾಕವಿ ಮಂಜು’ ಅವರ ಹೆಸರನ್ನು ಹೇಳಿದ್ದಾರೆ.
ಬಳಿಕ ಮಂಜು ಅವರನ್ನು ನಾಮಿನೇಟ್ ಮಾಡುವಂತೆ ಸಂಗೀತಾ ಸೇರಿದಂತೆ ಇತರ ಸ್ಪರ್ಧಿಗಳನ್ನು ಒಲಿಸಿಕೊಳ್ಳುವ ಕುರಿತು ಇಬ್ಬರೂ ಚರ್ಚೆ ನಡೆಸಿದ್ದಾರೆ.
ಆದರೆ, ನಾಮಿನೇಷನ್ ವಿಚಾರದಲ್ಲಿ ಈ ರೀತಿಯ ಚರ್ಚೆ ನಡೆಸಿರುವುದು ಬಿಗ್ ಬಾಸ್ ಮನೆಯ ಮೂಲ ನಿಯಮಕ್ಕೆ ವಿರುದ್ಧವಾಗಿದ್ದು, ಈ ವಾರಾಂತ್ಯದ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಈ ವಿಚಾರವನ್ನು ಚರ್ಚೆಗೆ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ವೀಕ್ಷಕರು ಅಭಿಪ್ರಾಪಡುತ್ತಿದ್ದಾರೆ.
ಈಗಾಗಲೇ ಗಗನ್ ಹಾಗೂ ತಾಂಡವ್ ಮನೆಯೊಳಗೆ ಒಂದು ತಂಡದಂತೆ ಕಾಣಿಸಿಕೊಂಡಿದ್ದು, ಆಟದ ವಿಚಾರದಲ್ಲಿ ಹಲವು ತಂತ್ರಗಳನ್ನು ರೂಪಿಸುತ್ತಿದ್ದಾರೆ. ಆದರೆ, ನಾಮಿನೇಷನ್ ಬಗ್ಗೆ ಇಬ್ಬರೂ ಮಾಡಿಕೊಂಡಿರುವ ಈ ಚರ್ಚೆಯೇ ಅವರಿಗೆ ತಿರುಗೇಟು ನೀಡುವ ಸಾಧ್ಯತೆ ಇದೆ. ಮೊದಲ ವಾರವೇ ಕಿಚ್ಚನಿಂದ ಕ್ಲಾಸ್ ಸಿಗುತ್ತದೆಯೇ ಎಂಬುದಕ್ಕೆ ವಾರಾಂತ್ಯದ ಸಂಚಿಕೆಯವರೆಗೆ ಕಾಯಬೇಕಿದೆ.