

ಬೆಂಗಳೂರು: ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲೂ ಭಾರತ ಸೋಲಿನ ಸುಳಿಗೆ ಸಿಲುಕಿದ್ದು, ಆಸ್ಟ್ರೇಲಿಯಾಗೆ ಗೆಲ್ಲಲು ಕೇವಲ 188 ರನ್ ಗಳ ಅಲ್ಪ ಗುರಿ ನೀಡಿದೆ.
ನಿನ್ನೆ 4 ವಿಕೆಟ್ ನಷ್ಟಕ್ಕೆ 213 ರನ್ ಗಳಿಸಿದ್ದ ಭಾರತ ಇಂದು ನಾಲ್ಕನೇ ದಿನದಾಟದ ಆರಂಭದಲ್ಲೇ ಉಳಿದೆಲ್ಲ ವಿಕೆಟ್ ಗಳನ್ನು ಕಳೆದುಕೊಂಡಿತು. ನಿನ್ನೆ 40 ರನ್ ಗಳಿಸಿ ಅಜೇಯರಾಗಿ ಉಳಿದಿದ್ದ ರಹಾನೆ ಇಂದು ಅರ್ಧಶತಕ ಸಿಡಿಸುತ್ತಿದ್ದಂತೆಯೇ ಸ್ಟ್ರಾಕ್ ಬೌಲಿಂಗ್ ನಲ್ಲಿ ಎಲ್ ಬಿ ಬಲೆಗೆ ಬಿದ್ದರು. ಬಳಿಕ ಬಂದ ನಾಯರ್ ಕೂಡ ಬಂದಷ್ಟೇ ವೇಗವಾಗಿ ಶೂನ್ಯ ಸುತ್ತಿ ಪೆವಿಲಿಯನ್ ಸೇರಿಕೊಂಡರು. ಅಜೇಯ 79 ರನ್ ಗಳಿಸಿ ಅಜೇಯರಾಗಿದ್ದ ಪೂಜಾರ ಇಂದು ತಮ್ಮ ರನ್ ಗಳಿಕೆಯನ್ನು 92ಕ್ಕೆ ಏರಿಸಿಕೊಂಡು ಶತಕ ಸಿಡಿಸುವ ಭರವಸೆಯಲ್ಲಿದ್ದರು. ಆದರೆ ಈ ಹಂತದಲ್ಲಿ ಪೂಜಾರ ಹೇಜಲ್ ವುಡ್ ಬೌಲಿಂಗ್ ನಲ್ಲಿ ಕ್ಯಾಚಿತ್ತು ಹೊರ ನಡೆದರು.
ಆ ಮೂಲಕ ಭಾರತದ ಭರವಸೆಯೇ ಇಲ್ಲದಂತಾಯಿತು. ಬಳಿಕ ಬಂದ ಯಾವೊಬ್ಬ ಬ್ಯಾಟ್ಸಮನ್ ಕೂಡ ಕ್ರೀಸ್ ನಲ್ಲಿ ಗಟ್ಟಿಯಾಗಿ ನಿಲ್ಲುವ ಪ್ರಯತ್ನ ಮಾಡಲೇ ಇಲ್ಲ. ಅಶ್ವಿನ್ 4 ರನ್, ಯಾದವ್ 1 ರನ್, ಇಶಾಂತ್ ಶರ್ಮಾ 6 ರನ್ ಗಳಿಸಿ ತಮ್ಮ ತಮ್ಮ ವಿಕೆಟ್ ಒಪ್ಪಿಸಿದರು. ಅಂತಿಮವಾಗಿ ಭಾರತ 274 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ಆ ಮೂಲಕ ಆಸ್ಟ್ರೇಲಿಯಾಗೆ ಗೆಲ್ಲಲು 188 ರನ್ ಗಳ ಅಲ್ಪ ಗುರಿ ನೀಡಿದೆ.
ಇನ್ನು ಬೌಲಿಂಗ್ ನಲ್ಲಿ ಭಾರತದ ಆರು ಪ್ರಮುಖ ವಿಕೆಟ್ ಕಬಳಿಸಿದ ಹೇಜಲ್ ವುಡ್ ಭಾರತದ ದಿಢೀರ್ ಪತನಕ್ಕೆ ಕಾರಣರಾದರೆ, ಸ್ಟಾರ್ಕ್ ಮತ್ತು ಒಕೀಫ್ ತಲಾ 2 ವಿಕೆಟ್ ಪಡೆದರು.
Advertisement