ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ-ಆಸ್ಟ್ರೇಲಿಯಾ ನಡುವೆ ನಾಳೆ ನಿರ್ಣಾಯಕ ಪಂದ್ಯ 

ತಲಾ ಒಂದೊಂದು ಪಂದ್ಯದಲ್ಲಿ ಜಯಿಸಿ 1-1 ಸಮಬಲ ಸಾಧಿಸಿರುವ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ನಾಳೆ ಇಲ್ಲಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸರಣಿ ಗೆಲ್ಲುವ ಮಹದಾಸೆಯೊಂದಿಗೆ ಮೂರನೇ ಹಾಗೂ ಪ್ರಶಸ್ತಿ ನಿರ್ಣಾಯಕ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.
ಭಾರತ, ಆಸ್ಟ್ರೇಲಿಯಾ ತಂಡಗಳು
ಭಾರತ, ಆಸ್ಟ್ರೇಲಿಯಾ ತಂಡಗಳು

ಬೆಂಗಳೂರು: ತಲಾ ಒಂದೊಂದು ಪಂದ್ಯದಲ್ಲಿ ಜಯಿಸಿ 1-1 ಸಮಬಲ ಸಾಧಿಸಿರುವ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ನಾಳೆ ಇಲ್ಲಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸರಣಿ ಗೆಲ್ಲುವ ಮಹದಾಸೆಯೊಂದಿಗೆ ಮೂರನೇ ಹಾಗೂ ಪ್ರಶಸ್ತಿ ನಿರ್ಣಾಯಕ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.
 
ವಿಶ್ವ ಕ್ರಿಕೆಟ್ ನಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಶ್ರೇಷ್ಠ ತಂಡಗಳು ಎಂದು ಮತ್ತೊಮ್ಮೆ ಸಾಬೀತು ಪಡೆಸಿವೆ. ಮುಂಬೈ ವಾಂಖೆಡೆ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ತಂಡ 10 ವಿಕೆಟ್ ಗಳಿಂದ ಭಾರತ ತಂಡವನ್ನು ಮಣಿಸಿ ಪ್ರಾಬಲ್ಯ ಸಾಧಿಸಿತ್ತು. ಭಾರತ ನೀಡಿದ್ದ 256 ರನ್ ಗುರಿ ಹಿಂಬಾಲಿಸಿದ್ದ ಆಸ್ಟ್ರೇಲಿಯಾ ಡೇವಿಡ್ ವಾರ್ನರ್ ಹಾಗೂ ಆ್ಯರೋನ್ ಫಿಂಚ್ ಅವರ ತಲಾ ಶತಕಗಳ ಬಲದಿಂದ ಪ್ರವಾಸಿಗರು ಸುಲಭವಾಗಿ ಗೆದ್ದಿದ್ದರು.
 
ಮೊದಲನೇ ಪಂದ್ಯದಲ್ಲಿ ಭಾರತದ ಬ್ಯಾಟಿಂಗ್ ಲೈನ್ ಅಪ್ ಸಾಕಷ್ಟು ಬದಲಾವಣೆ ಮಾಡಿದ್ದು ಪಂದ್ಯದ ಫಲಿತಾಂಶದ ಮೇಲೆ ಗಂಭೀರ ಪರಿಣಾಮ ಬೀರಿತ್ತು. ನಾಯಕ ವಿರಾಟ್, ನಾಲ್ಕನೇ ಕ್ರಮಾಂಕದಲ್ಲಿ ಆಡುವ ಮೂಲಕ ಕೆ.ಎಲ್ ರಾಹುಲ್ ಗೆ ಮೂರನೇ ಕ್ರಮಾಂಕ ಬಿಟ್ಟುಕೊಟ್ಟಿದ್ದರು. ಇದು ತಂಡಕ್ಕೆ ಲಾಭವಾಗಿರಲಿಲ್ಲ. ಹಾಗಾಗಿ, ಭಾರತ ಬ್ಯಾಟಿಂಗ್ ನಲ್ಲಿ ವಿಫಲವಾಗಿತ್ತು.
 
ರಾಜ್ ಕೋಟ್ ಪಂದ್ಯದಲ್ಲಿ ಕೊಹ್ಲಿ ಎಂದಿನಂತೆ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದರು. ಆರಂಭಿಕರಾಗಿ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಆಡಿದ್ದರು. ಆದರೆ. ಕೆ.ಎಲ್ ರಾಹುಲ್ ಐದನೇ ಕ್ರಮಾಂಕದಲ್ಲಿ ಕಣಕ್ಕೆ ಇಳಿದಿದ್ದರು. ರೋಹಿತ್ ಶರ್ಮಾ ಬಿಟ್ಟರೆ, ಈ ಮೂವರು ಅರ್ಧಶತಕ ಗಳಿಸಿದ್ದರು. ಕೆ.ಎಲ್ ರಾಹುಲ್ ಸ್ಫೋಟಕ 80 ರನ್ ಗಳಿಸಿ ಮಧ್ಯಮ ಕ್ರಮಾಂಕದಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು.
 
ಮೊದಲನೇ ಪಂದ್ಯದಲ್ಲಿ ನೀರಸ ಪ್ರದರ್ಶನ ತೋರಿದ್ದ ಭಾರತದ ಬೌಲಿಂಗ್ ವಿಭಾಗ ಎರಡನೇ ಪಂದ್ಯದಲ್ಲಿ ಪುಟಿದೆದ್ದಿತು. ನವದೀಪ್ ಸೈನಿ, ಮೊಹಮ್ಮದ್ ಸೈನಿ ತಡವಾಗಿ ಆಸ್ಟ್ರೇಲಿಯಾ ತಂಡಕ್ಕೆ ಆಘಾತ ನೀಡಿದ್ದರು. ಸ್ಪಿನ್ನರ್ ರವೀಂದ್ರ ಜಡೇಜಾ ಹಾಗೂ ಕುಲ್ದೀಪ್ ಯಾದವ್ ಕೂಡ ಅಗತ್ಯ ಸನ್ನಿವೇಶಗಳಲ್ಲಿ ವಿಕೆಟ್ ಕಿತ್ತಿದ್ದರು. ಇದು ಪಂದ್ಯದ ದಿಕ್ಕನ್ನೇ ಬದಲಿಸಿತು.
 
ರಾಜ್ ಕೋಟ್ ನಲ್ಲಿ ದುಬಾರಿಯಾಗಿದ್ದ ಆಸ್ಟ್ರೇಲಿಯಾ ತಂಡದ ಬೌಲಿಂಗ್ ವಿಭಾಗದಲ್ಲಿ ಬದಲಾವಣೆ ಮಾಡುವ ಸಾಧ್ಯತೆ ಇದೆ. ಆತಿಥೇಯರ ಪಾಳಯದಲ್ಲಿ ಶಿಖರ್ ಧವನ್ ಅವರು ಬ್ಯಾಟಿಂಗ್ ವೇಳೆ ಚೆಂಡು ತಗುಲಿಸಿಕೊಂಡಿದ್ದರು. ರೋಹಿತ್ ಪೀಲ್ಡಿಂಗ್ ವೇಳೆ ಬೌಂಡರಿ ತಡೆಯುವ ಭರದಲ್ಲಿ ಎಡ ಭಜಕ್ಕೆ ತಗುಲಿಸಿಕೊಂಡಿದ್ದರು. ಇದೀಗ ಇವರಿಬ್ಬರ ಗಾಯದ ಪ್ರಮಾಣದ ಆಧಾರದ ಮೇಲೆ ಬದಲಾವಣೆ ಅಗತ್ಯವಿದ್ದರೆ ಮಾಡಬಹುದು.
 
ಮತ್ತೊಂದೆಡೆ ಮುಂಬೈ ವಾಂಖೆಡೆ ಕ್ರೀಡಾಂಗಣದಲ್ಲಿ ಗಾಯಗೊಂಡು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಚೇತರಿಸಿಕೊಳ್ಳುತ್ತಿರುವ ರಿಷಭ್ ಪಂತ್ ಅವರ ಲಭ್ಯತೆ ಬಗ್ಗೆ ಮಾಹಿತಿ ಇಲ್ಲ. ಆದರೆ, ಅವರ ಸ್ಥಾನದಲ್ಲಿ ವಿಕೆಟ್ ಕೀಪಿಂಗ್ ಮಾಡುತ್ತಿರುವ ಕೆ.ಎಲ್ ರಾಹುಲ್ ಅತ್ಯುತ್ತಮ ಕೌಶಲ ಮೆರೆದಿದ್ದಾರೆ. ಜತೆಗೆ, ಬ್ಯಾಟಿಂಗ್ ನಲ್ಲೂ ಮಿಂಚಿದ್ದಾರೆ. ಹಾಗಾಗಿ, ಪಂತ್ ಸಂಪೂರ್ಣ ಚೇತರಿಸಿಕೊಂಡರೂ ಅವರನ್ನು ಅಂತಿಮ 11ಕ್ಕೆ ಪರಿಗಣನೆ ತೀರಾ ಕಡಿಮೆ. 
 
ಇಲ್ಲಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣ ಪ್ರವಾಸಿಗರು ಕೊನೆಯ ಮೂರು ಪಂದ್ಯಗಳಲ್ಲಿ ಗೆಲುವಿನ ಬಾವುಟ ಹಾರಿಸಿದ್ದರು. ಆದ್ದರಿಂದ ಬೆಂಗಳೂರು ಆಸ್ಟ್ರೇಲಿಯಾ ತಂಡಕ್ಕೆ ನೆಚ್ಚಿನ ಅಂಗಳವಾಗಿದೆ. ಇದೇ, ಪ್ರವೃತ್ತಿಯನ್ನು ಮುಂದುವರಿಸುವ ತುಡಿತದಲ್ಲಿ ಆ್ಯರೋನ್ ಫಿಂಚ್ ಪಡೆ ಇದೆ. ಮತ್ತೊಂದೆಡೆ, ರಾಜ್ ಕೋಟ್ ನಲ್ಲಿ ತೋರಿದ ಅಪ್ರತಿಮ ಪ್ರದರ್ಶನವನ್ನು ಇಲ್ಲೂ ಮುಂದುವರಿಸಲು ಭಾರತ ಎದುರು ನೋಡುತ್ತಿದೆ. ಜತೆಗೆ, ಆಸೀಸ್ ವಿರುದ್ಧ ಸತತ ಎರಡನೇ ಏಕದಿನ ಸರಣಿ ಸೋಲಿನಿಂದ ಪಾರಾಗಲು ಯೋಜನೆ ರೂಪಿಸಿಕೊಂಡಿದೆ.
 
ತಂಡಗಳು 
ಭಾರತ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ(ಉಪ ನಾಯಕ), ಜಸ್ಪ್ರಿತ್ ಬುಮ್ರಾ, ಯಜುವೇಂದ್ರ ಚಾಹಲ್, ಶಿಖರ್ ಧವನ್, ಶಿವಂ ದುಬೆ, ಶ್ರೇಯಸ್ ಅಯ್ಯರ್, ರವೀಂದ್ರ ಜಡೇಜಾ, ಕೇರ್ದಾ ಜಾದವ್, ಮನೀಷ್ ಪಾಂಡೆ, ಕೆ.ಎಲ್ ರಾಹುಲ್(ವಿ.ಕೀ), ನವದೀಪ್ ಸೈನಿ, ಮೊಹಮ್ಮದ್ ಶಮಿ, ಶಾರ್ದೂಲ್ ಠಾಕೂರ್, ಕುಲ್ದೀಪ್ ಯಾದವ್. 

ಆಸ್ಟ್ರೇಲಿಯಾ: ಆ್ಯರೋನ್ ಫಿಂಚ್ (ನಾಯಕ), ಅಲೆಕ್‌ಸ್‌ ಕ್ಯಾರಿ (ಉಪ ನಾಯಕ, ವಿ.ಕೀ), ಪ್ಯಾಟ್ ಕಮಿನ್ಸ್‌, ಅಸ್ಟನ್ ಅಗರ್, ಪೀಟರ್ ಹ್ಯಾಂಡ್ಸ್ ಕೊಂಬ್, ಜೋಶ್ ಹೇಜಲ್‌ವುಡ್, ಮಾರ್ನಸ್ ಲಾಬುಶೇನ್, ಕೇನ್ ರಿಚರ್ಡ್‌ಸನ್, ಆರ್ಸಿ ಶಾರ್ಟ್, ಸ್ಟೀವನ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಆಸ್ಟನ್ ಟರ್ನರ್, ಡೇವಿಡ್ ವಾರ್ನರ್, ಆ್ಯಡಂ ಝಂಪಾ. 

ಸಮಯ: ನಾಳೆ ಮಧ್ಯಾಹ್ನ 01:30 ಸ್ಥಳ: ಎಂ.ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com