ಬೆಂಗಳೂರಿಗೆ ಸ್ಥಳಾಂತರಗೊಂಡ ಹಾರ್ದಿಕ್ ಪಾಂಡ್ಯ; ಇನ್ಮುಂದೆ ಕರ್ನಾಟಕದಲ್ಲೇ ನೆಲೆಸಲಿದ್ದಾರೆ ಟೀಂ ಇಂಡಿಯಾ ಆಲ್‌ರೌಂಡರ್!

ಹಾರ್ದಿಕ್ ಪಾಂಡ್ಯ ಮೂಲತಃ ಗುಜರಾತ್‌ನ ಬರೋಡಾದವರಾಗಿದ್ದರೂ, ಕಳೆದ ದಶಕದಲ್ಲಿ ಅವರು ಮುಂಬೈನಲ್ಲಿ ವಾಸಿಸುತ್ತಿದ್ದಾರೆ.
Hardik Pandya
ಹಾರ್ದಿಕ್ ಪಾಂಡ್ಯ
Updated on

ನವದೆಹಲಿ: ಟೀಂ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರು ತಮ್ಮ ವೃತ್ತಿಜೀವನದ ಉಳಿದ ಭಾಗಕ್ಕೆ ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್ (ಸಿಒಇ) ಅನ್ನು ಶಾಶ್ವತ ತರಬೇತಿ ನೆಲೆಯನ್ನಾಗಿ ಮಾಡುವ ಗುರಿಯೊಂದಿಗೆ ಬೆಂಗಳೂರಿಗೆ ಸ್ಥಳಾಂತರಗೊಂಡಿದ್ದಾರೆ. ಈ ಮೂಲಕ ಹಾಗೆ ಮಾಡಿದ ಮೊದಲ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಬಿಸಿಸಿಐನ ಸೆಂಟ್ರಲ್ ಕಾಂಟ್ರಾಕ್ಟ್ ಪಡೆದ ಆಟಗಾರರು ಸಾಮಾನ್ಯವಾಗಿ ಗಾಯದ ಪುನರ್ವಸತಿ, ಫಿಟ್‌ನೆಸ್ ಮೌಲ್ಯಮಾಪನ ಅಥವಾ ರಾಷ್ಟ್ರೀಯ ಶಿಬಿರಗಳಿಗಾಗಿ ಮಾತ್ರ ಸೆಂಟರ್ ಆಫ್ ಎಕ್ಸಲೆನ್ಸ್ (ಸಿಒಇ) ಗೆ ಭೇಟಿ ನೀಡುವುದರಿಂದ ಈ ಕ್ರಮ ವಿಶಿಷ್ಟವಾಗಿದೆ.

ಹಾರ್ದಿಕ್ ಪಾಂಡ್ಯ ಮೂಲತಃ ಗುಜರಾತ್‌ನ ಬರೋಡಾದವರಾಗಿದ್ದರೂ, ಕಳೆದ ದಶಕದಲ್ಲಿ ಅವರು ಮುಂಬೈನಲ್ಲಿ ವಾಸಿಸುತ್ತಿದ್ದಾರೆ ಮತ್ತು ಮುಖ್ಯವಾಗಿ ಘಾನ್ಸೋಲಿಯಲ್ಲಿರುವ ತಮ್ಮ ಐಪಿಎಲ್ ಫ್ರಾಂಚೈಸಿ ಮುಂಬೈ ಇಂಡಿಯನ್ಸ್ (MI) ಸೌಲಭ್ಯದಲ್ಲಿ ತರಬೇತಿ ಪಡೆದಿದ್ದಾರೆ.

ಕ್ವಾಡ್ರೈಸ್ಪ್ಸ್ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಮತ್ತು ಯುಕೆಯಲ್ಲಿ ನಡೆಯಲಿರುವ ವೈಟ್-ಬಾಲ್ ಪ್ರವಾಸದಿಂದ ಹೊರಗುಳಿದಿರುವ 32 ವರ್ಷದ ಅವರು ಕಳೆದ ಆರು ತಿಂಗಳುಗಳಲ್ಲಿ ಬೆಂಗಳೂರಿನ ಸಿಒಇಯಲ್ಲಿ ಗಣನೀಯ ಸಮಯವನ್ನು ಕಳೆದಿದ್ದಾರೆ.

'ಹಾರ್ದಿಕ್ ಈಗಾಗಲೇ ಶಾಶ್ವತವಾಗಿ ಬೆಂಗಳೂರಿಗೆ ಸ್ಥಳಾಂತರಗೊಂಡಿದ್ದಾರೆ. ಅವರು ನಗರದ ಹೊರವಲಯದಲ್ಲಿ, COEಗೆ ಹತ್ತಿರದಲ್ಲಿ ಒಂದು ಆಸ್ತಿಯನ್ನು ಬಾಡಿಗೆಗೆ ಪಡೆದಿದ್ದಾರೆ. ತಮ್ಮ ವೃತ್ತಿಜೀವನದ ಉಳಿದ ಭಾಗಕ್ಕೆ COE ಅನ್ನು ತಮ್ಮ ಶಾಶ್ವತ ತರಬೇತಿ ನೆಲೆಯನ್ನಾಗಿ ಮಾಡಿಕೊಂಡ ಮೊದಲ ಭಾರತೀಯ ಕ್ರಿಕೆಟಿಗ ಆಗಲಿದ್ದಾರೆ' ಎಂದು ಬಿಸಿಸಿಐ ಮೂಲಗಳು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿವೆ.

Hardik Pandya
IPL 2027: ಕೋಲ್ಕತ್ತಾ ನೈಟ್ ರೈಡರ್ಸ್‌ನಿಂದ ಅಜಿಂಕ್ಯ ರಹಾನೆಗೆ ಗೇಟ್ ಪಾಸ್; ಹಾರ್ದಿಕ್ ಪಾಂಡ್ಯ ಹೆಗಲಿಗೆ ನಾಯಕತ್ವ?

'ತರಬೇತಿಗಾಗಿ ಲೋವರ್ ಪರೇಲ್‌ನ ತಮ್ಮ ನಿವಾಸದಿಂದ ಪ್ರತಿದಿನ ಪ್ರಯಾಣಿಸುವುದು ಸಮಸ್ಯೆಯಾಗಿದ್ದರಿಂದ ಹಾರ್ದಿಕ್ ಮುಂಬೈನಿಂದ ಹೊರಗೆ ಹೋಗಲು ಬಯಸಿದ್ದರು. ಕೇಂದ್ರೀಯ ಗುತ್ತಿಗೆ ಪಡೆದ ಕ್ರಿಕೆಟಿಗರಾಗಿ, ಗಾಯ ನಿರ್ವಹಣೆಯಿಂದ ಹಿಡಿದು ಕೌಶಲ್ಯ ತರಬೇತಿಯವರೆಗೆ COE ಯಲ್ಲಿನ ಪ್ರತಿಯೊಂದು ಸೌಲಭ್ಯಕ್ಕೂ ಅವರು ಪ್ರವೇಶವನ್ನು ಹೊಂದಿದ್ದಾರೆ. ಆದ್ದರಿಂದ, ಅವರು ಐಪಿಎಲ್, ರಾಜ್ಯ ಅಥವಾ ರಾಷ್ಟ್ರೀಯ ಕರ್ತವ್ಯದಲ್ಲಿ ಇಲ್ಲದಿರುವಾಗಲೆಲ್ಲ ಸಿಒಇಯನ್ನು ತಮ್ಮ ಶಾಶ್ವತ ನೆಲೆಯನ್ನಾಗಿ ಮಾಡುವ ನಿರ್ಧಾರವನ್ನು ತೆಗೆದುಕೊಂಡರು' ಎಂದು ಮೂಲಗಳು ತಿಳಿಸಿವೆ.

ಹಾರ್ದಿಕ್ ಅವರು ಸಿಒಇಯ ಹೊರಗಿನ ತರಬೇತಿಗೆ ಸಹಾಯ ಮಾಡಲು ತಮ್ಮದೇ ಆದ ಪಿಜಿಯೋಥೆರಪಿಸ್ಟ್ ಮತ್ತು ಪರ್ಸನಲ್ ಸ್ಟ್ರೆಂತ್ ಮತ್ತು ಕಂಡೀಷನಿಂಗ್ (ಎಸ್ & ಸಿ) ತರಬೇತುದಾರರನ್ನು ಸಹ ಹೊಂದಿರುತ್ತಾರೆ ಎಂದು ತಿಳಿದುಬಂದಿದೆ.

ಹಾರ್ದಿಕ್ ಪಾಂಡ್ಯ ಭಾರತದ ಪರವಾಗಿ ವೈಟ್-ಬಾಲ್ ಕ್ರಿಕೆಟ್ (ಏಕದಿನ ಮತ್ತು ಟಿ20 ಪಂದ್ಯಗಳು) ಆಡುವುದನ್ನು ಮುಂದುವರಿಸುವವರೆಗೂ ಬೆಂಗಳೂರಿನಲ್ಲಿಯೇ ನೆಲೆಸಲು ಉದ್ದೇಶಿಸಿದ್ದಾರೆ. ಅವರಿನ್ನೂ ಐದರಿಂದ ಆರು ವರ್ಷಗಳ ಕಾಲ ವೈಟ್-ಬಾಲ್ ಕ್ರಿಕೆಟ್‌ನಲ್ಲಿ ಭಾರತವನ್ನು ಪ್ರತಿನಿಧಿಸುವುದನ್ನು ಮುಂದುವರಿಸುವ ನಿರೀಕ್ಷೆಯನ್ನು ಹೊಂದಿದ್ದಾರೆ.

'COE ನೇಮಿಸಿಕೊಂಡ ನೆಟ್ ಬೌಲರ್‌ಗಳ ವಿರುದ್ಧ ಬ್ಯಾಟಿಂಗ್‌ನಂತಹ ಕೌಶಲ್ಯ ಕೆಲಸಗಳನ್ನು ಮಾಡುವಾಗಲೂ, ಹಾರ್ದಿಕ್ ಅವರಿಗೆ ತಮ್ಮ ಸ್ವಂತ ಜೇಬಿನಿಂದ ಹಣ ನೀಡುತ್ತಾರೆ' ಎಂದು ಮೂಲಗಳು ತಿಳಿಸಿವೆ.

ಸದ್ಯ ಅವರ ಪುನರ್ವಸತಿ ಇನ್ನೂ ಮುಂದುವರೆದಿದೆ. ವೈಯಕ್ತಿಕ ಕೆಲಸಕ್ಕಾಗಿ ಅವರು ಕೆಲವು ದಿನಗಳ ವಿರಾಮ ತೆಗೆದುಕೊಂಡಿದ್ದರು ಮತ್ತು ಒಂದು ಅಥವಾ ಎರಡು ದಿನಗಳಲ್ಲಿ ಸಿಒಇಗೆ ಮರಳುವ ನಿರೀಕ್ಷೆಯಿದೆ. ಆದಾಗ್ಯೂ, ಯುಕೆ ಪ್ರವಾಸದ ನಂತರ ಜಿಂಬಾಬ್ವೆ ವಿರುದ್ಧದ ಮೂರು ಪಂದ್ಯಗಳ ಟಿ20ಐ ಸರಣಿಗೆ ಅವರನ್ನು ಆಯ್ಕೆ ಮಾಡಲಾಗುತ್ತದೆಯೇ ಎಂಬುದು ಸ್ಪಷ್ಟವಾಗಿಲ್ಲ.

Hardik Pandya
IPL 2027: ಮುಂಬೈ ಇಂಡಿಯನ್ಸ್ ತಂಡದಿಂದ ಹಾರ್ದಿಕ್ ಪಾಂಡ್ಯ ಔಟ್, ಯಶಸ್ವಿ ಜೈಸ್ವಾಲ್ ಇನ್; ಸೂರ್ಯಕುಮಾರ್ ಯಾದವ್ ಭವಿಷ್ಯ ಅತಂತ್ರ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com