ಮಂಗಳೂರು: ಹಾಸನ ಜಿಲ್ಲೆಯ ಆಲೂರು ನಂದಿಪುರ ಎಸ್ಟೇಟ್ ರೆಸಾರ್ಟ್ನಲ್ಲಿ ನಡೆದ ರೇವ್ ಪಾರ್ಟಿಯಲ್ಲಿ ಭಾಗಿಯಾಗಿದ್ದ ನಗರ ಸೆನ್ ಪೊಲೀಸ್ ಠಾಣಾ ಮಹಿಳಾ ಕಾನ್ಸ್ಟೇಬಲ್ನ್ನು ಅಮಾನತು ಮಾಡಿ ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಆದೇಶ ಹೊರಡಿಸಿದ್ದಾರೆ.
ಹಾಸನ ಜಿಲ್ಲೆಯ ಆಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎ. 10ರಂದು ರಾತ್ರಿ ನಡೆದಿದ್ದ ರೇವ್ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು ಎಂಬ ಆರೋಪಕ್ಕೆ ಸಿಲುಕಿರುವ ನಗರದ ಇಕನಾಮಿಕ್ ಆ್ಯಂಡ್ ನಾರ್ಕೊಟಿಕ್ ಕ್ರೈಂ ಠಾಣೆಯ ಮಹಿಳಾ ಹೆಡ್ ಕಾನ್ಸ್ಟೆಬಲ್ ಶ್ರೀಲತಾ ಅವರನ್ನು ಅಮಾನತು ಮಾಡಲಾಗಿದೆ.
ಮಂಗಳೂರು ಕಮಿಷನರ್ ಎನ್. ಶಶಿಕುಮಾರ್ ಈ ಬಗ್ಗೆ ಮಾಹಿತಿ ನೀಡಿ, ಹಾಸನದಲ್ಲಿ ನಡೆದ ರೇವ್ ಪಾರ್ಟಿ ಸಂದರ್ಭ ಸೆನ್ ಪೊಲೀಸ್ ಠಾಣಾ ಮಹಿಳಾ ಕಾನ್ಸ್ಟೇಬಲ್ ಶ್ರೀಲತಾ ಸ್ಥಳದಲ್ಲಿದ್ದರು. ಆಕೆಯ ಮಗ ಅತುಲ್ ರೇವ್ ಪಾರ್ಟಿ ಆಯೋಜಿಸಿದ್ದ ಬಗ್ಗೆ ಪ್ರಾಥಮಿಕ ಮಾಹಿತಿ ಲಭಿಸಿದೆ. ಅಲ್ಲದೆ ಮಹಿಳಾ ಕಾನ್ಸ್ಟೇಬಲ್ ರೆಸಾರ್ಟ್ ಮಾಲೀಕರ ಬಳಿ ಆಕೆಯನ್ನು ಸಿಸಿಬಿ ಅಧಿಕಾರಿ ಎಂದು ಪರಿಚಯಿಸಿಕೊಂಡು ಹುದ್ದೆ ದುರ್ಬಳಕೆ ಮಾಡಿಕೊಂಡಿದ್ದಾರೆ. ಈ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದು ಆಯುಕ್ತರು ತಿಳಿಸಿದರು.
'ಹಾಸನ ಪೊಲೀಸರು ತಪಾಸಣೆಗೆ ಬಂದಾಗ ಶ್ರೀಲತಾ ತಾನು ಮಂಗಳೂರು ಸಿಸಿಬಿ ಎಎಸ್ಐ ಎಂದು ಹೇಳಿ ವಾಗ್ವಾದ ನಡೆಸಿದ್ದು, ಹುದ್ದೆ ದುರುಪಯೋಗ ಮಾಡಿಕೊಂಡಿದ್ದಾರೆ. ಅವರಿಗೆ ಪಾರ್ಟಿಯ ಆಯೋಜಕರ ಸಂಪರ್ಕವಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಈಗಾಗಲೇ ಹಾಸನ ಪೊಲೀಸರು ವಶಕ್ಕೆ ಪಡೆದು ಠಾಣೆಯಲ್ಲಿ ಜಾಮೀನಿನ ಮೇಲೆ ಬಿಡುಗಡೆ ಮಾಡಿರುವ ಮಾಹಿತಿ ಇದೆ. ಈ ಹಿನ್ನೆಲೆಯಲ್ಲಿ ಅವರನ್ನು ಅಮಾನತು ಮಾಡಲಾಗಿದೆ. ಅಂತೆಯೇ ಮಹಿಳಾ ಕಾನ್ಸ್ಟೆಬಲ್ ಶ್ರೀಲತಾ ಮತ್ತು ಅವರ ಪುತ್ರ ಅತುಲ್ ರೇವ್ ಪಾರ್ಟಿ ನಡೆದ ಎಸ್ಟೇಟ್ ಮಾಲಕರ ಜತೆ ನಿರಂತರ ಸಂಪರ್ಕ ಹೊಂದಿರುವುದು ವಿಚಾರಣೆಯಿಂದ ತಿಳಿದು ಬಂದಿದೆ. ಅತುಲ್ ಪರಾರಿಯಾಗಿದ್ದಾನೆ. ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಆಯುಕ್ತರು ತಿಳಿಸಿದ್ದಾರೆ.
ನಂದಿಪುರದಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿಗೆ ಅ.10ರಂದು ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ನೇತೃತ್ವದ ತಂಡ ದಾಳಿ ನಡೆಸಿತ್ತು. ಈ ವೇಳೆ ಮಂಗಳೂರು ನಗರ ಸೆನ್ (ಸೈಬರ್, ಎಕಾನಾಮಿಕ್, ಎಂಡ್ ನಾರ್ಕೊಟಿಕ್) ಪೊಲೀಸ್ ಠಾಣೆಯ ಮಹಿಳಾ ಕಾನ್ಸ್ಟೇಬಲ್ ಸೇರಿದಂತೆ 130 ಯುವಕ-ಯುವತಿಯರನ್ನು ವಶಕ್ಕೆ ಪಡೆಯಲಾಗಿತ್ತು. ಈ ಸಂದರ್ಭ ರೇವ್ ಪಾರ್ಟಿ ಆಯೋಜಿಸಿದ್ದ ಕಾನ್ಸ್ಟೇಬಲ್ ಪುತ್ರ ಅತುಲ್ ಎಂಬಾತ ಪರಾರಿಯಾಗಿದ್ದು, ಆತನ ಶೋಧ ಕಾರ್ಯ ನಡೆದಿದೆ.
Advertisement