ಕೊಪ್ಪಳ: ಗುಟ್ಕಾ ತಂದುಕೊಡದ ಬಾಲಕಿಯ ಕೊಂದು ಚೀಲದಲ್ಲಿ ಬಚ್ಚಿಟ್ಟ ಪಾಪಿ!
ಕೊಪ್ಪಳ: ಗುಟ್ಕಾ ಖರೀದಿಸಿ ತಂದುಕೊಡದ 7 ವರ್ಷದ ಬಾಲಕಿಯೊಬ್ಬಳನ್ನು ಹತ್ಯೆ ಮಾಡಿ, ಮೃತದೇಹವನ್ನು ಚೀಲದಲ್ಲಿ ಬಚ್ಚಿಟ್ಟ ಪ್ರಕರಣವೊಂದು ಕೊಪ್ಪಳದ ಕಿನ್ನಾಲ್ ಗ್ರಾಮದಲ್ಲಿ ನಡೆದಿದೆ.
ಅನುಶ್ರೀ ರಾಘವೇಂದ್ರ ಮಡಿವಾಳ (7 ವರ್ಷ) ಹತ್ಯೆಯಾದ ದುರ್ದೈವಿ. ಆರೋಪಿಯನ್ನು ಸಿದ್ದಲಿಂಗಯ್ಯ ನಾಯ್ಕಲ್ (52) ಎಂದು ಗುರ್ತಿಸಲಾಗಿದೆ.
ಏಪ್ರಿಲ್ 19 ರಂದು ಘಟನೆ ನಡೆದಿತ್ತು. ಎರಡು ದಿನಗಳ ನಂತರ ಆಕೆಯ ಶವ ಪತ್ತೆಯಾಗಿತ್ತು. ಹತ್ಯೆ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಸೋಮವಾರ ಬಂಧನಕ್ಕೊಳಪಡಿಸಿದ್ದಾರೆ.
ಸಹೋದರರೊಂದಿಗೆ ಜಗಳವಾಡಿದ್ದ ಸಿದ್ದಲಿಂಗಯ್ಯನವರ ಕಾಲಿಗೆ ಸ್ವಲ್ಪ ಗಾಯಗಳಾಗಿತ್ತು. ಹೀಗಾಗಿ ಏಪ್ರಿಲ್ 19 ರಂದು ಆರೋಪಿ ತನ್ನ ನೆರೆಮನೆಯ ಬಾಲಕಿಯನ್ನು ಕರೆದು ಗುಟ್ಕಾ ತಂದುಕೊಡುವಂತೆ ಕೇಳಿದ್ದಾನೆ. ಬಾಲಕಿ ಒಮ್ಮೆ ಗುಟ್ಕಾ ತಂದುಕೊಟ್ಟಿದ್ದಾಳೆ. ಕೆಲವು ಗಂಟೆಗಳ ನಂತರ ಮತ್ತೊಮ್ಮೆ ಗುಟ್ಕಾ ತರುವಂತೆ ಕೇಳಿದ್ದಾನೆ. ಈ ವೇಳೆ ಬಾಲಕಿ ನಿರಾಕರಿಸಿದ್ದಾಳೆ
ಈ ವೇಳೆ ಸಿಟ್ಟಿಗೆದ್ದ ಆರೋಪಿ ಕುಡಿದ ಮತ್ತಿನಲ್ಲಿ ಆಕೆಯ ತಲೆಗೆ ದೊಣ್ಣೆಯಿಂದ ಹೊಡೆದಿದ್ದಾನೆ. ಕೂಡಲೇ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಬಳಿಕ ಗಾಬರಿಗೊಂಡಿರುವ ಆರೋಪಿ ಆಕೆಯ ಶವವನ್ನು ಚೀಲವೊಂದರಲ್ಲಿ ತುಂಬಿಟ್ಟಿದ್ದಾನೆ. ಮನೆಯಲ್ಲಿಯೇ ಎರಡು ದಿನ ಶವ ಇಟ್ಟುಕೊಂಡಿದ್ದ. ವಾಸನೆ ಬರಲಾರಂಭಿಸಿದ್ದರಿಂದ ರಾತ್ರಿ ವೇಳೆ ತಾನೇ ಚೀಲವನ್ನು ಪಾಳುಬಿದ್ದ ಮನೆಯಲ್ಲಿಟ್ಟು, ಮಣ್ಣು ಹಾಕಿ ಮುಚ್ಚಿದ್ದ. ಮರುದಿನ ಅಕ್ಕಪಕ್ಕದವರು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿತ್ತು.
ಏಪ್ರಿಲ್ 20 ರಂದು ಬಾಲಕಿಯ ತಂದೆ ಪೊಲೀಸರಿಗೆ ದೂರು ನೀಡಿದ್ದರು. ಏಪ್ರಿಲ್ 21 ರಂದು ಪೊಲೀಸರಿಗೆ ಆಕೆಯ ಶವ ಪತ್ತೆಯಾಗಿತ್ತು.
ಘಟನೆ ವೇಳೆ ಹಲವು ನಿವಾಸಿಗಳು ಮದುವೆಗೆ ಹೋಗಿದ್ದರು. ಮಗು ತನ್ನ ಮನೆಯಲ್ಲಿ ಒಬ್ಬಂಟಿಯಾಗಿತ್ತು ಎಂದು ತಿಳಿದುಬಂದಿದೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ