ವಿಶ್ವಸಂಸ್ಥೆಯಲ್ಲಿ ಇಸ್ರೇಲ್ ವಿರುದ್ದ ಮತ ಚಲಾಯಿಸಿದ ಭಾರತ‌‌: ಅಚ್ಚರಿ ಮೂಡಿಸಿದ ಪ್ರಧಾನಿ ಮೋದಿ ನಡೆ

ಪ್ಯಾಲೆಸ್ತೀನ್ ನಲ್ಲಿ ಇಸ್ರೇಲ್ ವಾಸನೆಲೆಗಳನ್ನು ಸ್ಥಾಪಿಸುವುದು ಅಕ್ರಮ ಎಂದು ಸಾರುವ ನಿರ್ಣಯವನ್ನು ಬೆಂಬಲಿಸಿ ವಿಶ್ವಸಂಸ್ಥೆಯಲ್ಲಿ ಭಾರತ ಮತ ಹಾಕಿರುವುದು ರಾಜತಾಂತ್ರಿಕ ವಲಯದಲ್ಲಿ ಭಾರೀ ಅಚ್ಚರಿಗೆ ಕಾರಣವಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಪ್ಯಾಲೆಸ್ತೀನ್ ನಲ್ಲಿ ಇಸ್ರೇಲ್ ವಾಸನೆಲೆಗಳನ್ನು ಸ್ಥಾಪಿಸುವುದು ಅಕ್ರಮ ಎಂದು ಸಾರುವ ನಿರ್ಣಯವನ್ನು ಬೆಂಬಲಿಸಿ ವಿಶ್ವಸಂಸ್ಥೆಯಲ್ಲಿ ಭಾರತ ಮತ ಹಾಕಿರುವುದು ರಾಜತಾಂತ್ರಿಕ ವಲಯದಲ್ಲಿ ಭಾರೀ ಅಚ್ಚರಿಗೆ ಕಾರಣವಾಗಿದೆ.

ಪೂರ್ವ ಜೆರುಸಲೇಂ ಸೇರಿದಂತೆ ಆಕ್ರಮಿತ ಪ್ಯಾಲೆಸ್ತೀನ್ ಭೂಭಾಗ ಹಾಗೂ ಆಕ್ರಮಿತ ಸಿರಿಯನ್ ಗೋಲನ್ ನಲ್ಲಿ ಇಸ್ರೇಲ್ ನ ವಸಾಹತು ಸ್ಥಾಪನೆ ಖಂಡಿಸುವ ನಿರ್ಣಯವನ್ನು ವಿಶ್ವಸಂಸ್ಥೆಯಲ್ಲಿ ಮಂಡಿಸಲಾಗಿತ್ತು. ಭಾರತ ಸೇರಿ 145 ದೇಶಗಳು ನಿರ್ಣಯದ ಪರ ಮತ ಚಲಾವಣೆ ಮಾಡಿದವು. ಅಮೆರಿಕಾ, ಕೆನಡಾ, ಇಸ್ರೇಲ್ ಸೇರಿ 7 ದೇಶಗಳು ವಿರುದ್ಧ ಮತ ಹಾಕಿದರೆ, 18 ರಾಷ್ಟ್ರಗಳು ತಟಸ್ಥವಾಗಿ ಉಳಿದವು. ಹೀಗಾಗಿ ನಿರ್ಣಯ ಅಂಗೀಕಾರವಾಯಿತು.

ಗಾಜಾ ಪಟ್ಟಿಯಲ್ಲಿ ತಕ್ಷಣ ದೀರ್ಘಕಾಲಿನ ಹಾಗೂ ಸುಸ್ಥಿರ ಮಾನವೀಯ ಕದನ ವಿರಾಮ ಘೋಷಣೆ ಮಾಡಬೇಕು ಎಂದು ಕೆಲವೇ ವಾರಗಳ ಹಿಂದೆ ವಿಶ್ವಸಂಸ್ಥೆಯಲ್ಲಿ ನಿರ್ಣಯ ಮಂಡಿಸಲಾಗಿತ್ತು. ಯುದ್ಧ ನಿಲ್ಲಿಸುವ ಪರ ಆ ನಿರ್ಣಯ ಇದ್ದ ಕಾರಣ ಭಾರತ ಮತದಾನ ಪ್ರಕ್ರಿಯೆಯಿಂದಲೇ ದೂರ ಉಳಿದಿತ್ತು. ಆದರೆ, ಈಗ ಪ್ಯಾಲೆಸ್ತೀನ್ ಭೂಭಾಗದಲ್ಲಿ ಇಸ್ರೇಲ್ ವಸಾಹತು ಸ್ಥಾಪನೆ ಖಂಡಿರುವ ನಿರ್ಣಯದ ಪರ ಮತ ಚಲಾವಣೆ ಮಾಡಿರುವುದು, ಅಚ್ಚರಿಗೆ ಕಾರಣವಾಗಿದೆ.

ಪ್ಯಾಲೆಸ್ತೀನ್ ಭೂಭಾಗದಲ್ಲಿ ಜಾಗ ಕಸಿಯುವುದು, ಸಂರಕ್ಷಿತ ಜನರ ಜೀವನೋಪಾಯಗಳನ್ನು ಅಸ್ತವ್ಯಸ್ತಗೊಳಿಸುವುದು, ಬಲವಂತವಾಗಿ ನಾಗರೀಕರನ್ನು ಸ್ಥಳಾಂತರಿಸುವುದು, ಜಾಗವನ್ನು ಕಬಳಿಸುವುದನ್ನು ಖಂಡಿಸುವ ಅಂಶಗಳು ಈ ನಿರ್ಣಯದಲ್ಲಿದೆ.

ಇಸ್ರೇಲ್‌ ಹಾಗೂ ಹಮಾಸ್‌ ನಡುವಿನ ಯುದ್ಧದಿಂದಾಗಿ ಗಾಜಾ ಪಟ್ಟಿನಲ್ಲಿ ಜನಜೀವನ ಸಂಕಷ್ಟಕ್ಕೆ ಸಿಲುಕಿದೆ. ಹಾಗಾಗಿ, ಮಾನವೀಯ ನೆಲೆಯಲ್ಲಿ ಕದನ ವಿರಾಮ ಘೋಷಿಸಬೇಕು ಎಂಬುದು ವಿಶ್ವಸಂಸ್ಥೆಯ ಒತ್ತಾಯವಾಗಿದೆ. ವಿಶ್ವದ ಹಲವು ರಾಷ್ಟ್ರಗಳು ಹಾಗೂ ಮಾನವ ಹಕ್ಕು ಸಂಘಟನೆಗಳ ಆಗ್ರಹವಾಗಿದೆ.

ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿರುವ ಇಸ್ರೇಲ್‌ ಪ್ರಜೆಗಳನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಬೇಕು. ಅಲ್ಲಿಯವರೆಗೂ ಹಮಾಸ್‌ ವಿರುದ್ಧದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವುದಿಲ್ಲ ಹಾಗೂ ಕದನ ವಿರಾಮ ಘೋಷಿಸುವ ಪ್ರಶ್ನೆಯೇ ಇಲ್ಲ ಎಂದು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಪುನರುಚ್ಚರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com