

ಕೋಲ್ಕತಾ: ಟಿಎಂಸಿ ಚಿಹ್ನೆ ವಿಚಾರವಾಗಿ ಈಗಾಗಲೇ ಚುನಾವಣಾ ಆಯೋಗದಿಂದ ಭಾರಿ ಆಘಾತ ಎದುರಿಸಿರುವ ಪಶ್ಚಿಮ ಬಂಗಾಳ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಮತ್ತೊಂದು ಆಘಾತ ಎದುರಾಗಿದೆ.
ಹೌದು.. ಪಶ್ಚಿಮ ಬಂಗಾಳದ ನಂದಿಗ್ರಾಮ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ಮಮತಾ ಬ್ಯಾನರ್ಜಿ ನೇತೃತ್ವದ ಬಣದಿಂದ ಕಣಕ್ಕಿಳಿದಿದ್ದ ಸಂಚಿತಾ ಪ್ರಧಾನ ದೇ ಶುಕ್ರವಾರ ತಮ್ಮ ನಾಮಪತ್ರವನ್ನು ಹಿಂಪಡೆದುಕೊಂಡಿದ್ದಾರೆ.
ನಾಮಪತ್ರ ಹಿಂಪಡೆಯಲು ನಿಗದಿಪಡಿಸಿದ್ದ ಗಡುವಿಗೆ ಒಂದು ದಿನ ಬಾಕಿ ಇರುವಾಗ ಅವರು ಈ ನಿರ್ಧಾರ ಕೈಗೊಂಡಿದ್ದಾರೆ. ನಾಮಪತ್ರ ಹಿಂಪಡೆಯುವ ಮುನ್ನ ಸಂಚಿತಾ ಪ್ರಧಾನ ದೇ ಅವರು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ರಾಜ್ಯ ಸಚಿವಾಲಯ ‘ನಬಣ್ಣ’ದಲ್ಲಿ ಭೇಟಿಯಾಗಿದ್ದರು.
ಪತಿ ಸತ್ಯಜಿತ್ ಅವರೊಂದಿಗೆ ನಬಣ್ಣಕ್ಕೆ ತೆರಳಿದ್ದ ಸಂಚಿತಾ, ಬಳಿಕ ಚುನಾವಣಾ ಕಣದಿಂದ ಹಿಂದೆ ಸರಿದರು. ಇದರೊಂದಿಗೆ ನಂದಿಗ್ರಾಮ ಉಪಚುನಾವಣೆಯಲ್ಲಿ ಮಮತಾ ಬಣಕ್ಕೆ ಅಭ್ಯರ್ಥಿ ಇಲ್ಲದಂತಾಗಿದೆ.
ಹೊಸ ಹೆಸರು, ಚಿಹ್ನೆ ಘೋಷಣೆಯ ಬೆನ್ನಲ್ಲೇ ಬೆಳವಣಿಗೆ
ಮಮತಾ ಬಣದ ಅಭ್ಯರ್ಥಿ ನಾಮಪತ್ರ ಹಿಂಪಡೆದಿರುವ ಬೆಳವಣಿಗೆ, ಚುನಾವಣಾ ಆಯೋಗವು ತೃಣಮೂಲ ಕಾಂಗ್ರೆಸ್ನ ಎರಡು ಬಣಗಳಿಗೆ ಪ್ರತ್ಯೇಕ ಹೆಸರು ಮತ್ತು ಚುನಾವಣಾ ಚಿಹ್ನೆಗಳನ್ನು ನೀಡಿದ ಕೆಲವೇ ಗಂಟೆಗಳ ಬಳಿಕ ನಡೆದಿದೆ.
ಅಕ್ಟೋಬರ್ 6ರಂದು ನಡೆಯಲಿರುವ ನಂದಿಗ್ರಾಮ ಮತ್ತು ರೇಜಿನಗರ ಉಪಚುನಾವಣೆ ಹಿನ್ನೆಲೆಯಲ್ಲಿ ಆಯೋಗ ಈ ಮಧ್ಯಂತರ ವ್ಯವಸ್ಥೆ ಮಾಡಿದೆ.
ಮಮತಾ ಬ್ಯಾನರ್ಜಿ ನೇತೃತ್ವದ ಬಣಕ್ಕೆ ‘ಮಮತಾ ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್’ ಎಂಬ ಹೆಸರು ಮತ್ತು ‘ಫುಟ್ಬಾಲ್ ಆಟಗಾರ’ ಚಿಹ್ನೆಯನ್ನು ನೀಡಲಾಗಿದೆ.
ಮತ್ತೊಂದು ಬಣಕ್ಕೆ ‘ಡೆಮಾಕ್ರಟಿಕ್ ತೃಣಮೂಲ ಕಾಂಗ್ರೆಸ್’ ಎಂಬ ಹೆಸರು ಮತ್ತು ‘ಲಕೋಟೆ’ ಚಿಹ್ನೆ ನೀಡಲಾಗಿದೆ.
ಇದಕ್ಕೂ ಮುನ್ನ ಚುನಾವಣಾ ಆಯೋಗವು ಎರಡೂ ಬಣಗಳಿಗೆ ‘ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್’ ಎಂಬ ಮೂಲ ಪಕ್ಷದ ಹೆಸರು ಹಾಗೂ ‘ಹೂವು-ಹುಲ್ಲು’ ಚಿಹ್ನೆಯನ್ನು ಮುಂಬರುವ ಉಪಚುನಾವಣೆಗಳಲ್ಲಿ ಬಳಸುವುದನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿತ್ತು.
ಪಕ್ಷದ ಸಂಘಟನಾತ್ಮಕ ನಿಯಂತ್ರಣ ಹಾಗೂ ಹೆಸರು-ಚಿಹ್ನೆಯ ಹಕ್ಕಿನ ಕುರಿತ ವಿವಾದದ ಅಂತಿಮ ನಿರ್ಧಾರ ಬಾಕಿಯಿದೆ.
ಅಂದಹಾಗೆ ನಂದಿಗ್ರಾಮ ಮತ್ತು ರೇಜಿನಗರ ಕ್ಷೇತ್ರಗಳಿಗೆ ಅಕ್ಟೋಬರ್ 6ರಂದು ಮತದಾನ ನಡೆಯಲಿದ್ದು, ಅಕ್ಟೋಬರ್ 9ರಂದು ಮತ ಎಣಿಕೆ ನಡೆಯಲಿದೆ.