5ನೇ ಏಕದಿನ ಪಂದ್ಯದ ಕೊನೆಯ ಓವರ್ ನಲ್ಲಿ ಧೋನಿ ಮತ್ತು ಮನೀಶ್ ಪಾಂಡೆ
5ನೇ ಏಕದಿನ ಪಂದ್ಯದ ಕೊನೆಯ ಓವರ್ ನಲ್ಲಿ ಧೋನಿ ಮತ್ತು ಮನೀಶ್ ಪಾಂಡೆ

ವೈಟ್ ವಾಶ್ ತಡೆಯೋಕೆ ಧೋನಿ ಮಾಡಿದ ಬ್ರಿಲಿಯಂಟ್ ಐಡಿಯಾ ಏನು ಗೊತ್ತೆ?

ಸತತ ನಾಲ್ಕು ಪಂದ್ಯಗಳ ಸೋಲಿನಿಂದ ಕಂಗೆಟ್ಟಿದ್ದ ಭಾರತ ತಂಡವನ್ನು ಶತಾಯಗತಾಯ ಗೆಲ್ಲಿಸಲೇಬೇಕು ಎಂದು ಪಣತೊಟ್ಟಿದ್ದ ನಾಯಕ ಧೋನಿ ಲೆಕ್ಕಾಚಾರಗಳು ಬಹುತೇಕ ತಲೆಕಳಗಾಗಿತ್ತು....

ಸಿಡ್ನಿ: ಸತತ ನಾಲ್ಕು ಪಂದ್ಯಗಳ ಸೋಲಿನಿಂದ ಕಂಗೆಟ್ಟಿದ್ದ ಭಾರತ ತಂಡವನ್ನು ಶತಾಯಗತಾಯ ಗೆಲ್ಲಿಸಲೇಬೇಕು ಎಂದು ಪಣತೊಟ್ಟಿದ್ದ ನಾಯಕ ಧೋನಿ ಲೆಕ್ಕಾಚಾರಗಳು ಬಹುತೇಕ ತಲೆಕಳಗಾಗಿತ್ತು.

ಟಾಸ್ ಗೆದ್ದ ಭಾರತ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡು ಆಸಿಸ್ ಬಳಗವನ್ನು ಕಡಿಮೆ ಮೊತ್ತಕ್ಕೆ ಕಟ್ಟಿ ಹಾಕಿ ಬಳಿಕ ರನ್ ಚೇಸ್ ಮಾಡಿ ಗೆಲ್ಲಬಹುದು ಎಂದು ಆಲೋಚಿಸಿತ್ತು. ಆದರೆ ನಾಲ್ಕು  ಪಂದ್ಯಗಳ ಬಳಿಕವಾದರೂ ಭಾರತೀಯ ಬೌಲಿಂಗ್ ನಲ್ಲಿ ಸುಧಾರಣೆ ಕಾಣಬಹುದು ಎಂಬ ಧೋನಿ ಅವರ ಊಹೆ ತಪ್ಪಾಗಿತ್ತು. ಧೋನಿ ಲೆಕ್ಕಾಚಾರವನ್ನು ಆಸಿಸ್ ನ ಪ್ರಬಲ ಬ್ಯಾಟಿಂಗ್ ಪಡೆ ನುಚ್ಚು ನೂರು  ಮಾಡಿತು. ಡೇವಿಡ್ ವಾರ್ನರ್ ಭರ್ಜರಿ ಶತಕ ಮತ್ತು ಮಿಚೆಲ್ ಮಾರ್ಷ್ ಅವರ ಸಮಯೋಚಿತ ಶತಕದ ನೆರವಿನಿಂದ ಆಸ್ಟ್ರೇಲಿಯಾ ತಂಡ 330 ರನ್ ಗಳ ಭರ್ಜರಿ ಮೊತ್ತ ಪೇರಿಸಿತು. ಆ ಮೂಲಕ  ಭಾರತಕ್ಕೆ ಗೆಲ್ಲಲು 331 ರನ್ ಗಳ ಬೃಹತ್ ಗುರಿ ನೀಡಿತು.

ಶತಾಯಗತಾಯ ಕೊನೆಯ ಏಕದಿನ ಪಂದ್ಯವನ್ನು ಗೆಲ್ಲಲೇ ಬೇಕು ಎಂದು ಕ್ರೀಸ್ ಗೆ ಇಳಿದಿದ್ದ ಭಾರತ 330 ರನ್ ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಲು ಆರಂಭಿಸಿತು. ಆಸಿಸ್ ವಿರುದ್ಧ ಸರಣಿಯಲ್ಲಿ  ಫಾರ್ಮ್ ಗೆ ಮರಳಿದ್ದ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಜೋಡಿಯನ್ನು ಧೋನಿ ಆರಂಭಿಕರಾಗಿ ಕಣಕ್ಕಿಳಿಸಿದರು. ಧೋನಿಯ ಈ ಲೆಕ್ಕಾಚಾರ ಫಲ ನೀಡಿತು. ಆಟಗಾರರಾದ ರೋಹಿತ್ ಶರ್ಮಾ  (99 ರನ್) ಮತ್ತು ಶಿಖರ್ ಧವನ್ (78 ರನ್) ಅವರು ತಂಡಕ್ಕ ಭರ್ಜರಿ ಆರಂಭ ನೀಡಿದರು. 123 ರನ್ ಗಳ ಭರ್ಜರಿ ಜೊತೆಯಾಟ ನೀಡಿದ ಈ ಜೋಡಿಯನ್ನು ಹಾಸ್ಟಿಂಗ್ಸ್ ಬೇರ್ಪಡಿಸಿದರು. ಬಳಿಕ  ಬಂದ ವಿರಾಟ್ ಕೊಹ್ಲಿ ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲ್ಲಲಿಲ್ಲ. ಇದು ಭಾರತ ತಂಡಕ್ಕೆ ತೀವ್ರ ನಿರಾಸೆ ಉಂಟು ಮಾಡಿತು. ಆ ಬಳಿಕ ಬಂದ ಕಳೆದ ಎರಡು ಪಂದ್ಯಗಳಲ್ಲಿ ನಿರಾಸೆ ಮೂಡಿಸಿದ್ದ ಕರ್ನಾಟಕ  ಮೂಲದ ಮನೀಶ್ ಪಾಂಡೆ ಅಂತಿಮ ಏಕದಿನ ಪಂದ್ಯದಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶನ ಮಾಡಿದರು. ರೋಹಿತ್ ಶರ್ಮಾ ಜೊತೆಗೂಡಿ ಭರ್ಜರಿ ಶತಕದ ಜೊತೆಯಾಟವಾಡಿದರು. ಈ ಹಂತದಲ್ಲಿ  ರೋಹಿತ್ 99 ರನ್ ಗಳಿಸಿ ಔಟಾಗುವ ಮೂಲಕ ಶತಕ ವಂಚಿತರಾದರು.

ಆದರೆ ಕ್ರೀಸ್ ನಲ್ಲಿ ಗಟ್ಟಿಯಾಗಿ ನಿಂತಿದ್ದ ಮನೀಶ್ ಪಾಂಡೆ ಧೋನಿ ಅಂದು ಕೊಂಡದ್ದಕ್ಕಿಂತಲೂ ಚೆನ್ನಾಗಿ ಆಡಿದರು. ನಾಯಕ ಧೋನಿಯನ್ನು ಸೇರಿ ತಂಡವನ್ನು ಗೆಲುವಿನ ಸನಿಹಕ್ಕೆ ಕರೆದೊಯ್ದರು.  ಪಂದ್ಯದ ಅಂತಿಮ ಓವರ್ 13 ರನ್ ಗಳ ಅವಶ್ಯಕತೆ ಇದ್ದಾಗ ಬ್ಯಾಟ್ ಮಾಡುತ್ತಿದ್ದ ಧೋನಿ ಸಿಕ್ಸರ್ ಸಿಡಿಸುವ ಮೂಲಕ ಗೆಲುವು ಖಚಿತ ಎನ್ನುವುದನ್ನು ಸಾಬೀತುಪಡಿಸ ಹೊರಟರು. ಆದರೆ  ದುರಾದೃಷ್ಟವಶಾತ್ ನಂತರದ ಎಸೆತದಲ್ಲಿಯೇ ವಾರ್ನರ್ ಗೆ ಕ್ಯಾಚಿತ್ತು ಹೊರ ನಡೆದರು. ಈ ವೇಳೆ ಧೋನಿ ತೆಗೆದುಕೊಂಡ ನಿರ್ಧಾರ ಭಾರತ ತಂಡ ನಿರಾಯಾಸವಾಗಿ ಗೆಲುವು ಸಾಧಿಸುವಂತೆ  ಮಾಡಿತು. ಧೋನಿ ಔಟಾಗುವ ವೇಳೆ ಅಂದರೆ ಧೋನಿ ಹೊಡೆದ ಚೆಂಡು ವಾರ್ನರ್ ಕೈ ಸೇರುವ ಮೊದಲೇ ಧೋನಿ ಕ್ರೀಸ್ ಬಿಟ್ಟು ಮನೀಶ್ ಪಾಂಡೆಗೆ ಬ್ಯಾಟ್ ಮಾಡಲು ಅವಕಾಶ ನೀಡಿದರು.

ಇದು ಪಂದ್ಯದ ಗೆಲುವಿಗೆ ಧೋನಿ ಹೂಡಿದ ಮಾಸ್ಟರ್ ಪ್ಲಾನ್ ಆಗಿತ್ತು. ಏಕೆಂದರೆ ಧೋನಿ ಬಳಿಕ ಕ್ರೀಸ್ ಗೆ ಆಗಮಿಸುವ ಬ್ಯಾಟ್ಸಮನ್ ಮೊದಲ ಎಸೆತದಿಂದಲೇ ದಂಡಿಸಲು ಕಷ್ಟಸಾಧ್ಯ. ಕೊನೆಯ ಓವರ್  ಆದ್ದರಿಂದ ಬ್ಯಾಟ್ಸಮನ್ ಕ್ರೀಸ್ ನಲ್ಲಿ ಗಟ್ಟಿಯಾಗಿ ನೆಲೆಯೂರುವಷ್ಟು ಸಮಯಾವಕಾಶ ಕೂಡ ಇರಲಿಲ್ಲ. ಹೀಗಾಗಿ ಧೋನಿ ಅದಾಗಲೇ ಶತಕದ ಅಂಚಿನಲ್ಲಿದ್ದ ಮನೀಶ್ ಪಾಂಡೆಗೆ ಫಿನಿಶಿಂಗ್ ರನ್ ಗಳಿಸುವ  ಅವಕಾಶ ನೀಡಿದರು. ಆ ಮೂಲಕ ಮನೀಶ್ ಶತಕಕ್ಕೆ ಹಾಗೂ ತಂಡದ ಗೆಲುವಿಗೆ ಧೋನಿ ಬುನಾದಿ ಹಾಕಿದ್ದರು. ಧೋನಿಯ ಈ ನಡೆ ನಿಜಕ್ಕೂ ಕ್ಲಿಕ್ ಆಗಿತ್ತು. ನಂತರದ ಎಸೆತದಲ್ಲಿ ಮನೀಶ್ ಪಾಂಡೆ 4  ರನ್ ಗಳಿಸುವ ಮೂಲಕ ಶತಕ ಸಂಭ್ರಮ ಆಚರಿಸಿದರು. ಅದರ ನಂತರದ ಎಸೆತದಲ್ಲಿ ಗೆಲುವಿನ ರನ್ ಗಳಿಸುವ ಮೂಲಕ ಆಸಿಸ್ ನೆಲದಲ್ಲಿ ಭಾರತ ತಂಡ ವೈಟ್ ವಾಶ್ ಆಗುವುದನ್ನು ತಡೆದರು.

ಮಹೇಂದ್ರ ಸಿಂಗ್ ಧೋನಿ ಅವರ ಈ ನಡೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಗೆ ಈಡಾಗುತ್ತಿದ್ದು, ಪಂದ್ಯದ ಕೊನೆಯ ಓವರ್ ನ ವಿಡಿಯೋಗಳು ವ್ಯಾಪಕವಾಗಿ ಹರಿದಾಡುತ್ತಿದೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ

Related Stories

No stories found.

Advertisement

X
Kannada Prabha
www.kannadaprabha.com