ವಾಣಿಜ್ಯ

ಕಣ್ಣೀರಾದ ಈರುಳ್ಲಿ! ಚಿಲ್ಲರೆ, ಸಗಟು ವ್ಯಾಪಾರಿಗಳಿಗೆ ದಾಸ್ತಾನು ಸಂಗ್ರಹ ಮಿತಿ ಕಡಿತಗೊಳಿಸಿದ ಸರ್ಕಾರ

Raghavendra Adiga

ನವದೆಹಲಿ: ಏರುತ್ತಿರುವ ಈರುಳ್ಳಿ ಬೆಲೆಯನ್ನು ನಿಗ್ರಹಿಸುವ ಪ್ರಯತ್ನದಲ್ಲಿರುವ ಕೇಂದ್ರ ಸರ್ಕಾರ ಮಂಗಳವಾರ ಚಿಲ್ಲರೆ ವ್ಯಾಪಾರಿಗಳು ಮತ್ತು ಸಗಟು ವ್ಯಾಪಾರಿಗಳ ಸಂಗ್ರಹ ಮಿತಿಯನ್ನು  ಕ್ರಮವಾಗಿ 5 ಟನ್ ಮತ್ತು 25 ಟನ್‌ಗೆ ಇಳಿಸಿ ಆದೇಶಿಸಿದೆ.

ಅಡಿಗೆಗೆ ಮುಖ್ಯವಾಗಿ ಬೇಕಾಗಿರುವ ಈರುಳ್ಳಿಯ  ಪೂರೈಕೆಯನ್ನು ಹೆಚ್ಚಿಸಲು ವಿವಿಧ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವ ಸರ್ಕಾರ ಇದೀಗ ಈರುಳ್ಳಿ ದಾಸ್ತಾನು ಸಾಂಗ್ರಹದ ಮೇಲೆ ಮಿತಿ ಹೇರಿದೆ. 

ದೇಶಾದ್ಯಂತ ಈರುಳ್ಳಿ ಬೆಲೆ ಕಳೆದ ಕೆಲವು ವಾರಗಳಿಂದ ಹೆಚ್ಚಾಗುತ್ತಲೇ ಇದ್ದು ಈ ಸಲುವಾಗಿ ಈ ಮೊದಲು ಚಿಲ್ಲರೆ ವ್ಯಾಪಾರಿಗಳಿಗೆ ಈರುಳ್ಳಿ ದಾಸ್ತಾನು 10 ಟನ್ ಮತ್ತು ಸಗಟು ವ್ಯಾಪಾರಿಗಳಿಗೆ 50 ಟನ್ ವರೆಗೆ ಸಂಗ್ರಹಕ್ಕೆ ಅವಕಾಶವಿದ್ದದ್ದನ್ನು ಇದೀಗ ಕಡಿತ ಮಾಡಿದೆ. ಆದರೆ ಆಮದಾದ ಈರುಳ್ಳಿಗೆ ಈ ಸಂಗ್ರಹ ಮಿತಿ ಅನ್ವಯವಾಗುವುದಿಲ್ಲ.

ಚಿಲ್ಲರೆ ವ್ಯಾಪಾರಿಗಳು ಮತ್ತು ಸಗಟು ವ್ಯಾಪಾರಿಗಳು ಪ್ರತಿದಿನವೂ ತಮ್ಮ ಈರುಳ್ಳಿ ಸಾಂಗ್ರಹ, ದಾಸ್ತಾನು ವಿವರವನ್ನು ಸಚಿವಾಲಯಕ್ಕೆ ನೀಡುವಂತೆ ನಿರ್ದೇಶಿಸಲಾಗಿದೆ 

ಮಂಗಳವಾರ ಸಂಸತ್ತಿನಲ್ಲಿ ಈರುಳ್ಳಿ ಬೆಲೆಏರಿಕೆ ಕುರಿತ ಪ್ರಶ್ನೆಗೆ ಉತ್ತರಿಸಿದ  ಗ್ರಾಹಕ ವ್ಯವಹಾರಗಳ ರಾಜ್ಯ ಸಚಿವ ದನ್ವೆ ರೌಸಾಹೇಬ್ ದಾದರಾವ್ ಅವರು ದೇಶಾದ್ಯಂತ ಏಕರೂಪದ ದರದಲ್ಲಿ ಈರುಳ್ಳಿ ನೀಡುವ ಪ್ರಸ್ತಾಪವಿಲ್ಲ ಎಂದು ಹೇಳಿದರು.

ದೇಶದ ಪ್ರಮುಖ ನಗರಗಳಲ್ಲಿ ಈರುಳ್ಳಿ ಬೆಲೆ ಕೆಜಿಗೆ 75-100 ರೂ.ಇದೆ.ಗ್ರಾಹಕ ವ್ಯವಹಾರಗಳ ಸಚಿವಾಲಯ ಸಂಗ್ರಹಿಸಿದ ಅಂಕಿಅಂಶಗಳ ಪ್ರಕಾರ, ಮಂಗಳವಾರ (ಡಿಸೆಂಬರ್ 3) ಸರಾಸರಿ ಮಾರಾಟದ ಬೆಲೆ ಪ್ರತಿ ಕೆಜಿಗೆ 75 ರೂ. ಇದ್ದು ಪೋರ್ಟ್ ಬ್ಲೇರ್‌ನಲ್ಲಿ ಗರಿಷ್ಠ 140 ರೂ. ಇದೆ.

SCROLL FOR NEXT