ವಾಣಿಜ್ಯ

ಈರುಳ್ಳಿ ಬೆಲೆ ಇಳಿಕೆ: ಗೋದಾಮುಗಳಲ್ಲಿ ಕೊಳೆತು ಹೋಗುತ್ತಿವೆ 36 ಸಾವಿರ ಮೆಟ್ರಿಕ್ ಟನ್ ಅಫ್ಘಾನ್ ಈರುಳ್ಳಿ!

Sumana Upadhyaya

ನವದೆಹಲಿ: ಕಳೆದ ಡಿಸೆಂಬರ್ ತಿಂಗಳಲ್ಲಿ ಈರುಳ್ಳಿ ಬೆಲೆ ಗಗನಕ್ಕೇರಿದ್ದ ಸಂದರ್ಭದಲ್ಲಿ ಆಫ್ಘಾನಿಸ್ತಾನದಿಂದ ಆಮದು ಮಾಡಿಕೊಂಡಿದ್ದ ಸುಮಾರು 36 ಸಾವಿರ ಮೆಟ್ರಿಕ್ ಟನ್ ಈರುಳ್ಳಿ ಕೇಂದ್ರ ಸರ್ಕಾರದ ಗೋದಾಮುಗಳಲ್ಲಿ ಒಣಗಿ ಹೋಗುತ್ತಿವೆ. ಅವುಗಳನ್ನು ಖರೀದಿಸಲು ರಾಜ್ಯ ಸರ್ಕಾರಗಳು ಮುಂದೆ ಬರುತ್ತಿಲ್ಲ.


ಕಳೆದ ಅಕ್ಟೋಬರ್ ನಲ್ಲಿ ದುಬಾರಿಯಾಗಲು ಆರಂಭಿಸಿದ ಈರುಳ್ಳಿ ಬೆಲೆ ನವೆಂಬರ್-ಡಿಸೆಂಬರ್ ಹೊತ್ತಿಗೆ ಕೆಜಿಗೆ 120ರಿಂದ 150ರೂಪಾಯಿಗಳವರೆಗೆ ಏರಿಕೆಯಾಗಿತ್ತು. ಈ ಸಮಸ್ಯೆ ದೇಶಾದ್ಯಂತ ಕಂಡುಬಂತು. ಈ ವಿಷಮ ಪರಿಸ್ಥಿತಿಯಲ್ಲಿ ಕಳೆದ ಡಿಸೆಂಬರ್ ನಲ್ಲಷ್ಟೇ ಕೇಂದ್ರ ಸರ್ಕಾರ ಆಫ್ಘಾನಿಸ್ತಾನದಿಂದ ಈರುಳ್ಳಿ ಆಮದು ಮಾಡಿಕೊಳ್ಳಲು ಆದೇಶ ನೀಡಿ ತರಿಸಿತು. ನಂತರ ಈರುಳ್ಳಿ ದರ ಕೆಜಿಗೆ 50ರಿಂದ 60 ರೂಪಾಯಿಗಳಷ್ಟಾದವು.


ಜನವರಿಯ ವೇಳೆಗೆ ನಮ್ಮ ದೇಶದಲ್ಲಿಯೇ ಬೆಳೆದ ಈರುಳ್ಳಿಗಳು ಮಾರುಕಟ್ಟೆಗೆ ಬರಲಾರಂಭಿಸಿದವು, ಅಷ್ಟು ಹೊತ್ತಿಗೆ ಈರುಳ್ಳಿ ಬೆಲೆಯಲ್ಲಿ ಕೂಡ ಇಳಿಮುಖವಾಗತೊಡಗಿತು. ಇಂತಹ ಸಂದರ್ಭದಲ್ಲಿ ಆಫ್ಘಾನಿಸ್ತಾನದಿಂದ ಆಮದು ಮಾಡಿಕೊಂಡ ಈರುಳ್ಳಿ ದುಬಾರಿಯೆನಿಸಿತು.ಹೀಗಾಗಿ ರಾಜ್ಯ ಸರ್ಕಾರಗಳು ಆಮದು ಈರುಳ್ಳಿಯನ್ನು ಖರೀದಿಸಲು ನಿರಾಕರಿಸಿದವು. ಈರುಳ್ಳಿಯನ್ನು ಖರೀದಿಸುವ ಗ್ರಾಹಕರು ಇಲ್ಲದಾದಾಗ ಸರ್ಕಾರದ ಸಂಸ್ಥೆಯಾದ ಎನ್ಎಎಫ್ ಇಡಿ ಸಂಗ್ರಹಗೊಂಡಿದ್ದ ಈರುಳ್ಳಿಗಳನ್ನು ವಿಲೇವಾರಿ ಮಾಡಲು ನೋಡಿತು. ಹೇಗೋ ಶೇಕಡಾ 40ರಷ್ಟನ್ನು ವಿಲೇವಾರಿ ಮಾಡಿದ್ದು ಇನ್ನುಳಿದ ಭಾಗ ಗೋದಾಮುಗಳಲ್ಲಿ ಹಾಗೆಯೇ ಉಳಿದುಕೊಂಡಿವೆ. ಕೇಂದ್ರ ಸರ್ಕಾರಕ್ಕೆ ಇದರಿಂದ ಸಾಕಷ್ಟು ನಷ್ಟವಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.


ಈರುಳ್ಳಿ ಬೆಲೆ ಇದ್ದಕ್ಕಿದ್ದಂತೆ ಏರಿಕೆಯಾಗಿದ್ದು ಹೇಗೆ?: ಕಳೆದ ವರ್ಷ ಅಕಾಲಿಕ ಮಳೆ ಸುರಿದಿದ್ದರಿಂದ ಈರುಳ್ಳಿ ಉತ್ಪಾದಿಸುವ ರಾಜ್ಯಗಳಲ್ಲಿ ಬೆಳೆ ನೀರಿಗೆ ಕೊಳೆತು ಹೋಗಿ ಸಾಕಷ್ಟು ಉತ್ಪಾದನೆಯಾಗಲಿಲ್ಲ. ಮಹಾರಾಷ್ಟ್ರ, ತೆಲಂಗಾಣ, ಕರ್ನಾಟಕ, ಮಧ್ಯ ಪ್ರದೇಶಗಳಲ್ಲಿ ಮಳೆಯಿಂದಾಗಿ ಈರುಳ್ಳಿ ಬೆಳೆ ಕೈಕೊಟ್ಟು ಮಾರುಕಟ್ಟೆಗೆ ಸಾಕಷ್ಟು ಪ್ರಮಾಣದಲ್ಲಿ ಪೂರೈಕೆಯಾಗಲಿಲ್ಲ, ಇದರಿಂದ ಮಳೆಗಾಲ ಮುಗಿಯುತ್ತಿದ್ದಂತೆ ಈರುಳ್ಳಿ ಬೆಲೆ ತಾರಕಕ್ಕೇರಿತು. ಡಿಸೆಂಬರ್ ಹೊತ್ತಿಗೆ ಅದು ಕೆಜಿಗೆ 150 ರೂಪಾಯಿಗಳಾದವು. ಕೇಂದ್ರ ಸರ್ಕಾರ 41 ಸಾವಿರ 950 ಮೆಟ್ರಿಕ್ ಟನ್ ಗಳಷ್ಟು ಎಂಎಂಟಿಸಿ ಆಮದು ಮಾಡಿಕೊಂಡಿದ್ದು ಅವುಗಳಲ್ಲಿ ಜನವರಿ ತಿಂಗಳಲ್ಲಿ 36 ಸಾವಿರದ 124 ಎಂಟಿಗಳಷ್ಟಾಗಿದ್ದವು.


ಆದರೆ ಜನವರಿ ತಿಂಗಳ ಹೊತ್ತಿಗೆ ರಾಜ್ಯಗಳಲ್ಲಿಯೇ ಈರುಳ್ಳಿ ಉತ್ಪಾದನೆಗೊಂಡಿದ್ದರಿಂದ ಫೆಬ್ರವರಿ ತಿಂಗಳಲ್ಲಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು 2 ಸಾವಿರದ 501 ಎಂಟಿಯಷ್ಟನ್ನು ಮಾತ್ರ ಖರೀದಿಸಿತು. ಆಂಧ್ರ ಪ್ರದೇಶ, ಕೇರಳ, ತೆಲಂಗಾಣ, ಉತ್ತರ ಪ್ರದೇಶ, ಉತ್ತರಾಖಂಡ್, ಪಶ್ಚಿಮ ಬಂಗಾಳ, ಹಿಮಾಚಲ ಪ್ರದೇಶ, ಗೋವಾ, ಹರ್ಯಾಣ, ಮೇಘಾಲಯ, ಜಮ್ಮು-ಕಾಶ್ಮೀರದಳು ಸಂಗ್ರಹಿಸಲ್ಪಟ್ಟ ಈರುಳ್ಳಿ ಖರೀದಿಸಲು ಹಿಂದೇಟು ಹಾಕಿದವು.   

SCROLL FOR NEXT