ನವದೆಹಲಿ: ಹಿರಿಯ ನಟ ಮತ್ತು ಲಗಾನ್, ಗಜಿನಿ ಸಹನಟ ಪ್ರದೀಪ್ ರಾವತ್ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಬಾಲಿವುಡ್ ಸೂಪರ್ಸ್ಟಾರ್ ಆಮಿರ್ ಖಾನ್ ಇಂದು ಮುಂಬೈಗೆ ಆಗಮಿಸಿದ್ದು ದಿವಂಗತ ನಟನಿಗೆ ಅಂತಿಮ ನಮನ ಸಲ್ಲಿಸಿದರು.
ಆಮಿರ್ ಖಾನ್, ಕಿತ್ತಳೆ ಶರ್ಟ್ ಮತ್ತು ನೀಲಿ ಪ್ಯಾಂಟ್ ಧರಿಸಿ, ತಮ್ಮ ದೀರ್ಘಕಾಲದ ಸಹನಟನಿಗೆ ಭಾವನಾತ್ಮಕ ವಿದಾಯ ಹೇಳಲು ತಮ್ಮ ಕಾರಿನಲ್ಲಿ ಸ್ಮಶಾನಕ್ಕೆ ಬಂದರು. ತಮ್ಮ ಸಹನಟ ಪ್ರದೀಪ್ ರಾವತ್ ಅವರ ಮುಖವನ್ನು ನೋಡಿ ಭಾವೋದ್ವೇಗಕ್ಕೆ ಒಳಗಾದರು. ಹಿಂದೂ ಪದ್ದತಿಯಂತೆ ಪ್ರದೀಪ್ ರಾವತ್ ಅವರ ಅಂತ್ಯಕ್ರಿಯೆ ನೆರವೇರಿತು.
ವೆರೈಟಿ ಇಂಡಿಯಾ'ದೊಂದಿಗೆ ಮಾತನಾಡಿದ ಅಮೀರ್, 'ಒಬ್ಬ ನಟನಾಗಿ ಅವರು ಅತ್ಯಂತ ಬದ್ಧತೆ ಮತ್ತು ನಿರ್ಭಯತೆಯನ್ನು ಹೊಂದಿದ್ದರು. 'ಗಜಿನಿ' ಚಿತ್ರದಲ್ಲಿ ಪ್ರದೀಪ್ಜೀ ಅವರು ಪ್ರಮುಖ ಖಳನಾಯಕನ ಪಾತ್ರವನ್ನು ನಿರ್ವಹಿಸಿದ್ದರು. ನಮ್ಮ ಚಿತ್ರರಂಗದಲ್ಲಿನ ಅತ್ಯಂತ ಪ್ರಭಾವಶಾಲಿ ಖಳನಾಯಕನ ಪಾತ್ರಗಳಲ್ಲಿ ಇದೂ ಒಂದು ಎಂದು ನಾನು ಭಾವಿಸುತ್ತೇನೆ. ಅವರು ಇಲ್ಲದೆ ಆ ಚಿತ್ರವು ಅಷ್ಟೊಂದು ಯಶಸ್ವಿಯಾಗುತ್ತಿರಲಿಲ್ಲ' ಎಂದರು.
'ಲಗಾನ್' ಚಿತ್ರದಲ್ಲಿ ದೇವ್ ಸಿಂಗ್ ಸೋಧಿ ಪಾತ್ರದಲ್ಲಿ ಪ್ರದೀಪ್ ರಾವತ್ ಅವರ ಅಭಿನಯವನ್ನು ಸ್ಮರಿಸಿದ ಅಮೀರ್, ಆ ಪಾತ್ರಕ್ಕೆ ಅವರು ನೀಡಿದ ವಿಶಿಷ್ಟ ಆಕರ್ಷಣೆಗಾಗಿ ಶ್ಲಾಘಿಸಿದರು. 'ಸೋಧಿ ಪಾತ್ರವನ್ನು ಅಂತಹ ವಿಶಿಷ್ಟ ಶೈಲಿ ಮತ್ತು ಆತ್ಮವಿಶ್ವಾಸದಿಂದ ಬೇರೆ ಯಾರೂ ನಿರ್ವಹಿಸಬಹುದಿತ್ತು ಎಂದು ನನಗೆ ಅನ್ನಿಸುವುದಿಲ್ಲ. ಅವರು ಬಹುಮುಖ ಪ್ರತಿಭೆಯುಳ್ಳ ನಟರಾಗಿದ್ದರು. ಅವರ ನಿಧನದ ಸುದ್ದಿ ಕೇಳಿ ಬೇಸರವಾಯಿತು' ಎಂದು ಹೇಳಿದರು.
ಪ್ರದೀಪ್ ರಾವತ್ ಅವರನ್ನು ಆರಂಭದಲ್ಲಿ ಮುಂಬೈನ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಗೆ ದಾಖಲಿಸಲಾಗಿತ್ತು; ನಂತರ ಹೆಚ್ಚಿನ ಚಿಕಿತ್ಸೆಗಾಗಿ ಭಿವಂಡಿಯ ಕ್ಯಾನ್ಸರ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಅವರಿಗೆ ಪತ್ನಿ ಮತ್ತು ಪುತ್ರ ವಿಕ್ರಮಾದಿತ್ಯ ಇದ್ದಾರೆ. ಅವರ ಅಂತ್ಯಕ್ರಿಯೆ ಇಂದು ನಡೆಯಿತು.