ಬಾಲಿವುಡ್ ನಟಿ ಹಾಗೂ ಸಂಸದೆ ಕಂಗನಾ ರಣಾವತ್, ತಮ್ಮ ವಿರುದ್ಧ ಹೇಳಿಕೆ ನೀಡಿದ್ದ ರಾಖಿ ಸಾವಂತ್ಗೆ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ರಾಖಿ ಅವರನ್ನು ಸೋತ ಮತ್ತು ಕಹಿ ಮನಸ್ಸಿನ ವ್ಯಕ್ತಿ ಎಂದು ಕಂಗನಾ ಕರೆದಿದ್ದಾರೆ.
ಇತ್ತೀಚೆಗೆ ಸ್ಮೃತಿ ಇರಾನಿ ಹಾಗೂ ಪ್ರಧಾನಿ ಮೋದಿ ಬಗ್ಗೆ ರಾಖಿ ಮಾಡಿದ್ದ ಟೀಕೆಗಳು ತೀವ್ರ ವಿವಾದಕ್ಕೆ ಕಾರಣವಾಗಿದ್ದವು. ಇದಕ್ಕೆ ಸಾಮಾಜಿಕ ಜಾಲತಾಣದ ಮೂಲಕ ಕಂಗನಾ ಖಡಕ್ ಉತ್ತರ ನೀಡಿದ್ದಾರೆ.
ಸೋತ ಜನರು ಯಶಸ್ವಿ ಮಹಿಳೆಯರ ಚಾರಿತ್ರ್ಯ ವಧೆ ಮಾಡಲು ಯತ್ನಿಸುತ್ತಾರೆ ಎಂದು ಕಂಗನಾ ಹೇಳಿದ್ದಾರೆ. ತಮ್ಮ ಅಸೂಯೆ ಮತ್ತು ವೈಫಲ್ಯ ಮುಚ್ಚಿಕೊಳ್ಳಲು ಹೀಗೆ ಮಾಡುತ್ತಾರೆ ಎಂದು ಕಿಡಿಕಾರಿದ್ದಾರೆ. ಇಂತಹ ಮಾತುಗಳಿಗೆ ತಲೆಕೆಡಿಸಿಕೊಳ್ಳಬಾರದು ಎಂದು ಅವರು ಬೆಂಬಲಿಗರಿಗೆ ಕಿವಿಮಾತು ಹೇಳಿದ್ದಾರೆ. ಪ್ರತಿಯೊಬ್ಬರಿಗೂ ಅನಗತ್ಯವಾಗಿ ಉತ್ತರ ನೀಡುವುದನ್ನು ನಿಲ್ಲಿಸಬೇಕು ಎಂದು ಸ್ಪಷ್ಟಪಡಿಸಿದ್ದಾರೆ.
ಯಶಸ್ಸಿಗೆ ಯಾವುದೇ ಶಾರ್ಟ್ಕಟ್ ಇಲ್ಲ ಎಂಬುದನ್ನು ಪ್ರತಿಯೊಬ್ಬರೂ ನೆನಪಿಡಬೇಕು. ನಿಮಗಾಗಿ ಯಾರೂ ಕಾಯುತ್ತ ಕುಳಿತಿಲ್ಲ ಎಂದು ಕಂಗನಾ ಕುಟುಕಿದ್ದಾರೆ. ಪೌರಕಾರ್ಮಿಕನ ಕೆಲಸ ಸಿಗಬೇಕಾದರೂ ಸಹ ಅದಕ್ಕೆ ಅರ್ಹತೆ ಹಾಗೂ ಪ್ರತಿಭೆ ಬೇಕಾಗುತ್ತದೆ. ಹೀಗಾಗಿ ಶಾಂತವಾಗಿ ಕುಳಿತು ನನ್ನ ವೀಡಿಯೋ ನೋಡಿ ಅಳುವುದು ಉತ್ತಮ ಎಂದಿದ್ದಾರೆ.
ಅತಿಥಿಯಾಗಿ ಭಾಗವಹಿಸಿದ್ದ ಪಾಡ್ಕಾಸ್ಟ್ ಕಾರ್ಯಕ್ರಮದಲ್ಲಿ ರಾಖಿ ಸಾವಂತ್, ಪ್ರಧಾನಿ ಮೋದಿ ಹಾಗೂ ಕಂಗನಾ ಮತ್ತು ಸ್ಮೃತಿ ಇರಾನಿ ಅವರ ರಾಜಕೀಯ ಪ್ರವೇಶದ ಬಗ್ಗೆ ಮಾತನಾಡುತ್ತಾ ಅತಿರೇಕದ ಹೇಳಿಕೆಗಳನ್ನು ನೀಡಿದರು.
ನಿರೂಪಕರು ಹಿಂದೆ ತಾವು ಪ್ರಧಾನಿ ಮೋದಿಯವರಲ್ಲಿ ರಾಜಕೀಯ ಟಿಕೆಟ್ ಕೇಳಿದ್ದನ್ನು ನೆನಪಿಸಿದಾಗ, ನಾನೇ ಕಮಲ, ನಾನು ಹುಟ್ಟಿದ್ದೇ ಕೆಸರಿನಲ್ಲಿ ಎಂದು ಹಾರಿಕೆ ಉತ್ತರ ನೀಡಿದ ರಾಖಿ, ಬಳಿಕ ಮಿತಿ ಮೀರಿದ್ದಾರೆ. ಮೋದಿ ಜಿ ಯಾಕೆ ಇಲ್ಲಿ-ಅಲ್ಲಿ ನೋಡುತ್ತಿದ್ದಾರೆ? ಕಂಗನಾರಿಂದ ಅವರಿಗೆ ಮೂಳೆಗಳ ಹೊರತಾಗಿ ಇನ್ನೇನು ಸಿಗುತ್ತದೆ? ಮೋದಿ ಜಿ, ಈ ಸ್ಮೃತಿ, ಕಂಗನಾ ಮತ್ತು ಇತರ ಮಹಿಳೆಯರು ನಿಮಗೆ ಏನು ನೀಡಿದ್ದಾರೆಂದು ಅವರನ್ನು ಸಚಿವರನ್ನಾಗಿ ಮಾಡಿದ್ದೀರಿ? ಅವರು ನಿಮಗೆ ಏನು ನೀಡಿದ್ದಾರೋ, ಅದನ್ನು ನಾನೂ ನೀಡಬಲ್ಲೆ ಎಂದು ದ್ವಂದ್ವಾರ್ಥದಲ್ಲಿ ಮಾತನಾಡಿದ್ದಾರೆ.
ನಿರೂಪಕರು ಇದರ ಅರ್ಥವೇನೆಂದು ಕೇಳಿದಾಗ, ಜಾರಿಕೊಳ್ಳಲು ಪ್ರಯತ್ನಿಸಿದ ರಾಖಿ, ಪ್ರೀತಿ! ಅಪಾರ ಗೌರವ! ಎಂದು ಸನ್ನೆ ಮಾಡುತ್ತಾ ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಆದರೆ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕ ವಲಯದಿಂದ ರಾಖಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.