'ಕನಕ' ಸಿನೆಮಾದಲ್ಲಿ ಸಾಧುಕೋಕಿಲಾ ಮತ್ತು ಮಾನ್ವಿತಾ
ಬೆಂಗಳೂರು: ಕನ್ನಡ ಸಿನೆಮಾದ ಗತ ವೈಭವವನ್ನು, ದಂತಕತೆಗಳಾಗಿರುವ ಸಿನೆಮಾ ನಟರನ್ನು ನೆನಪಿಸಿಕೊಂಡು ಅವರಿಗೆ ಗೌರವ ನೀಡುವ ಸಿನೆಮಾಗಳು ಇತ್ತೀಚಿಗೆ ಹೆಚ್ಚಾಗಿವೆ. ಅದರಲ್ಲೂ ಕನ್ನಡದ ವರನಟ ಡಾ. ರಾಜಕುಮಾರ್ ನೆನೆಯುವುದೆಂದರೆ ನಿರ್ದೇಶಕರಿಗೂ, ಪ್ರೇಕ್ಷಕರಿಗೂ ಸಂಭ್ರಮವೇ!
ಈಗ ದುನಿಯಾ ವಿಜಯ್ ನಟಿಸುತ್ತಿರುವ ಚಂದ್ರು ನಿರ್ದೇಶನದ 'ಕನಕ' ಸಿನೆಮಾದಲ್ಲಿ ಕೂಡ ವಿಜಯ್, ರಾಜಕುಮಾರ್ ಅವರ ಅಭಿಮಾನಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಹಾಗೆಯೇ ವರನಟ ಅಭಿನಯಿಸಿರುವ 'ನೀ ನನ್ನ ಗೆಲ್ಲಲಾರೆ' ಸಿನೆಮಾದ ಜೀವಾ ಹೂವಾಗಿದೆ ಮತ್ತು 'ಕವಿರತ್ನ ಕಾಳಿದಾಸ' ಸಿನೆಮಾದ ಪ್ರಿಯತಮಾ ಓ ಪ್ರಿಯತಮಾ ಹಾಡುಗಳನ್ನು ಕೂಡ ಹಾಸ್ಯಮಯವಾಗಿ ಬಳಸಿಕೊಳ್ಳಲಾಗುತ್ತಿದೆಯಂತೆ.
ರಾಜಕುಮಾರ್ ಮತ್ತು ಜಯಪ್ರದಾ ಸಿನೆಮಾದಲ್ಲಿ ತೊಟ್ಟಿದ್ದ ವೇಷಭೂಷಣವನ್ನು ಅನುಕರಿಸಿರುವ ಸಾಧುಕೋಕಿಲಾ ಮತ್ತು ಮಾನ್ವಿತಾ ಹರೀಶ್ ನಟಿಸಿರುವ ದೃಶ್ಯದ ಸ್ಟಿಲ್ ಈಗ ಲಭ್ಯವಾಗಿದೆ.
ಇದರ ಬಗ್ಗೆ ವಿವರಣೆ ನೀಡುವ ಚಂದ್ರು "ಇದು ರಾಜಕುಮಾರ್ ಅಭಿಮಾನಿಯ ದೃಷ್ಟಿಕೋನದಿಂದ ನಡೆಯುವ ಕಥೆ ಆಗಿರುವುದರಿಂದ, ಕೆಲವು ರೆಟ್ರೋ ಸನ್ನಿವೇಶಗಳನ್ನು ಸೃಷ್ಟಿಸಿದ್ದೇವೆ. ರಾಜಕುಮಾರ್ ಅವರು ತಮ್ಮ ಜೀವನದಲ್ಲಿ ೨೦೬ ಚಿತ್ರಗಳಲ್ಲಿ ನಟಿಸಿದ್ದಾರೆ ಮತ್ತು ಅವರ ಅಭಿಮಾನಿಗಳ ದೃಷ್ಟಿಯಿಂದ ಇದನ್ನು ಅವರ ೨೦೭ ನೇ ಸಿನೆಮಾ ಆಗಿಸಬೇಕೆಂದಿದ್ದೇನೆ" ಎನ್ನುತ್ತಾರೆ.
ಈ ಎರಡು ಹಾಡುಗಳ ಕೆಲವು ಸಾಲುಗಳನ್ನು ಬಳಸಿದ್ದೇನೆ ಎನ್ನುವ ಚಂದ್ರು ಆದರೆ ದುನಿಯಾ ವಿಜಯ್ ನಟಿಸಿರುವ ಹಲವು ದೃಶ್ಯಗಳಲ್ಲಿ ವರನಟನ ಉಪಸ್ಥಿತಿ ಎದ್ದು ಕಾಣಲಿದೆ ಎನ್ನುತ್ತಾರೆ. "ಇಷ್ಟೆಲ್ಲಾ ಹೇಳಿದ ಮೇಲೆ, ಯಾವುದೇ ರಾಜಕುಮಾರ್ ಸಿನೆಮಾವನ್ನು ಇಲ್ಲಿ ನಾವು ಹಿಂದಕ್ಕೆ ತರುತ್ತಿಲ್ಲ ಅಥವಾ ಸಂಪೂರ್ಣವಾಗಿ ಹಾಡುಗಳನ್ನು ಕೂಡ ಬಳಸಿಲ್ಲ. ಕಥೆ ರಾಜಕುಮಾರ್ ಅವರನ್ನು ಅಭಿಮಾನಿಗಳಿಗೆ ಮತ್ತೆ ಮತ್ತೆ ನೆನಪಿಸುತ್ತದೆ" ಎನ್ನುತ್ತಾರೆ.
ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಸುಮಾರು ೩೦% ಮುಗಿಸಿರುವುದಾಗಿ ತಿಳಿಸುತ್ತಾರೆ ಚಂದ್ರು. ನವೀನ್ ಸಜ್ಜು ಸಂಗೀತ ನೀಡಿದ್ದು, ಸತ್ಯ ಹೆಗಡೆ ಅವರ ಸಿನೆಮ್ಯಾಟೋಗ್ರಫಿ ಚಿತ್ರಕ್ಕಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos