ಅಂಜನೀಪುತ್ರ ಸೆಟ್ ನಲ್ಲಿ ನಿರ್ದೇಶಕ ಹರ್ಷ ಮತ್ತು ಸಹನಟಿ ರಶ್ಮಿಕಾ ಮಂದಣ್ಣ ಜೊತೆ ಪುನೀತ್ ರಾಜ್ ಕುಮಾರ್
ಪುನೀತ್ ರಾಜ್ ಕುಮಾರ್ ಗೆ 2017ನೇ ವರ್ಷ ಉತ್ತಮವಾಗಿತ್ತು ಎಂದೇ ಹೇಳಬಹುದು.ಕಳೆದ ಮಾರ್ಚ್ ನಲ್ಲಿ ಅವರ ರಾಜಕುಮಾರ ಚಿತ್ರ ಬ್ಲಾಕ್ ಬಸ್ಟರ್ ಆಯಿತು. ಆದರೆ ಇದೇ ವರ್ಷ ಅವರು ತಮ್ಮ ತಾಯಿ ಪಾರ್ವತಮ್ಮ ರಾಜ್ ಕುಮಾರ್ ಅವರನ್ನು ಕಳೆದುಕೊಂಡಿದ್ದು ಕೂಡ. ನನ್ನ ತಾಯಿಯ ಇಲ್ಲದಿರುವಿಕೆ ನನ್ನಲ್ಲಿ ತುಂಬಾ ಕಳೆದುಕೊಂಡ ಭಾವನೆಯುಂಟಾಗುತ್ತದೆ. ಆದರೆ ಏನು ಮಾಡುವುದು ಜೀವನ ಮುಂದೆ ಸಾಗಬೇಕು ಎನ್ನುತ್ತಾರೆ ಪುನೀತ್.
ಇದೀಗ ಅವರ ಬಹುನಿರೀಕ್ಷಿತ ಅಂಜನಿಪುತ್ರ ಚಿತ್ರ ಇಂದು ಬಿಡುಗಡೆಯಾಗುತ್ತಿದ್ದು, ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ರಾಜ್ಯಾದ್ಯಂತ ದೊಡ್ಡ ದೊಡ್ಡ ಥಿಯೇಟರ್ ಗಳಲ್ಲಿ ಪುನೀತ್ ಕಟ್ ಔಟ್ ಗಳು ರಾರಾಜಿಸುತ್ತಿವೆ. ಇದೊಂದು ಆಕ್ಷನ್ ಚಿತ್ರವಾಗಿದ್ದು ಹೀಗಾಗಿ ಅಂಜನಿಪುತ್ರ ಎಂಬ ಪವರ್ ಫುಲ್ ಶೀರ್ಷಿಕೆ ಇಡಲಾಗಿದೆ. ಆಕ್ಷನ್ ಜೊತೆಗೆ ಚಿತ್ರದಲ್ಲಿ ಕೌಟುಂಬಿಕ ಕಥೆ, ಹಾಸ್ಯ ಮತ್ತು ರೊಮಾಂಟಿಕ್ ಸನ್ನಿವೇಶಗಳು ಕೂಡ ಇವೆ, ಒಂದು ಉತ್ತಮ ಚಿತ್ರಕ್ಕೆ ಬೇಕಾದ ಪೂರಕ ಅಂಶಗಳು ಚಿತ್ರದಲ್ಲಿವೆ ಎನ್ನುತ್ತಾರೆ.
ರಾಜಕುಮಾರ್ ನಂತಹ ಉತ್ತಮ ಕೌಟುಂಬಿಕ ಚಿತ್ರದ ನಂತರ ಪ್ರೇಕ್ಷಕರು ಕೂಡ ಪುನೀತ್ ಅವರ ಈ ಚಿತ್ರದಿಂದ ಹೆಚ್ಚಿನ ನಿರೀಕ್ಷೆಯಿಟ್ಟುಕೊಂಡಿದ್ದಾರೆ. ನಟನಾಗಿ ಮತ್ತು ಚಿತ್ರ ನಿರ್ಮಾಪಕನಾಗಿ ಜನರ ನಿರೀಕ್ಷೆಯ ಭಾರವನ್ನು ಹೊತ್ತುಗಳನ್ನು ನಾನು ಬಯಸುವುದಿಲ್ಲ. ಬದಲಾಗಿ ನಾನು ಉತ್ತಮ ಚಿತ್ರಗಳಲ್ಲಿ ನಟಿಸಲು ಮಾತ್ರ ಗಮನ ಹರಿಸುತ್ತೇನೆ ಎಂದರು ಪುನೀತ್.
ಕೆಸಿಎನ್ ಕುಮಾರ್ ನಿರ್ಮಾಣದ ಅಂಜನಿಪುತ್ರ ಚಿತ್ರ ತಮಿಳಿನ ಹಿಟ್ ಚಿತ್ರ ಪೂಜೈ ಚಿತ್ರದಿಂದ ಪ್ರೇರೇಪಿತಗೊಂಡಿದೆ. ಕನ್ನಡದ ಅಂಜನೀಪುತ್ರ ಚಿತ್ರವನ್ನು ವಿಭಿನ್ನವಾಗಿ ಚಿತ್ರೀಕರಿಸಲಾಗಿದ್ದು, ನಿರ್ದೇಶಕ ಹರ್ಷ ಇದಕ್ಕೆ ವಿಭಿನ್ನ ನೋಟ ನೀಡಿದ್ದಾರೆ. ಮೂಲ ಚಿತ್ರದ ಪ್ರತಿ ದೃಶ್ಯವನ್ನು ತೆಗೆದುಕೊಂಡು ಅದನ್ನು ನಮ್ಮ ವಿವರಣೆಯಲ್ಲಿ ಪ್ರತಿಬಿಂಬಿಸುವುದು ನಮಗೆ ಇಷ್ಟವಿರಲಿಲ್ಲ. ಮೂಲ ಚಿತ್ರಕ್ಕೆ ಕಟ್ಟುಬದ್ಧವಾಗಿದ್ದರೂ ಕೂಡ ಸ್ಥಳೀಯ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ಚಿತ್ರ ತಯಾರಿಸಲಾಗಿದೆಎಂದರು.
ಪ್ರತಿ ನಿರ್ದೇಶಕನ ಚಿತ್ರ ನಿರ್ದೇಶನದ ಶೈಲಿ ವಿಭಿನ್ನವಾಗಿರುತ್ತದೆ. ನಿರ್ದೇಶಕ ಪ್ರೇಕ್ಷಕರ ಆಸಕ್ತಿಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಚಿತ್ರ ನಿರ್ದೇಶಿಸಬೇಕಾಗುತ್ತದೆ. ನಿರ್ದೇಶಕ ಹರ್ಷ ಈ ವಿಷಯದಲ್ಲಿ ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ತಾಂತ್ರಿಕ ನೈಪುಣ್ಯದಿಂದ ವಿಭಿನ್ನ ಪ್ರಯತ್ನ ಮಾಡಿದ್ದಾರೆ. ನೃತ್ಯ ನಿರ್ದೇಶಕನಾಗಿ ಕೂಡ ಹರ್ಷ ನೃತ್ಯ ಮತ್ತು ಫೈಟಿಂಗ್ ನಲ್ಲಿ ಉತ್ತಮವಾದುದನ್ನೇ ತೆರೆಯ ಮೇಲೆ ತಂದಿದ್ದಾರೆ ಎಂದರು.
ಚಿತ್ರದ ಪಾತ್ರಗಳು ನನಗೆ ಹೊಂದಿಕೆಯಾಗುತ್ತದೆಯೇ ಎಂದು ನೋಡಿಕೊಂಡು ಮತ್ತು ಆ ಚಿತ್ರದಿಂದ ನಿರ್ಮಾಪಕರಿಗೆ ಲಾಭವಾಗುತ್ತದೆಯೇ ಎಂದು ಆಲೋಚನೆ ಮಾಡಿ ಚಿತ್ರಗಳನ್ನು ಒಪ್ಪಿಕೊಳ್ಳುತ್ತೇನೆ. ಅಷ್ಟಕ್ಕೂ ನಿರ್ಮಾಪಕರು ಚಿತ್ರಕ್ಕೆ ಬಂಡವಾಳ ಹಾಕುತ್ತಾರೆ. ಪ್ರತಿಯೊಬ್ಬರಿಗೂ ಲಾಭವಾದರೆ ಚಿತ್ರ ಯಶಸ್ವಿಯಾಗಿದೆ ಎಂದರ್ಥ ಎಂದರು ಪುನೀತ್.
ಇದೇ ಮೊದಲ ಬಾರಿಗೆ ಹಿರಿಯ ನಟಿ ರಮ್ಯ ಕೃಷ್ಣ ಅವರ ಜೊತೆಗೆ ಪುನೀತ್ ನಟಿಸುತ್ತಿದ್ದಾರೆ. ನಾನು ಅವರ ದೊಡ್ಡ ಅಭಿಮಾನಿ. ಈ ಚಿತ್ರದಲ್ಲಿ ಅವರ ಜೊತೆ ಕೆಲಸ ಮಾಡುವ ಅವಕಾಶ ನನಗೆ ಸಿಕ್ಕಿತು. ಈ ಚಿತ್ರದ ಸೆಟ್ ನಲ್ಲಿ ನಾನು ಮೊದಲ ಬಾರಿಗೆ ಅವರನ್ನು ಭೇಟಿಯಾಗಿದ್ದು ಎಂದರು.
ಪುನೀತ್ ರಾಜ್ ಕುಮಾರ್ ಈ ವರ್ಷ ಚಿತ್ರ ನಿರ್ಮಾಣಕ್ಕೆ ಕೂಡ ಕೈ ಹಾಕಿದ್ದು ತಮ್ಮ ಹೋಂ ಬ್ಯಾನರ್ ಆದ ಪಿಆರ್ ಕೆ ಪ್ರೊಡಕ್ಷನ್ ತಮ್ಮ ತಾಯಿಯವರು ಮಾಡುತ್ತಿದ್ದ ಕೆಲಸವನ್ನು ಮುಂದುವರಿಸಲಿದೆ. ಕವಲುದಾರಿ ಚಿತ್ರದ ನಿರ್ಮಾಣ ಮೂಲಕ ಪ್ರೊಡಕ್ಷನ್ ಹೌಸ್ ಆರಂಭವಾಗಿದ್ದು ಜನವರಿಯಲ್ಲಿ ಮುಂದಿನ ಚಿತ್ರ ಆರಂಭವಾಗಲಿದೆ ಎಂದು ಹೇಳಿದರು.
ಮೂರು ವರ್ಷಗಳ ನಂತರ ಮತ್ತೆ ಕಿರುತೆರೆಯ ರಿಯಾಲಿಟಿ ಶೋಗೆ ಮರಳಿರುವ ಪುನೀತ್ ರಾಜ್ ಕುಮಾರ್ ಗೆ ಫ್ಯಾಮಿಲಿ ಪವರ್ ಇಷ್ಟವಾಗಿದೆಯಂತೆ. ಕನ್ನಡ ಕೋಟ್ಯಧಿಪತಿಗಿಂತ ಇದು ವಿಭಿನ್ನ ಶೋ. ಇಲ್ಲಿ ಕುಟುಂಬದ ಜೊತೆ ಸಂವಾದಕ್ಕೆ ಹೆಚ್ಚು ಅವಕಾಶವಿದ್ದು, ಶೋಗೆ ಬರುವವರು ತೋರಿಸುವ ಪ್ರೀತಿಯಿಂದ ಖುಷಿಯಾಗಿದ್ದೇನೆ ಎನ್ನುತ್ತಾರೆ.