ಬೆಂಗಳೂರು: ತಮ್ಮ ೫೦ ನೆಯ ಸಿನೆಮಾಗೆ ಸ್ಕ್ರಿಪ್ಟ್ ರಚಿಸಲು ಚಿಕ್ಕಮಗಳೂರಿನಲ್ಲಿ ಏಕಾಂತಕ್ಕೆ ಮೊರೆ ಹೋಗಿದ್ದ ನಟ-ನಿರ್ದೇಶಕ ಉಪೇಂದ್ರ ಮರಳಿದ್ದಾರೆ. ಈಗ ಅವರ ಮುಂದಿನ ಚಿತ್ರ 'ಉಪೇಂದ್ರ ಮತ್ತೆ ಹುಟ್ಟು ಬಾ.. ಇಂತಿ ನಿನ್ನ ಪ್ರೇಮ' ಸಿನೆಮಾದ ಅಳಿದುಳಿದ ಭಾಗದ ಚಿತ್ರೀಕರಣ ಮುಗಿಸಲಿದ್ದಾರೆ. ಈ ಸಿನೆಮಾ ಆಗಸ್ಟ್ ನಲ್ಲಿ ತೆರೆಕಾಣಲಿದೆ.
ಇದರ ನಂತರ ಸ್ಕ್ರಿಪ್ಟ್ ಚರ್ಚೆಗೆ ನಿರ್ಮಾಪಕ ಶ್ರೀರಾಮ್ ಜೊತೆಗೆ ಮತ್ತೆ ಬೆಟ್ಟದತ್ತ ಮುಖ ಮಾಡಲಿದ್ದು ತದನಂತರ 'ಉಪ್ಪಿ ರುಪೀ' ಚಿತ್ರೀಕರಣದಲ್ಲಿ ಉಪೇಂದ್ರ ತೊಡಗಿಸಿಕೊಳ್ಳಲಿದ್ದಾರಂತೆ.
ಉಪ್ಪಿ ತಮ್ಮ ಹುಟ್ಟುಹಬ್ಬವಾದ ಸೆಪ್ಟೆಂಬರ್ ೧೮ ರಂದು ಅವರೇ ನಿರ್ದೇಶಿಸುತ್ತಿರುವ ೫೦ ನೆಯ ಚಿತ್ರಕ್ಕೆ ಚಾಲನೆ ನೀಡಲಿದ್ದಾರೆ. ಈ ಸಿನೆಮಾದ ಕಥೆ ಏನಿರಬಹುದೆಂಬ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚುತ್ತಿದ್ದರೂ, ನಟ, ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸ್ವಚ್ಛ ಭಾರತ ಅಭಿಯಾನ, ನೋಟು ಹಿಂಪಡೆತ ನಿರ್ಧಾರಗಳಿಂದ ಪ್ರಭಾವಿತರಾಗಿದ್ದು, ಅದರ ಸುತ್ತ ಕಥೆ ಸುತ್ತಲಿದೆಯೇ ಎಂಬ ಊಹಾಪೋಹಗಳು ಎದ್ದಿವೆ. ಆದರೆ ಬಲ್ಲ ಮೂಲಗಳು ತಿಳಿಸುವಂತೆ ರಾಜಕೀಯ ವಿಷಯವನ್ನು ಉಪ್ಪಿ ತೆಗೆದುಕೊಂಡಿಲ್ಲ ಬದಲಾಗಿ ಅವರು ಪರೀಕ್ಷಿಸಿ ಗೆದ್ದಿರುವ ಕಮರ್ಷಿಯಲ್ ಮನರಂಜನಾ ಶೈಲಿಯ ಸಿನೆಮಾ ಬರೆದಿದ್ದಾರೆ ಎನ್ನಲಾಗಿದೆ.
ಸ್ಕ್ರಿಪ್ಟ್ ರಚನೆಯ ಸಂದರ್ಭದಲ್ಲಿ ಉಪ್ಪಿಯ ಜೊತೆಗಿದ್ದ ನಿರ್ಮಾಪಕ ಶ್ರೀರಾಮ್ ತಿಳಿಸುವಂತೆ "ಅವರು 'ಎ', 'ಉಪೇಂದ್ರ' ಇಂತಹ ತಮ್ಮ ಟ್ರೇಡ್ ಮಾರ್ಕ್ ಸಿನೆಮಾಗಳಿಗೆ ಹಿಂದಿರುಗುತ್ತಿದ್ದಾರೆ. ಆದುದರಿಂದ ರಾಜಕೀಯ ಮತ್ತು ತಾತ್ವಿಕ ವಿಷಯಗಳಿಗೆ ಬ್ರೇಕ್ ಹಾಕುತ್ತಿದ್ದಾರೆ. ಇದರ ವಿವರಗಳನ್ನು ಈಗ ನೀಡಲಾರೆ ಆದರೆ ಇದು ಕಮರ್ಷಿಯಲ್ ಚಿತ್ರ" ಎನ್ನುತ್ತಾರೆ.
"ಜನ ಪ್ರತಿ ದಿನ ರಾಜಕೀಯ ನೋಡುತ್ತಾರೆ ಮತ್ತು ಅದನ್ನು ಮತ್ತೆ ತೆರೆಯ ಮೇಲೆ ಕಾಣಲು ಇಷ್ಟ ಪಡುತ್ತಾರೆ ಎಂದು ನನಗೆ ಗೊತ್ತು. ಈ ಮಧ್ಯೆ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಉಪೇಂದ್ರ ಅವರ 'ಸೂಪರ್' ಸಿನೆಮಾ ವೀಕ್ಷಿಸಿ ಇಂತಹ ರಾಜಕೀಯ ವಿಡಂಬನಾ ಚಿತ್ರಗಳು ಆಸ್ಕರ್ ಗೆ ಹೋಗಬೇಕು ಅಂದಿದ್ದರು. ಆದರೆ ಉಪ್ಪಿ ಎಷ್ಟು ಬಾರಿ ರಾಜಕೀಯದ ಬಗ್ಗೆ ಮಾತನಾಡಬೇಕು? ಇದು ಮಾಸ್ ಸಿನೆಮಾ ಆಗಲಿದ್ದು ಸಂಪೂರ್ಣ ಮನರಂಜನೆ ನೀಡಲಿದೆ" ಎನ್ನುತ್ತಾರೆ ಶ್ರೀರಾಮ್.