ಸಿನಿಮಾ ಸುದ್ದಿ

ಸೆಂಚುರಿ ಸ್ಟಾರ್ ಶಿವಣ್ಣಗೆ ಆಕ್ಷನ್ ಕಟ್ ಹೇಳಲಿರುವ ಕಾಲಿವುಡ್ ನಿರ್ದೇಶಕ ಯಾರು ಗೊತ್ತಾ?

Raghavendra Adiga
ಬೆಂಗಳೂರು: ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಗೆ ಎಂದಿಗೂ ಅವಕಾಶಗಳ ಕೊರತೆ ಎದುರಾಗುವುದಿಲ್ಲ. ರವಿ ವರ್ಮಾ ನಿರ್ದೇಶನದ "ರುಸ್ತುಂ", ಪ್ರಮೋದ್ ಚಕ್ರವರ್ತಿ ಅವರ "ದ್ರೋಣ" ನಡುವೆಯೇ ಈಗ ತಮಿಳು ನಿರ್ದೇಶಕ ಎಂ ಮುತ್ತಯ್ಯ ಅವರ ಚಿತ್ರದಲ್ಲಿ ಕಾಣಿಸಿಕೊಳ್ಳುವವರಿದ್ದಾರೆ. ತಮಿಳಿನ ಖ್ಯಾತ ನಿರ್ಮಾಪಕ ಕೆ.ಇ. ಜ್ಞಾನವೇಲ್ ರಾಜಾ ಈ ಚಿತ್ರಕ್ಕೆ ಬಂಡವಾಳ ತೊಡಗಿಸಲಿದ್ದಾರೆ.
ಪ್ರಸ್ತುತ "ದೇವರಾಟ್ಟಂ" ಚಿತ್ರ ನಿರ್ದೇಶನದಲ್ಲಿ ತೊಡಗಿರುವ ಮುತ್ತಯ್ಯ ಕುಟ್ಟಿ ಪುಲ್ಲಿ, ಕೊಂಭಂ ಇನ್ನೂ ಮುಂತಾದ ಪ್ರಸಿದ್ದ ಚಿತ್ರಗಳಿಗೆ ಹೆಸರಾಗಿದ್ದಾರೆ.ಇನ್ನು ಶಿವರಾಜ್ ಕುಮಾರ್ ಅಭಿನಯದ ಚಿತ್ರ ಮುತ್ತಯ್ಯ ಅವರ ಪಾಲಿನ ಮೊದಲ ಕನ್ನಡ ಚಿತ್ರವಾಗಲಿದೆ. ಸೋಮವಾರ ಚಿತ್ರದ ನಿರ್ಮಾಪಕರು ಮತ್ತು ನಿರ್ದೇಶಕ ಕನ್ನಡದ ಸೆಂಚುರಿ ಸ್ಟಾರ್ ಶಿವಣ್ಣನನ್ನು ಭೇಟಿಯಾಗಿ ಈ ಕುರಿತ ಮಾತುಕತೆ ಅಂತಿಮಗೊಳಿಸಿದ್ದಾರೆ.
ಶಿವರಾಜ್ ಕುಮಾರ್ ಈಗ ಅಭಿನಯಿಸುತ್ತಿರುವ ಎರಡು ಚಿತ್ರಗಳಲ್ಲಿನ ತಮ್ಮ ಶಡ್ಯೂಲ್ ಮುಗಿದ ಬಳಿಕ ಈ ನೂತನ ಚಿತ್ರ ಪ್ರಾರಂಭಗೊಳ್ಳುತ್ತದೆ ಎಂದು ನಮಗೆ ಸಿಕ್ಕಿದ ಅಧಿಕೃತ ಮಾಹಿತಿ ಹೇಳಿದೆ.
ಇನ್ನು ಶಿವಣ್ಣ ಅಭಿನಯದ ಚಿತ್ರಕ್ಕೆ ಮುತ್ತಯ್ಯ ತಾವೇ ಕಥೆ ಬರೆದಿದ್ದಾರೆಯೆ ಅಥವಾ ತಮಿಳು ಚಿತ್ರಗಳಿಂದ ಪ್ರಭಾವಿತರಾಗಿ ಇದನ್ನೇ ಕನ್ನಡಕ್ಕೆ ತರಲು ಉದ್ದೇಶಿಸಿದ್ದಾರೆಯೆ ಎನ್ನುವುದು ಇನ್ನೂ ತಿಳಿದು ಬಂದಿಲ್ಲ.
ಏತನ್ಮಧ್ಯೆ ಲಕ್ಕಿ ಗೋಪಾಲ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ "ಎಸ್ ಆರ್ ಕೆ" ಚಿತ್ರದ ಪ್ರಾಥಮಿಕ ಕೆಲಸ ಪ್ರಾರಂಭಗೊಂಡಿದೆ.ಈ ಚಿತ್ರದಲ್ಲಿ ಹ್ಯಾಟ್ರಿಕ್ ಹೀರೋ ಶಿವಣ್ಣ ನೃತ್ಯ ತರಬೇತುದಾರರಾಗಿ ಕಾಣಿಸಿಕೊಳ್ಳಲಿದ್ದಾರೆ.
SCROLL FOR NEXT