ನಟ ಕಿಚ್ಚ ಸುದೀಪ್ ಅವರ ಹೊಸ ಸಿನಿಮಾದ ಶೂಟಿಂಗ್ ಆರಂಭವಾಗಿದ್ದು, ಚೆನ್ನೈನ ಮಹಾಬಲಿಪುರಂನಲ್ಲಿ ಚಿತ್ರೀಕರಣ ನಡೆಯುತ್ತಿದೆ. ವರ್ಷಾಂತ್ಯಕ್ಕೆ ಚಿತ್ರ ಬಿಡುಗಡೆಯಾಗಲಿದೆ ಎಂದು ತಿಳಿದುಬಂದಿದೆ.
ಸಿನಿಮಾ ಚಿತ್ರೀಕರಣದಲ್ಲಿ ತೊಡಗಿಕೊಂಡಿರುವ ಸುದೀಪ್ ಅವರು, ಚಿತ್ರದ ಕುರಿತು ಪತ್ರಕರ್ತರ ಜೊತೆಗೆ ಮಾತಿಗಿಳಿದರು.
ತಿಂಗಳಾಂತ್ಯದವರೆಗೆ ಚಿತ್ರೀಕರಣ ನಡೆಯಲಿದೆ. ಹುಟ್ಟಹಬ್ಬದ ಪ್ರಯುಕ್ತ ಸೆಪ್ಟೆಂಬರ್ ಮೊದಲವಾರದಲ್ಲಿ ಸ್ವಲ್ಪ ವಿರಾಮ ತೆಗೆದುಕೊಂಡು ಮರಳಿ ಚಿತ್ರೀಕರಣದಲ್ಲಿ ತೊಡಗಿಕೊಳ್ಳುತ್ತೇನೆಂದು ಸುದೀಪ್ ಹೇಳಿದ್ದಾರೆ.
'ಈ ಸಿನಿಮಾ ನಿರ್ದೇಶಕ ವಿಜಯ್ ಕಾರ್ತಿಕೇಯ ಹಾಗೂ ನಿರ್ಮಾಣ ಸಂಸ್ಥೆ ವಿಕ್ರಿಯೇಷನ್ಸ್, ತಮಿಳು ಸಿನಿಮಾ ಮಾಡುವ ಯೋಜನೆ ಹಾಕಿಕೊಂಡು ಬಂದಿದ್ದರು. ಕಥೆ ಕೇಳಿ ಕನ್ನಡದಲ್ಲೇ ಈ ಸಿನಿಮಾ ನಿರ್ಮಾಣ ಮಾಡಲು ತಿಳಿಸಿದೆ. ಕನ್ನಡದಲ್ಲೇ ಹಲವು ಸಿನಿಮಾ ರಾಷ್ಟ್ರವ್ಯಾಪಿ ತಲುಪಿದೆ. ಇದೂ ಹಾಗೆಯೇ ಆಗಲಿ ಎಂದೆ. ತಮಿಳು ಹಾಗೂ ಕನ್ನಡದಲ್ಲಿ ಏಕಕಾಲದಲ್ಲಿ ಶೂಟಿಂಗ್ ಇಂದಿನ ದಿನಗಳಲ್ಲಿ ಅಗತ್ಯವೂ ಇಲ್ಲ ಎಂದೆ. ನನ್ನ ಮಾತಿಗೆ ಅವರು ಒಪ್ಪಿಗೆ ಸೂಚಿಸಿದರು.
ಬಹುತೇಕ ತಮಿಳು ತಂತ್ರಜ್ಞರ ತಂಡವೇ ಅವರ ಪಟ್ಟಿಯಲ್ಲಿತ್ತು. ನಾನು ಅವರ ಬದಲಾಗಿ ಅಜನೀಶ್ ಲೋಕನಾಥ್, ಶೇಖರ್ ಚಂದ್ರ ಮುಂತಾದ ಕನ್ನಡ ತಂತ್ರಜ್ಞರ ಹೆಸರು ಸೂಚಿಸಿದೆ. ಇದೇ ಕಾರಣಕ್ಕಾಗಿ ಇಂದು ತಮಿಳುನಾಡಿನಲ್ಲಿ ಶೂಟಿಂಗ್ ನಡೆಯುತ್ತಿದ್ದರೂ, ತಂಡದ ಶೇ 90 ಜನ ಕನ್ನಡಿಗರಿದ್ದಾರೆ.
ಬಹುತೇಕ ಕಲಾವಿದರೂ ಕನ್ನಡಿಗರೇ. ಮಹಾಬಲಿಪುರಂ ಸಮೀಪ ಕೈಗಾರಿಕೆಗಳ ಬ್ಯಾಕ್ ಡ್ರಾಪ್ ನಲ್ಲಿ ಬೃಹತ್ ಸೆಟ್ ನಿರ್ಮಾಣ ಮಾಡಿ, ಈ ಸಿನಿಮಾದ ಶೂಟಿಂಗ್ ನಡೆಯತ್ತಿದೆ. ಇಲ್ಲಿನ ಶೂಟಿಂಗ್ ಬಳಿಕ ಪಾಂಡಿಚೇರಿ ಸೇರಿ ಕೆಲವು ಕಡೆ ಶೂಟಿಂಗ್ ಇರಲಿದೆ. ಇದೇ ವರ್ಷ ಈ ಸಿನಿಮಾವನ್ನು ತೆರೆಗೆ ತರುವ ಹಠದಲ್ಲಿ ನಾನಿದ್ದೇನೆ' ಎಂದು ಹೇಳಿದರು.
ಕಿಚ್ಚ 46 ಜೊತೆಗೆ ಇನ್ನೂ 4 ಚಿತ್ರಗಳಿಗೆ ಒಪ್ಪಿಗೆ ಸೂಚಿಸಿದ್ದೇನೆ. ವರ್ಷಕ್ಕೆ ಎರಡು ಚಿತ್ರಗಳ ಬಿಡುಗಡೆ ಮಾಡುವ ಗುರಿಯಿದೆ. ಮುಂಬರುವ ದಿನಗಳಲ್ಲಿ ಈ ಕುರಿತು ಹೆಚ್ಚಿನ ಮಾಹಿತಿ ಹಂಚಿಕೊಳ್ಳುತ್ತೇನೆಂದು ತಿಳಿಸಿದ್ದಾರೆ.