ಸಿನಿಮಾ ಸುದ್ದಿ

ಹುಲಿ ಉಗುರು ಲಾಕೆಟ್ ಧರಿಸಿದ ಆರೋಪ: ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಗೆ 14 ದಿನ ನ್ಯಾಯಾಂಗ ಬಂಧನ

Sumana Upadhyaya

ಬೆಂಗಳೂರು: ಹುಲಿ ಉಗುರಿನ ಲಾಕೆಟ್‌ ನ್ನು ಕುತ್ತಿಗೆ ಸರದಲ್ಲಿ ಧರಿಸಿದ ಆರೋಪದಲ್ಲಿ ಬಂಧನಕ್ಕೀಡಾಗಿರುವ ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಗೆ  14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ. 

ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯಾಧಿಕಾರಿಗಳು 2ನೇ ಎಸಿಜೆಎಂ ಕೋರ್ಟ್ ನ ಮ್ಯಾಜಿಸ್ಟ್ರೇಟ್ ನಿವಾಸಕ್ಕೆ ಇಂದು ಹಾಜರು ಪಡಿಸಿದ್ದರು. ವಿಚಾರಣೆ ನಡೆಸಿದ ಎಸಿಜೆಎಂ ನ್ಯಾಯಧೀಶರು  ಬಳಿಕ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಹಬ್ಬದ ಹಿನ್ನೆಲೆ ಎರಡು ದಿನ ಕೋರ್ಟ್ ರಜೆ ಇದ್ದ ಕಾರಣ  ಕೋರಮಂಗಲದ ನ್ಯಾಷನಲ್ ಗೇಮ್ಸ್ ವಿಲೇಜ್ ನಲ್ಲಿರುವ ಜಡ್ಜ್‌ ನಿವಾಸಕ್ಕೆ ಕರೆದೊಯ್ದು ಸಂತೋಷ್‌ರನ್ನು ಹಾಜರು ಪಡಿಸಲಾಯಿತು. 

ನ್ಯಾಯಾಂಗ ಬಂಧನದ ಬಳಿಕ ಪ್ರತಿಕ್ರಿಯೆ ನೀಡಿರುವ ವರ್ತೂರು ಸಂತೋಷ್ ಪರ ವಕೀಲ ನಟರಾಜ್ ಜಾಮೀನು ಅರ್ಜಿ ಹಾಕಿದ್ದೇವೆ. ಬುಧವಾರ ವಿಚಾರಣೆ ಇದೆ. ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸೂಚಿಸಿದ್ದಾರೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲು ಮಾಡಲಾಗಿದೆ. ಸುಪ್ರೀಂ ಕೋರ್ಟ್ ಆದೇಶದಂತೆ ತನಿಖಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ನಂತರ  ಬಂಧಿಸಿದ್ದಾರೆ. ಈಗ ಹುಲಿದು ಅಂತಾ ಹೇಳ್ತಿದ್ದಾರೆ. ಎಕ್ಸ್ಫರ್ಟ್ ಪರಿಶೀಲನೆ ನಡೆಸಿ ವರದಿ ಬಂದ ಬಳಿಕ ಗೊತ್ತಾಗಲಿದೆ ಎಂದರು. 

ಸದ್ಯ 14 ದಿನ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ವರ್ತೂರು ಸಂತೋಷ್ ಅವರನ್ನು ಪರಪ್ಪನ ಅಗ್ರಹಾರಕ್ಕೆ ರವಾನೆ ಮಾಡಲಾಗಿದೆ. 

SCROLL FOR NEXT