ಬೆಂಗಳೂರು: ನಟ ಮತ್ತು ಪ್ರಜಾಕೀಯ ಪಕ್ಷದ ಸಂಸ್ಥಾಪಕ ಉಪೇಂದ್ರ ಅವರು ಮುಂಬರುವ ಜಿಬಿಎ ಮತ್ತು 2028ರ ವಿಧಾನಸಭೆ ಚುನಾವಣೆಗೂ ಮುನ್ನ ಪ್ರಜಾಕೀಯದಲ್ಲಿ ಹೊಸ ವ್ಯವಸ್ಥೆ ಜಾರಿ ಮಾಡಿದ್ದಾರೆ.
‘ದಿ ರಿಯಲ್ ಪ್ರಜಾಕೀಯ’ ಎಂಬ ಹೊಸ ಆ್ಯಪ್ ಮೂಲಕ ಆಡಳಿತ ಬದಲಾವಣೆಗೆ ಉಪೇಂದ್ರ ಹೆಜ್ಜೆ ಇಟ್ಟಿದ್ದು ಜನರು ಹಾಗೂ ಪ್ರಜಾಕೀಯ ಮಧ್ಯೆ ನೇರ ಸಂಪರ್ಕಕ್ಕೆ ಹೊಸ ವೇದಿಕೆ ಕಲ್ಪಿಸಿದ್ದಾರೆ. ಈ ಮೂಲಕ ಜನರೊಂದಿಗೆ ನಿರಂತರ ಸಂಪರ್ಕಕ್ಕೆ ಪ್ರಯತ್ನ ಮಾಡಿದ್ದಾರೆ.
ಪ್ರೆಸ್ಕ್ಲಬ್ ನಲ್ಲಿ ಬುಧವಾರ ಉಪೇಂದ್ರ ತಮ್ಮ ಪ್ರಜಾಕೀಯ ಪಕ್ಷದ ‘ದಿ ರಿಯಲ್ ಪ್ರಜಾಕೀಯ’ ಎಂಬ ಆ್ಯಪ್ ಅನ್ನು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಉಪೇಂದ್ರ, ಏಪ್ರಿಲ್ 1ನ್ನ ಮೂರ್ಖರ ದಿನ ಎಂದು ಕರೆಯುವ ಬದಲು ಅದನ್ನು ‘ಬುದ್ಧಿವಂತರ ದಿನ’ ಎಂದು ಆಚರಿಸಬೇಕು ಎಂದು ಕರೆ ನೀಡಿದರು. ನಾನು ಬರ್ತಿನಿ, ನಿಮ್ಮನ್ನೆಲ್ಲಾ ಉದ್ದಾರ ಮಾಡ್ತೀನಿ, ಸಮಯ ಬರುವವರೆಗೂ ಕಾಯುತ್ತಿರುತ್ತೇನೆ, ಸದಾ ಹೊಸ ಪ್ರಯತ್ನ ನಾನು ಮಾಡುತ್ತಿರುತ್ತೇನೆ, ನೀವು ನನ್ನ ದಡ್ಡ, ಮೂರ್ಖ ಅಂದರೂ ಪರವಾಗಿಲ್ಲ, ನಾನು ನನ್ನ ಪ್ರಯತ್ನ ಮುಂದುವರಿಸುತ್ತಾ ಇರುತ್ತೇನೆ ಎಂದರು.
ಪ್ರಜಾಕೀಯದಲ್ಲಿ ನಾಯಕತ್ವದ ಪರಿಕಲ್ಪನೆಯೇ ಇಲ್ಲ ಎಂದು ಪುನರುಚ್ಚರಿಸಿದ ಉಪೇಂದ್ರ, ನಮಗೆ ಜನರ ಬೇಡಿಕೆಗಳನ್ನು ಈಡೇರಿಸಲು ನಾಯಕ ಬೇಡ, ಕೆಲಸ ಮಾಡುವ ಕಾರ್ಮಿಕ ಬೇಕು. ಯಾರು ಜವಾಬ್ದಾರಿ ತೆಗೆದುಕೊಳ್ಳುತ್ತಾರೋ ಅಂತಹವರು ಮಾತ್ರ ನಮ್ಮ ಪಾರ್ಟಿಗೆ ಬರಲಿ. ಸದ್ಯಕ್ಕೆ ಮುನ್ಸಿಪಲ್ ಚುನಾವಣೆಗಾಗಿ ವಾರ್ಡ್ ವಾರು ಮಾಡಲ್ ಸಿದ್ಧಪಡಿಸಿದ್ದೇವೆ. ಏರಿಯಾದ ಪ್ರತಿ ಸಮಸ್ಯೆಯನ್ನು ಗುರುತಿಸಿ, ಅದಕ್ಕೆ ಪರಿಹಾರ ನೀಡುವ ಚಾರ್ಟ್ ಸಿದ್ಧಪಡಿಸಲಾಗಿದೆ ಎಂದರು.
ಪ್ರಜಾಕೀಯ ಪಕ್ಷ ಆಕ್ಟಿವ್ ಆಗಿಲ್ಲ ಎಂಬ ಟೀಕೆಗಳಿಗೆ ಉತ್ತರಿಸಿದ ಉಪೇಂದ್ರ, ನಮ್ಮ ಪಕ್ಷ ಕೋಮಾದಲ್ಲಿಲ್ಲ. ಹಾಗೆ ನೋಡುವವರೇ ಕೋಮಾದಲ್ಲಿರುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿನ ಕಮೆಂಟ್ ನೋಡಿ ನಮ್ಮ ಪಕ್ಷದ ಬಗ್ಗೆ ನಿರ್ಧಾರ ಮಾಡಬೇಡಿ. ‘ರೈಟ್ ಟು ರೀಕಾಲ್’ ಕಾನೂನು ಬರುವವರೆಗೂ ನಮ್ಮ ಹೋರಾಟ ಮುಂದುವರಿಯುತ್ತದೆ. ನಮ್ಮ ಪಕ್ಷದಿಂದ ಏನನ್ನೂ ನಿರೀಕ್ಷೆ ಮಾಡಬೇಡಿ. ಇದು ಬಿಜೆಪಿ ಪಕ್ಷವಲ್ಲ. ಇದು ಪ್ರಜಾಕೀಯ ಪಕ್ಷ ಎಂದರು. ತಾವೇ ಸ್ವತಃ ಚುನಾವಣೆಗೆ ನಿಲ್ಲುವ ಬಗ್ಗೆ ಕೇಳಿದ ಪ್ರಶ್ನೆಗೆ, ಮುಂದೆ ನೋಡೋಣ, ಸದ್ಯಕ್ಕೆ ಜನರಿಗೆ ಅವಕಾಶ ಸಿಗಬೇಕು ಎಂದು ಉತ್ತರಿಸಿದರು.
ಸದ್ಯಕ್ಕೆ ಮುನಿಸಿಪಲ್ ಚುನಾವಣೆ ಬಗ್ಗೆ ಮಾಡೆಲ್ ರೆಡಿ ಮಾಡಿಕೊಂಡಿದ್ದೇವೆ. ವಾರ್ಡ್ ವಾರು ಹೋದರೆ ಏರಿಯಾದ ಪ್ರತಿ ಸಮಸ್ಯೆಗಳನ್ನು ಇಲ್ಲಿ ರೈಸ್ ಮಾಡಬಹುದು. ಅದಕ್ಕೆ ಪರಿಹಾರ ಕೂಡ ಚಾರ್ಟ್ ಮೂಲಕವೇ ತಿಳಿಸಿದ್ದೇವೆ. ವರ್ಕ್ ಹೇಗೆ ಮಾಡಬೇಕು ಅನ್ನೋದನ್ನ ಸ್ಪರ್ಧಿಗಳಲ್ಲಿ ಹೇಳಿ ಸೈನ್ ಮಾಡಿಸಿರುತ್ತೇವೆ ಎಂದರು.