ಬೆಂಗಳೂರು: ಶುಕ್ರವಾರ ಪ್ರಸಕ್ತ ಸಾಲಿನ ರಾಜ್ಯ ಬಜೆಟ್ ಮಂಡನೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕನ್ನಡ ಚಿತ್ರರಂಗಕ್ಕೆ ಭರ್ಜರಿ ಕೊಡುಗಗಳನ್ನು ನೀಡಿದ್ದಾರೆ.
ಕರ್ನಾಟಕದ ಚಿತ್ರೋದ್ಯಮಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಮುಖ್ಯಮಂತ್ರಿಗಳು ‘ಸಿನಿ ಮಿತ್ರ’ (Cine Mitra) ಎಂಬ ಸಿಂಗಲ್–ವಿಂಡೋ ಡಿಜಿಟಲ್ ಪೋರ್ಟಲ್ ಆರಂಭಿಸುವುದಾಗಿ ಬಜೆಟ್ನಲ್ಲಿ ಘೋಷಿಸಿದ್ದಾರೆ.
ಈ ಆನ್ಲೈನ್ ವೇದಿಕೆಯ ಮೂಲಕ ವಿವಿಧ ಇಲಾಖೆಗಳ ಶೂಟಿಂಗ್ ಅನುಮತಿಗಳನ್ನು ಒಂದೇ ವೇದಿಕೆಯಲ್ಲಿ ಸುಲಭವಾಗಿ ಪಡೆಯಬಹುದಾಗಿದೆ. ಇದರಿಂದ ಚಿತ್ರ ನಿರ್ಮಾಪಕರು ಚಿತ್ರೀಕರಣಕ್ಕೆ ಬೇಕಾದ ಅನುಮತಿಗಳನ್ನು ವೇಗವಾಗಿ ಪಡೆಯಲು ಸಾಧ್ಯವಾಗಲಿದೆ.
ಇದಲ್ಲದೆ, ಚಿತ್ರೋದ್ಯಮಕ್ಕೆ ಉತ್ತೇಜನ ನೀಡಲು ರಾಜ್ಯ ಸರ್ಕಾರವು 20 ಕೋಟಿ ರೂ. ಸಬ್ಸಿಡಿ ನೀಡುವುದಾಗಿ ಘೋಷಿಸಿದೆ.
ಚಿತ್ರಿಕರಣ ಸ್ಥಳಗಳನ್ನು ಉತ್ತೇಜಿಸಲು ‘ಕರ್ನಾಟಕ ಫಿಲ್ಮ್ ಲೊಕೇಶನ್ ಡಿಜಿಟಲ್ ಮ್ಯಾಪ್’ ಅನ್ನು 1 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಈ ಡಿಜಿಟಲ್ ಮ್ಯಾಪ್ನಲ್ಲಿ ರಾಜ್ಯದ ಪ್ರವಾಸಿ ತಾಣಗಳು, ಐತಿಹಾಸಿಕ ಸ್ಮಾರಕಗಳು ಹಾಗೂ ಚಿತ್ರಿಕರಣಕ್ಕೆ ಸೂಕ್ತ ಸ್ಥಳಗಳ ಬಗ್ಗೆ ಸಮಗ್ರ ಮಾಹಿತಿ ಲಭ್ಯವಾಗಲಿದೆ.
ಇದಲ್ಲದೆ ಸರ್ಕಾರಿ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆ (ಹೆಸರಘಟ್ಟ)ಯಲ್ಲಿ ಸೌಂಡ್ ರೆಕಾರ್ಡಿಂಗ್ , ಎಂಜಿನಿಯರಿಂಗ್ ಮತ್ತು ಛಾಯಾಗ್ರಹಣ ಕೋರ್ಸ್ಗಳಿಗೆ ಆಧುನಿಕ ಉಪಕರಣಗಳನ್ನು ಒದಗಿಸಲಾಗುವುದು ಸರ್ಕಾರ ಘೋಷಿಸಿದೆ.
ಮತ್ತೊಂದೆಡೆ ಮೈಸೂರಿನಲ್ಲಿ ಸುಮಾರು 500 ಕೋಟಿ ರೂ. ವೆಚ್ಚದಲ್ಲಿ ಫಿಲ್ಮ್ ಸಿಟಿ ನಿರ್ಮಾಣ ಯೋಜನೆಯನ್ನು ಮುಂದುವರಿಸಲಾಗುವುದು. ಈ ಯೋಜನೆಯಲ್ಲಿ ಥೀಮ್ ಪಾರ್ಕ್, ಸ್ಟಾರ್ ಹೋಟೆಲ್ಗಳು ಮತ್ತು ರೆಸ್ಟೋರೆಂಟ್ಗಳಂತಹ ಹೆಚ್ಚುವರಿ ಸೌಲಭ್ಯಗಳನ್ನು ಕೂಡ ಒಳಗೊಂಡಿರಲಿವೆ ಎಂದು ತಿಳಿಸಿದ್ದಾರೆ.
ಸಾಂಸ್ಕೃತಿಕ ಯೋಜನೆಗಳ ಭಾಗವಾಗಿ ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ನಿವಾಸವನ್ನು ವಸ್ತುಸಂಗ್ರಹಾಲಯವಾಗಿ ಅಭಿವೃದ್ಧಿಪಡಿಸುವುದು, 'ಡಿಜಿಟಲ್ ದೃಶ್ಯ ಕರ್ನಾಟಕ' ಎಂಬ ಡಿಜಿಟಲ್ ಆರ್ಕೈವಲ್ ವೇದಿಕೆಯನ್ನು 5 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುವ ಯೋಜನೆಯನ್ನೂ ಸರ್ಕಾರ ಘೋಷಿಸಿದೆ.
ಗಾಂಧಿ ಜಾಗೃತಿ ಯೋಜನೆ
ರಾಜ್ಯದಲ್ಲಿ ಯುವಜನರಲ್ಲಿ ಮಹಾತ್ಮ ಗಾಂಧಿ ಅವರ ಆದರ್ಶಗಳನ್ನು ಹರಡುವ ಉದ್ದೇಶದಿಂದ ‘ಮಹಾತ್ಮ ಗಾಂಧಿ ಜನ ಶಿಕ್ಷಣ ಕೇಂದ್ರ’ ಯೋಜನೆಯನ್ನು ಆರಂಭಿಸಲಾಗುತ್ತದೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.
ಈ ಯೋಜನೆಯ ಮೂಲಕ ರಾಜ್ಯದ ಗಾಂಧಿ ಭವನಗಳನ್ನು ಪುನರುಜ್ಜೀವನಗೊಳಿಸುವುದು ಮತ್ತು ಯುವಕರಲ್ಲಿ ಗಾಂಧಿಯ ಚಿಂತನೆಗಳನ್ನು ಪರಿಚಯಿಸುವ ಗುರಿಯನ್ನು ಹೊಂದಲಾಗಿದೆ ಎಂದು ಹೇಳಿದ್ದಾರೆ.
ಅದೇ ರೀತಿ ಗಾಂಧೀಜಿ ಕರ್ನಾಟಕಕ್ಕೆ ಭೇಟಿ ನೀಡಿದ ಸ್ಥಳಗಳಲ್ಲಿ ಗಾಂಧಿ ಸ್ಮಾರಕ ಸ್ತಂಭಗಳನ್ನು ನಿರ್ಮಿಸುವುದಾಗಿಯೂ ಸರ್ಕಾರ ಘೋಷಿಸಿದೆ.