ಯುಎಲ್ ಐ ಪಿ (ಸಾಂಕೇತಿಕ ಚಿತ್ರ)
ಯುಎಲ್ ಐ ಪಿ (ಸಾಂಕೇತಿಕ ಚಿತ್ರ) Online Desk
ಅಂಕಣಗಳು

ವಿಮೆಯಲ್ಲಿ ULIP ಅಂದರೇನು?; ಪ್ರಯೋಜನ ಪಡೆಯಲು ಈ ಅಂಶಗಳನ್ನು ಗಮನಿಸಬೇಕು... (ಹಣಕ್ಲಾಸು)

ರಂಗಸ್ವಾಮಿ ಮೂಕನಹಳ್ಳಿ

ನಮಗೆ ನಮ್ಮ ಭವಿಷ್ಯದ ಬಗ್ಗೆ ಒಂದು ಸಣ್ಣ ಭಯ, ಸಂಶಯ ಇರುತ್ತೆ, ಅಕಸ್ಮಾತ್ ನನಗೆ ಏನಾದರು ಅದರೆ ನನ್ನ ನಂಬಿರುವ ಸಂಸಾರದ ಗತಿ ಏನು? ಇದು ಇಂದು ನಿನ್ನೆಯದಲ್ಲ, ಹಿಂದೆ ಇತ್ತು, ಮುಂದೆ ಇರುತ್ತದೆ. ನನ್ನಜ್ಜಿ, ನಾಳೆಯಾರೊ ನಾವ್ಯಾರೊ? ಎಂದು ನಾಳೆಯ ಬಗೆಗೆ ಹೇಳುತಿದ್ದ ಮಾತು ಇನ್ನೂ ನನ್ನ ನೆನಪಲ್ಲಿ ಹಸಿರು. ಮತ್ತೆ ಇದರಲ್ಲಿ ವಿಶೇಷ ಏನು? ಹಿಂದೆ ನಮ್ಮ ಈ ಭಯ, ಸಂಶಯನ ಇಂದಿನ ಮಟ್ಟಿಗೆ ಬಂಡವಾಳ ಮಾಡಿಕೊಂಡಿರಲಿಲ್ಲ ಅಷ್ಟೆ, ಹೌದು ನಾನು ಹೇಳ ಹೊರಟದ್ದು ವಿಮೆಯ ಬಗ್ಗೆ!

ಇಂದು ವಿಮೆ ಕೇವಲ ಜೀವ ವಿಮೆಯಾಗಿ ಉಳಿದಿಲ್ಲ, ಪ್ರಸಿದ್ದರು ತಮ್ಮ ಕೈ, ಕಾಲು, ತುಟಿ, ಸ್ತನ, ಪೃಷ್ಟ ಹೀಗೆ ಎಲ್ಲಕ್ಕೂ ವಿಮೆ ಮಾಡಿಸುವ ಕಾಲವಿದು. ಅಷ್ಟೆ ಅಲ್ಲದೆ ಕಾರು, ಮನೆ, ಮನೆಯಲ್ಲಿನ ಫರ್ನಿಚರ್, ಸರಳವಾಗಿ ಹೇಳಬೇಕೆಂದರೆ ಇಂದು ಎಲ್ಲಕ್ಕೂ ವಿಮೆ ಉಂಟು. ಅದಕ್ಕೆ ನಿಗದಿಯಾದ ಬೆಲೆ ಉಂಟು ಅದು ಕಟ್ಟಲು ನೀವು ತಯಾರಿದ್ದರೆ ಮುಗಿಯಿತು.

ನನ್ನ ಈ ಲೇಖನದ ಉದ್ದೇಶ ವಿಮೆ ಬೇಕೆ? ಮುಖ್ಯ ಜನ ವಿಮೆ ಏಕೆ ಮಾಡಿಸುತ್ತಾರೆ? ಜೀವ ವಿಮೆ ಇರಬಹುದು ಮತ್ಯಾವುದೇ ವಿಮೆ ಇರಬಹುದು ಇದರ ಅವಶ್ಯಕತೆ ಎಷ್ಟು? ವಾಹನ ವಿಮೆ ಕಡ್ಡಾಯ. ಕಡ್ಡಾಯವಲ್ಲದ ವಿಮೆ ನಮಗೆ ಬೇಕೆ? ಎನ್ನುವುದರ ಕುರಿತು.

ಎಲ್ಲಕ್ಕೂ ಮೊದಲಿಗೆ ಆರೋಗ್ಯದ ಮೇಲಿನ ಖರ್ಚು ಇಂದಿನ ದಿನಗಳಲ್ಲಿ ಬಹಳವಾಗಿದೆ. ಯಾರಿಗೆ ಯಾವ ಖಾಯಿಲೆ ಬೇಕಾದರೂ ಬರಬಹುದು. ಆಸ್ಪತ್ರೆ ಖರ್ಚು ಕೆಲವು ಲಕ್ಷಗಳಿಗೆ ಸೀಮಿತವಾಗಿಲ್ಲ. ಅದು ಐವತ್ತು , ಅರವತ್ತು ಲಕ್ಷದ ವರೆಗೂ ಹೋಗುತ್ತಿದೆ. ಇಂತಹ ಸಮಯದಲ್ಲಿ ಪ್ರತಿಯೊಬ್ಬರೂ ಆರೋಗ್ಯ ವಿಮೆ ಮಾಡಿಸುವುದು ಕಡ್ಡಾಯ. ನಾಲ್ಕು ಜನರ ಕುಟುಂಬ ಇಂದು ಕನಿಷ್ಠ ಐವತ್ತು ಲಕ್ಷ ರೂಪಾಯಿ ಕವರೇಜ್ ಪಡೆದುಕೊಳ್ಳಬೇಕು. ವಾಹನ ವಿಮೆಗೆ ವ್ಯಯಿಸುವುದಕ್ಕಿಂತ ಕಡಿಮೆ ಪ್ರೀಮಿಯಂನಲ್ಲಿ ಈ ಸೌಲಭ್ಯಗಳು ಸಿಗುತ್ತಿವೆ. ಆರೋಗ್ಯ ವಿಮೆ ಮಾಡಿಸಿಲ್ಲದಿದ್ದರೆ ತಕ್ಷಣ ಮಾಡಿಸಿ. ವಾಹನ ವಿಮೆ ಕಡ್ಡಾಯ ಮಾಡಿರುವ ಸರಕಾರ, ಆರೋಗ್ಯ ವಿಮೆಯನ್ನು ಕಡ್ಡಾಯ ಮಾಡಿಲ್ಲ. ಆದರೂ ಇದನ್ನು ಮಾಡಿಸುವುದು ನಮ್ಮ ಹಣಕಾಸು ಆರೋಗ್ಯದ ದೃಷ್ಟಿಯಿಂದ ಕಡ್ಡಾಯ.

ಇನ್ನು ಜೀವ ವಿಮೆ , ಇದರಲ್ಲಿ ಟರ್ಮ್ ಇನ್ಸೂರೆನ್ಸ್ ಎನ್ನುವುದನ್ನು ಮಾಡಿಸಲೇಬೇಕು. ಇದು ಎಂಡೋಮೆಂಟ್ ಪಾಲಿಸಿಗಳಂತಲ್ಲ, ಇಲ್ಲಿ ಕಟ್ಟಿದ ಪ್ರೀಮಿಯಂ ಹಣ ಪೂರ್ತಿ ಖರ್ಚು. ಅಂದರೆ ನಾವು ಯಾವುದೇ ತೊಂದರೆಯಿಲ್ಲದೆ ಉಳಿದುಕೊಂಡರೆ ನಮಗೆ ಯಾವುದೇ ಹಣ ವಾಪಸ್ಸು ಬರುವುದಿಲ್ಲ. ಇದೇನಿದ್ದರೂ ಜೀವಹಾನಿ ಆದಾಗ ಮಾತ್ರ ಉಪಯೋಗಕ್ಕೆ ಬರುತ್ತದೆ. ಹೀಗಾಗಿ ಇದರ ಮೇಲೆ ಭಾರತೀಯರಿಗೆ ಅಷ್ಟು ಒಲವಿಲ್ಲ. ಆದರೆ ಇಂದಿನ ಅಸ್ಥಿರ ಸಮಯದಲ್ಲಿ ಈ ರೀತಿಯ ಇನ್ಸೂರೆನ್ಸ್ ಪಾಲಿಸಿ ಮಾಡಿಸುವುದು ಬಹಳ ಮುಖ್ಯ.

ನಾನು ಮೊದಲೆ ಹೇಳಿದಂತೆ ಜೀವನದಲ್ಲಿ ಅಸ್ಥಿರತೆ, ಸಂಶಯ, ಭಯ ಸಹಜ, ನಮ್ಮ ಈ ಗುಣವನ್ನು ಬಂಡವಾಳ ಮಾಡಿಕೊಂಡ ಕಂಪನಿಗಳು ಇಂದು ಬ್ಯಾಂಕ್ ಖರೀದಿಸುವ ಮಟ್ಟಕ್ಕೆ ಬೆಳೆದಿವೆ, ಇವಕ್ಕೆ ಈ ಮಟ್ಟದ ಲಾಭ ಹೇಗೆ ಬರುತ್ತವೆ ಯೋಚಿಸಿದ್ದಿರಾ? ಉತ್ತರ ಬಹಳ ಸರಳ. ಈ ವ್ಯಾಪಾರ ನಿಂತಿರುವುದೆ "ರೆ" ಪ್ರಪಂಚದಲ್ಲಿ. ಮುಕ್ಕಾಲು ಪಾಲು ನೀವು ಏನೋ ಆಗಿಬಿಟ್ಟರೆ ಎಂದು ಕಟ್ಟಿದ ಕಂತು ಅವರ ಲಾಭಕ್ಕೆ ಸೇರುತ್ತದೆ. ನಿಮಗೆ ಸಿಗುವುದು ಅವರು ನಿಗದಿಪಡಿಸಿದ ಒಂದಷ್ಟು ಹಣ ಅಷ್ಟೆ.

ನಾವು ಕಟ್ಟುವ ಕಂತು ಹಣ, ಸುತ್ತಿ ಬಳಸಿ ಸೇರುವುದು ಕಾರ್ಪೊರೇಟ್ ದೊರೆಗಳ ಹೊಟ್ಟೆಯನ್ನೆ, ಎರಡು ವರ್ಷಕ್ಕೋ, ಐದು ವರ್ಷಕ್ಕೋ, ಮಾರಾಟವಾಗದೆ ಉಳಿದ ಸ್ಟಾಕ್ ಬೆಂಕಿಗೆ ಆಹುತಿ ಆಗುತ್ತೆ, ಸುಟ್ಟು ಹೋದ ಸ್ಟಾಕ್ನ ಐದಾರು ಪಟ್ಟು ಹಣ ದೊರೆಗಳ ಜೇಬು ತುಂಬುತ್ತೆ. ನಿಮ್ಮ ಸಣ್ಣ ಕ್ಲೈಂ, ತಿಂಗಳು ಗಟ್ಟಲೆ ಪರಿಶೀಲಿಸಿ, 80 ಭಾಗವೋ 70 ಭಾಗವೋ ಕೊಟ್ಟು ಕೈ ತೊಳೆದು ಕೊಳ್ಳುತ್ತಾರೆ.

ವಿಮೆ ಏಜೆಂಟರು, ವಿಮೆ ಮಾರಲು ಬರುತ್ತಾರೆ, ಮುಕ್ಕಾಲು ಜನರಿಗೆ ಅದರ ಸಾಧಕ, ಭಾದಕಗಳ ಅರಿವೆ ಇರುವುದಿಲ್ಲ, ಒತ್ತಾಯಕ್ಕೆ, ದಾಕ್ಷಿಣ್ಯಕ್ಕೆ ಕಟ್ಟು ಬಿದ್ದು ವಿಮೆ ಮಾಡಿಸುವರ ಸಂಖ್ಯೆ ಬಹು ದೊಡ್ಡದು. ಇದು ಬಹು ಸಂಖ್ಯಾತ ಬಡ /ಮಧ್ಯಮ ವರ್ಗದ ಕಥೆ, ಅಲ್ಪ ಸಂಖ್ಯಾತ HNI (HIgh Networth individuals) ಗಳ ಗೋಳು ಇನ್ನೊಂದು ತರದ್ದು, ಇವರು ಸಾಮಾನ್ಯ ವಿಮಾ ಏಜೆಂಟರ ಬಳಿ ಹೋಗುವುದಿಲ್ಲ, ಇವರಿಗಿ ಟೋಪಿ ಹಾಕಲು ಇರುವರು ಫೈನಾನ್ಸಿಯಲ್ ಪ್ಲಾನ್ನೆರ್ಸ್. ನಿಮ್ಮ ಆಸ್ತಿ ಒಟ್ಟು ಮೊತ್ತ ಕೇಳಿ, ಜೀವ ವಿಮೆ ಎಷ್ಟಿರಬೇಕು, ಸ್ಟಾಕ್ ನಲ್ಲಿ ಎಷ್ಟು ಹಣ ಹೂಡಬೇಕು, ರಿಯಲ್ ಎಸ್ಟೇಟ್ ನಲ್ಲಿ ಎಷ್ಟು ಹಣ ಹಾಕಬೇಕು, ಹಣದ ರೂಪದಲ್ಲಿ ಎಷ್ಟು ಇಟ್ಟರೆ ಸಾಕು, ಹೀಗೆ ನಿಮ್ಮೆಲ್ಲ ಬೇಕು ಬೇಡ, ನಿರ್ಧರಿಸುವರು ಅವರು. ಹಾಗೆಂದು ಎಲ್ಲರನ್ನೂ ನಾವು ಒಂದೇ ತಕ್ಕಡಿಯಲ್ಲಿ ಹಾಕಿ ತೂಗಲು ಬರುವುದಿಲ್ಲ. ನಿಮ್ಮ ನಿಜವಾದ ಬೇಕು ಬೇಡಗಳನ್ನು ಅರಿತು ಉತ್ತಮ ಮಾರ್ಗದರ್ಶನ ಮಾಡುವ ಸಲಹೆಗಾರರು ಕೂಡ ಇದ್ದಾರೆ.

ಹಗರಣಗಳು ಬಯಲಾಗುವುದು , ಖಜಾನೆ ಬರಿದಾದಾಗ ಮಾತ್ರ, ನಮ್ಮ ದೇಶದ ವಿಮಾ ಕಂಪನಿಗಳ ಖಜಾನೆ ಭರ್ತಿ ಇದೆ, ವಿದೇಶಿ ವಿಮಾ ಕಂಪನಿಗಳು ಭಾರತದಲ್ಲಿ ಸಾಲು ಗಟ್ಟಿ ಬಂದಿವೆ, ಹಾಗೂ ಅವುಗಳು ವ್ಯಾಪಾರದ ಭರಾಟೆ ಕೂಡ ಜೋರಾಗೆ ಇದೆ. ಬಹಳಷ್ಟು ವಿದೇಶಿ ಕಂಪನಿಗಳು ಕೂಡ ಭಾರತದಲ್ಲಿ ಆಗಲೇ ಬಂದು ನೆಲೆಯೂರಿವೆ. ಇಷ್ಟೆಲ್ಲಾ ಭರಾಟೆಗಳ ನಡುವೆ ನಮ್ಮ ಎಲೈಸಿ ನಂಬರ್ ಒನ್ ಸ್ಥಾನದಲ್ಲಿ ಅಬಾಧಿತವಾಗಿದೆ.

ಇನ್ನು ವಾಹನ ವಿಮೆ, ಇದು ಕಡ್ಡಾಯ, ಅವರು ವಿಧಿಸುವ ಶುಲ್ಕ ಎಷ್ಟು ಸರಿ? ವಿಮಾ ಕಂಪನಿಗಳ ನಡುವೆ ಶುಲ್ಕದಲ್ಲಿ ವ್ಯತ್ಯಾಸವೇಕೆ? ಬೆಂಗಳೂರಿನಲ್ಲಿ 50ಲಕ್ಷಕ್ಕೂ ಹೆಚ್ಚಿನ ಕಾರುಗಳಿವೆ. ಅವೆರೆಜ್ 20 ಸಾವಿರ ವಿಮಾ ಶುಲ್ಕ ಇದ್ದೆ ಇದೆ. ಇದನ್ನು ಗುಣಿಸ ಹೋಗಿ! ಕಾರು ಕೊಳ್ಳುವ ನಾವು ವಿಮೆ ಇಷ್ಟೇಕೆ ಎಂದು ಪ್ರಶ್ನಿಸಿದ್ದೆವೆಯೆ?

ಇದೆಲ್ಲಾ, ಬಿಡಿ, ನಿಮ್ಮ ಬಳಿ ಇರುವ ಪಾಲಿಸಿ ಹೊರತೆಗಿಯಿರಿ, ಸಾವಧಾನವಾಗಿ ಕುಳಿತು, ಪಾಲಿಸಿ ಮೊತ್ತ ಎಷ್ಟು, ನೀವೆಷ್ಟು ಹಣ ಕಟ್ಟುತಿದ್ದಿರಿ, ಇದರಿಂದ ಬಂದ ಲಾಭವೇನು? ಎನ್ನುವುದನ್ನು ಪ್ರಶ್ನಿಸಿಕೊಳ್ಳಿ. ವಿಮೆ ಕೊಳ್ಳುವ ಮುನ್ನ ಕನಿಷ್ಠ ಒಂದೆರೆಡು ಕಡೆ ವಿಚಾರಿಸಿ. ನಿಮಗೆ ಸಿಕ್ಕ ಪ್ರೀಮಿಯಂ ಹಣದಲ್ಲಿ ಬಹಳ ಕಡಿಮೆ ಆಗುವ ಸಾಧ್ಯತೆಯನ್ನು ತೆಗೆದು ಹಾಕುವಂತಿಲ್ಲ. ಒಂದು ಉದಾಹರಣೆ ನೋಡೋಣ. ತೀರಾ ಇತ್ತೀಚಿಗೆ ನನ್ನ ಬಂಧುವೊಬ್ಬರು ಕ್ಯಾನ್ಸರ್ ಕಾರಣ ಇಹಲೋಕದ ಪ್ರಯಾಣ ಮುಗಿಸಿ ಹೋದರು. ಅವರ ಆಸ್ಪತ್ರೆ ಬಿಲ್ ಹತ್ತಿರತ್ತಿರ 60 ಲಕ್ಷವಾಗಿತ್ತು. ಅವರ ಬಳಿ ಆರೋಗ್ಯ ವಿಮೆ ಇದ್ದ ಕಾರಣ ಅಷ್ಟೊಂದು ಹಣಕಾಸು ಹೊಡೆತ ಬೀಳಲಿಲ್ಲ. ಹೀಗಾಗಿ ನನ್ನ ಕುಟುಂಬಕ್ಕೆ 25 ಲಕ್ಷ ಆರೋಗ್ಯ ವಿಮೆ ಇತ್ತು. ಇದನ್ನು ಒಂದು ಕೋಟಿ ರೂಪಾಯಿ ತನಕ ಹೆಚ್ಚಿಸುವ ಅವಶ್ಯಕತೆ ಇದೆ ಎಂದು ನನಗನ್ನಿಸಿತು. ಒಂದೆರೆಡು ವಿಮಾ ಸಂಸ್ಥೆಗಳಲ್ಲಿ ಪ್ರೀಮಿಯಂ ಎಷ್ಟಾಗಬಹುದು ಎಂದದ್ದಕ್ಕೆ ಪ್ರತಿಯೊಬ್ಬರೂ 80/90 ಸಾವಿರ ವಾರ್ಷಿಕ ಆಗುತ್ತದೆ ಎಂದರು. ನಮ್ಮ ಬಳಿ ಈಗಾಗಲೇ 15 ಲಕ್ಷ ಬೇಸಿಕ್ ಮತ್ತು 10ಲಕ್ಷ ಟ್ಯಾಪ್ಅಪ್ ವಿಮೆ ಇದ್ದ ಕಾರಣ, ಅವರಲ್ಲಿ ಮೊದಲ 15 ಲಕ್ಷಕ್ಕೆ ನಾವು ನಿಮ್ಮ ಬಳಿ ಕ್ಲೇಮ್ ಮಾಡುವುದಿಲ್ಲ, ಈಗ ಒಂದು ಕೋಟಿಗೆ ಪ್ರೀಮಿಯಂ ಎಷ್ಟು ಎಂದದ್ದಕ್ಕೆ ಅವರು ಹೇಳಿದ ಪ್ರೀಮಿಯಂ ವಾರ್ಷಿಕ 8 ಸಾವಿರಕ್ಕೂ ಕಡಿಮೆ! ನಾವು ಪ್ರಶ್ನೆ ಕೇಳದೆ ಹೋಗಿದ್ದರೆ ಇದೆ ವಿಮೆಗೆ 80/90ಸಾವಿರ ಕೊಡಬೇಕಾಗಿತ್ತು.

ಬಂಡವಾಳಶಾಹಿಗಳು, ಧನ ಧಾಹಿಗಳು ಕುಳಿತು ವ್ಯವಸ್ಥಿತವಾಗಿ ಕಟ್ಟಿರುವ ಕೋಟೆ ಇದು, ಅಮೇರಿಕಾದಲ್ಲಿ ಇದಕ್ಕೆ ಬೆಟರ್ ಟು ಬಿ ಸೇಫ್ ದ್ಯಾನ್ ಸಾರೀ ಎಂದು ಹೆಸರು ಬೇರೆ ಕೊಟ್ಟಿದ್ದಾರೆ, ನಮ್ಮ ಕೊರತೆ, ನ್ಯೂನತೆ ಇವರ ಅಡಿಪಾಯ, ನಾವು ಹೆದರಿದಷ್ಟು ಇವರ ವ್ಯಾಪಾರ ಹೆಚ್ಚು. ಅದೆಲ್ಲಾ ಏನೇ ಇರಲಿ ಇಂದಿಗೆ ಭಾರತದಲ್ಲಿ ಕೂಡ ವಿಮೆ ಇಲ್ಲದೆ ಬದುಕು ಸಾಧ್ಯವಿಲ್ಲ ಎನ್ನುವ ಹಂತಕ್ಕೆ ಬಂದು ಕುಳಿತಿದ್ದೇವೆ. ರಸ್ತೆ ಬದಿಯ ವ್ಯಾಪಾರಿ ಬಳಿ ಈರುಳ್ಳಿ ಕೊಳ್ಳುವಾಗ ವಿಚಾರಿಸುವಷ್ಟು, ವಿಮೆ ಕೊಳ್ಳುವಾಗ ಮಾಡದಿದ್ದರೆ ಹೇಗೆ? ಸಾವಿರ ಸಂಖ್ಯೆಯಲ್ಲಿ Unit Linked Insurance Plans (ULIP) ಕೊಂಡವರಲ್ಲಿ ಮುಕ್ಕಾಲು ಪಾಲು ಜನ ವಿದ್ಯಾವಂತರು!

ರಸ್ತೆ ಬದಿಯ ವ್ಯಾಪಾರಿಗೆ ಹತ್ತು ರುಪಾಯಿ ಹೆಚ್ಚು ಕೊಡದೆ ಚೌಕಾಸಿ ಮಾಡುವ ನಾವು, ವ್ಯವಸ್ಥಿತ ವಿಮೆ ಎಂಬ ವರ್ತುಲ ದಲ್ಲಿ ನಗುತ್ತಾ ಬಿಳುತ್ತೇವೆ. ಹಣಕಾಸು ವಿಷಯದಲ್ಲಿ ನಾವು ವಿದ್ಯಾವಂತರಾಗುವುದೆಂದು? ಪ್ರಶ್ನೆ ಕೇಳಿ. ಒಂದಲ್ಲ ಹತ್ತಾರು ಸನ್ನಿವೇಶಗಳಲ್ಲಿ ವಿಮೆ ಹೇಗೆ ಕಾರ್ಯ ನಿರ್ವಹಿಸುತ್ತದೆ ಎನ್ನುವುದನ್ನು ತಿಳಿದುಕೊಳ್ಳುವುದು ಬುದ್ದಿವಂತರ ಲಕ್ಷಣ.

ಕೊನೆ ಮಾತು: ಮೊದಲ ಸಾಲುಗಳಲ್ಲಿ ಹೇಳಿದಂತೆ ಇಂದು ಎಲ್ಲದಕ್ಕೂ ವಿಮೆ ಸಿಗುತ್ತದೆ. ಆದರೆ ಮೂಲಭೂತವಾಗಿ ಆರೋಗ್ಯವಿಮೆ ಮತ್ತು ಜೀವವಿಮೆಯಲ್ಲಿ ಟರ್ಮ್ ಪಾಲಿಸಿ ಮಾಡುವುದು ಅತ್ಯಂತ ಅವಶ್ಯಕ. ನಿಮಗೆಲ್ಲಾ ಗೊತ್ತಿರಲಿ ವಿಮೆಗೆ ಕಟ್ಟುವ ಪ್ರೀಮಿಯಂ ಕೆಲವು ಸರಳ ಪ್ರಶೆಗಳನ್ನು ಕೇಳುವುದರಿಂದ , ನಮ್ಮ ಅವಶ್ಯಕತೆಗಳಲ್ಲಿ ಒಂದಷ್ಟು ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಿಕೊಳ್ಳುವುದರಿಂದ ಬಹಳ ಕಡಿಮೆಯಾಗುತ್ತದೆ. ಇದರಿಂದ ನಮಗೆ ಉಂಟಾಗುವ ಲಾಭದಲ್ಲಿ ಅಥವಾ ಪ್ರಯೋಜನದಲ್ಲಿ ಯಾವುದೇ ಕಡಿಮೆ ಆಗುವುದಿಲ್ಲ. ಹೀಗಾಗಿ ನಮ್ಮ ಅವಶ್ಯಕತೆಯೇನು ಎನ್ನುವುದರ ನಿಖರ ಮಾಹಿತಿ ನಮಗಿರಬೇಕು. ಜೊತೆಗೆ ವಿಮಾ ಸಂಸ್ಥೆಯವರನ್ನು ಕೂಡ ಸರಿಯಾದ ಪ್ರಶೆಗಳನ್ನು ಕೇಳಬೇಕು. ಹೆಚ್ಚು ಮಾಹಿತಿ ತಿಳಿದುಕೊಳ್ಳುತ್ತ ಹೋದರೆ ನಾವು ಕಟ್ಟಿದ ಹಣಕ್ಕೆ ಸರಿಯಾದ ಮೌಲ್ಯವನ್ನು ಪಡೆಯಬಹುದು. ವಿಮೆ ಬೇಕೇ ಬೇಕು. ಮಾಡಿಸುವ ಮುನ್ನ ಸ್ವಲ್ಪ ತಿಳುವಳಿಕೆ, ಎಚ್ಚರವೂ ಇರಲಿ.

SCROLL FOR NEXT