ರಾಂಚಿಯಲ್ಲಿ ನಿನ್ನೆ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ತಂಡದ ಗೆಲುವಿಗೆ ಕಾರಣರಾದರು. ಈ ವರ್ಷದ ಆರಂಭದಲ್ಲಿ ಟೆಸ್ಟ್ ಕ್ರಿಕೆಟ್ನಿಂದ ಅವರ ಹಠಾತ್ ನಿವೃತ್ತಿ ಆಧುನಿಕ ಭಾರತೀಯ ಕ್ರಿಕೆಟ್ನಲ್ಲಿ ಅತ್ಯಂತ ಆಘಾತಕಾರಿ ನಿರ್ಧಾರಗಳಲ್ಲಿ ಒಂದಾಗಿತ್ತು. ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಅವರು ಟೆಸ್ಟ್ ಕ್ರಿಕೆಟ್ಗೆ ಮರಳುತ್ತಾರೆ ಎನ್ನುವ ವದಂತಿಗಳು ಕೇಳಿಬರುತ್ತಿವೆ.
ಕೊಹ್ಲಿ ಅದ್ಭುತ 135 ರನ್ ಗಳಿಸುವ ಮೂಲಕ ವಿಂಟೇಜ್ ಟಚ್ನಲ್ಲಿ ಕಾಣಿಸಿಕೊಂಡರು ಮತ್ತು ಈ ಪೀಳಿಗೆಯ ಭಾರತದ ಶ್ರೇಷ್ಠ ಟೆಸ್ಟ್ ಬ್ಯಾಟ್ಸ್ಮನ್ ಟೆಸ್ಟ್ ಕ್ರಿಕೆಟ್ಗೆ ಮರಳುವುದನ್ನು ಪರಿಗಣಿಸಬಹುದು ಎಂಬ ಊಹಾಪೋಹಗಳು ಆರಂಭವಾದವು. ಎರಡನೇ ಬಾರಿಗೆ ದಕ್ಷಿಣ ಆಫ್ರಿಕಾ ವಿರುದ್ಧ 2-0 ಅಂತರದ ವೈಟ್ವಾಶ್ ಭಾರತದ ಟೆಸ್ಟ್ ಕ್ರಿಕೆಟ್ ಅನ್ನು ತತ್ತರಿಸುವಂತೆ ಮಾಡಿದೆ. ಕೊಹ್ಲಿ ಮತ್ತೆ ಟೆಸ್ಟ್ ಕ್ರಿಕೆಟ್ಗೆ ಮರಳಿದರೆ ತಂಡ ಸುಧಾರಣೆ ಕಾಣುತ್ತದೆ ಎಂದು ಹಲವರು ನಂಬುತ್ತಾರೆ.
ಆದರೆ ಭಾನುವಾರ ರಾತ್ರಿ, ಟೆಸ್ಟ್ ಪುನರಾಗಮನದ ಕುರಿತು ಕೊಹ್ಲಿ ಅವರನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸಂಪರ್ಕಿಸಿದೆ ಎಂಬ ವರದಿಗಳನ್ನು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಸಾರ್ವಜನಿಕವಾಗಿ ತಳ್ಳಿಹಾಕಿದರು. 'ವಿರಾಟ್ ಕೊಹ್ಲಿ ಬಗ್ಗೆ ಹೇಳಲಾಗುತ್ತಿರುವುದು ಕೇವಲ ವದಂತಿ. ಈ ಬಗ್ಗೆ ಕೊಹ್ಲಿಯೊಂದಿಗೆ ಯಾವುದೇ ಸಂಭಾಷಣೆ ನಡೆದಿಲ್ಲ. ವದಂತಿಗಳಿಗೆ ತೂಕ ನೀಡಬೇಡಿ. ಆ ರೀತಿ ಏನೂ ನಡೆದಿಲ್ಲ' ಎಂದು ಸೈಕಿಯಾ ಆಜ್ತಕ್ಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ರಾಂಚಿಯಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಸ್ವೀಕರಿಸಿದ ನಂತರ ಮಾತನಾಡಿದ ಕೊಹ್ಲಿ, ಭಾರತಕ್ಕಾಗಿ ಒಂದೇ ಸ್ವರೂಪದಲ್ಲಿ ಆಡಲು ಬದ್ಧನಾಗಿದ್ದೇನೆ. ಅದು ಯಾವಾಗಲೂ ಹೀಗೆಯೇ ಇರುತ್ತದೆ. ನಾನು ಈಗ ಆಟದ ಒಂದು ಸ್ವರೂಪವನ್ನು ಮಾತ್ರ ಆಡುತ್ತಿದ್ದೇನೆ ಎಂದು ಅವರು ಪ್ರಸಾರಕರಾದ ಹರ್ಷ ಭೋಗ್ಲೆಗೆ ತಿಳಿಸಿದರು.
37 ವರ್ಷದ ಆಟಗಾರ ಕೊಹ್ಲಿ ರಾಂಚಿಗೆ ಬೇಗನೆ ಆಗಮಿಸಿ ತಯಾರಿ ನಡೆಸಿದ್ದರು. ಸದ್ಯ ಏಕದಿನ ಪಂದ್ಯಗಳಲ್ಲಿ ಮಾತ್ರ ಸಕ್ರೀಯರಾಗಿರುವ ಕೊಹ್ಲಿ, ರಾಂಚಿಯಲ್ಲಿ ಮತ್ತೊಮ್ಮೆ ತಮ್ಮ ಅಪ್ರತಿಮ ಪ್ರತಿಭೆಯನ್ನು ಜಗತ್ತಿಗೆ ನೆನಪಿಸಿದರು. ರೋಹಿತ್ ಶರ್ಮಾ ಅವರೊಂದಿಗೆ 136 ರನ್ಗಳ ಜೊತೆಯಾಟವಾಡಿದರು. ಪಂದ್ಯದಲ್ಲಿ ಭಾರತವು 17 ರನ್ ಅಂತರದ ರೋಚಕ ಗೆಲುವು ಸಾಧಿಸಿತು.