ಟೀಂ ಇಂಡಿಯಾದ ಸದ್ಯದ ಪರಿಸ್ಥಿತಿಯನ್ನು ಗಮನಿಸಿದರೆ, ತಂಡದಲ್ಲಿ ಆಟಗಾರರ ಗಾಯದ ಸಮಸ್ಯೆಗಳು ಹೆಚ್ಚಾಗಿದ್ದರೂ, ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ಈ ಅನುಭವಿ ವೇಗದ ಬೌಲರ್ ಮೊಹಮ್ಮದ್ ಶಮಿಗೆ ರಾಷ್ಟ್ರೀಯ ತಂಡದಲ್ಲಿ ಮರು ಅವಕಾಶ ನೀಡಲು ಆಸಕ್ತಿ ತೋರುತ್ತಿರುವಂತೆ ಕಾಣುತ್ತಿಲ್ಲ. 2027ರ ಏಕದಿನ ವಿಶ್ವಕಪ್ಗಾಗಿ ಭಾರತದ ಸಿದ್ಧತೆಗಳು ಈಗಾಗಲೇ ಆರಂಭಗೊಂಡಿದ್ದು, ಗಾಯಗೊಂಡಿರುವ ಜಸ್ಪ್ರೀತ್ ಬುಮ್ರಾ ಅವರ ಸ್ಥಾನವನ್ನು ತುಂಬಬಲ್ಲ ಆಯ್ಕೆಗಳನ್ನು ತಂಡವು ಪರಿಶೀಲಿಸುತ್ತಿದೆ. ಇಂತಹ ಸನ್ನಿವೇಶಗಳ ನಡುವೆಯೂ, ಆಯ್ಕೆ ಸಮಿತಿಯ ಸಭೆಗಳಲ್ಲಿ ಶಮಿ ಅವರ ಹೆಸರನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಿರುವಂತೆ ತೋರುತ್ತಿಲ್ಲ.
ಶಮಿ ಎದುರಿಸುತ್ತಿರುವ ಪರಿಸ್ಥಿತಿ ಕುರಿತು ಭಾರತದ ಪರ ಆಡಿದ ಅತ್ಯುತ್ತಮ ವೇಗದ ಬೌಲರ್ಗಳಲ್ಲಿ ಒಬ್ಬರಾದ ಜಹೀರ್ ಖಾನ್ ಅವರನ್ನು ಕೇಳಿದಾಗ, ಸದ್ಯಕ್ಕೆ ಭಾರತ ತಂಡದ ಆದ್ಯತೆಗಳು ಬೇರೆಡೆ ಇರುವಂತೆ ತೋರುತ್ತಿದೆ. ಆದಾಗ್ಯೂ, ಶಮಿ ಭರವಸೆ ಕಳೆದುಕೊಳ್ಳುವ ಅಗತ್ಯವಿಲ್ಲ ಎಂದು ಜಹೀರ್ ಅಭಿಪ್ರಾಯಪಟ್ಟಿದ್ದಾರೆ.
'ಮುಂದೆ ಹೇಗೆ ಸಾಗಬೇಕು ಎಂಬುದು ನಿಮ್ಮ ನಿರ್ಧಾರ. ನೀವು ಪಂದ್ಯಗಳನ್ನು ಆಡುತ್ತಾ ಉತ್ತಮ ಪ್ರದರ್ಶನ ನೀಡುತ್ತಿದ್ದರೆ, ಆಯ್ಕೆಗೆ ಲಭ್ಯವಿರುತ್ತೀರಿ. ನಾನು ವಿಷಯಗಳನ್ನು ಹಾಗೆಯೇ ನೋಡುತ್ತೇನೆ. ತಂಡದ ಆಲೋಚನೆ ಬೇರೆಯಾಗಿರಬಹುದು, ಆದರೆ ನಿಮ್ಮ ಆಲೋಚನಾ ವಿಧಾನವೂ ಮುಖ್ಯ. ನೀವು ತಂಡಕ್ಕೆ ಕೊಡುಗೆ ನೀಡಲು ಬಯಸಿದರೆ, ಅದು ನಿಮ್ಮ ನಿರ್ಧಾರವಾಗಿರುತ್ತದೆ. ತಂಡದ ದೃಷ್ಟಿಕೋನ ಮತ್ತು ಅಲ್ಲಿನ ಸನ್ನಿವೇಶಗಳನ್ನು ಗಮನಿಸಿ, ನಿಮ್ಮ ಆಲೋಚನೆಗಳನ್ನು ನೀವು ವಿಶ್ಲೇಷಿಸಿಕೊಳ್ಳಬಹುದು. ಆದರೆ ಅದಕ್ಕೆ ನೀವು ಹೇಗೆ ಕೊಡುಗೆ ನೀಡಬಲ್ಲಿರಿ ಎಂಬುದು ಮುಖ್ಯ. ಒಬ್ಬ ಆಟಗಾರನಾಗಿ, ಶಮಿ ಮಾಡುತ್ತಿರುವಂತೆಯೇ ನೀವೂ ಮಾಡಬೇಕು. ಅವರು ಆಡುತ್ತಿದ್ದಾರೆ; ನೀವು ಹೇಳಿದಂತೆ, ಅವರು ಪಂದ್ಯಗಳಲ್ಲಿ ಭಾಗವಹಿಸುತ್ತಿದ್ದಾರೆ. ಅದೇ ಮುಖ್ಯವಾದ ವಿಷಯ' ಎಂದು ಅವರು 'ಟೈಮ್ಸ್ ಆಫ್ ಇಂಡಿಯಾ'ಗೆ ತಿಳಿಸಿದರು.
ಭಾರತೀಯ ತಂಡದಲ್ಲಿ ಗಾಯಾಳುಗಳ ಪಟ್ಟಿ ಹೆಚ್ಚುತ್ತಿರುವುದರ ಬಗ್ಗೆಯೂ ಜಹೀರ್ ಅವರನ್ನು ಪ್ರಶ್ನಿಸಲಾಯಿತು. ಸತತ ಸರಣಿಗಳಲ್ಲಿ ಫಿಟ್ನೆಸ್ ಕಾಯ್ದುಕೊಳ್ಳಲು ಬುಮ್ರಾ ಪರದಾಡುತ್ತಿದ್ದರೆ, ವಾಷಿಂಗ್ಟನ್ ಸುಂದರ್, ಸಾಯಿ ಸುದರ್ಶನ್, ರೋಹಿತ್ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯ ಅವರಂತಹ ಆಟಗಾರರು ಕೂಡ ಫಿಟ್ನೆಸ್ ಕಾಪಾಡಿಕೊಳ್ಳಲು ಹೆಣಗಾಡಿದ್ದಾರೆ.
'ಗಾಯಗಳು ಆಟದ ಅವಿಭಾಜ್ಯ ಅಂಗಗಳಾಗಿವೆ; ಅವು ಪ್ರತಿಯೊಬ್ಬ ವ್ಯಕ್ತಿಯ ಪಯಣದ ಭಾಗವೂ ಹೌದು. ಕೆಲಸದೊತ್ತಡ ನಿರ್ವಹಣೆಯ (workload management) ಬಗ್ಗೆ ಮಾತನಾಡಬಹುದು, ಆದರೆ ಘಟನೆಗಳು ಸಂಭವಿಸುವ ಸಮಯವನ್ನೂ ಅರ್ಥಮಾಡಿಕೊಳ್ಳುವುದು ಅಗತ್ಯ. ಕೆಲವು ವಿಷಯಗಳು ಕಣ್ಣಿಗೆ ಕಾಣಿಸಬಹುದು, ಆದರೆ ಒಟ್ಟಾರೆಯಾಗಿ ಅದಕ್ಕೆ ತಕ್ಕಂತೆ ಯೋಜನೆ ರೂಪಿಸಬೇಕಾಗುತ್ತದೆ. ವೇಗದ ಬೌಲರ್ ಒಬ್ಬರು ಗಾಯಗೊಂಡಾಗ ಅಥವಾ ಕಠಿಣ ಹಂತವನ್ನು ಎದುರಿಸುತ್ತಿರುವಾಗ, ನಿಮ್ಮ ಕೈಯಲ್ಲಿರುವ ವಿಷಯಗಳನ್ನು ನಿಯಂತ್ರಿಸುವುದು ಬಹಳ ಮುಖ್ಯ. ಅವುಗಳನ್ನು ಸರಿಯಾದ ರೀತಿಯಲ್ಲಿ ನಿಭಾಯಿಸಬೇಕು. ಸಮಸ್ಯೆಯ ಮೂಲ ಕಾರಣ ತಿಳಿಯುವವರೆಗೆ, ನೀವು ಮುಂದೆ ಸಾಗಲು ಸಾಧ್ಯವಿಲ್ಲ' ಎಂದರು.