ಇಸ್ಲಾಮಾಬಾದ್: ಐಸಿಸಿ ಟಿ20 ವಿಶ್ವಕಪ್ ಟೂರ್ನಿ ವಿಚಾರವಾಗಿ ಗೊಂದಲಕ್ಕೀಡಾಗಿರುವ ಪಾಕಿಸ್ತಾನ ಕ್ರಿಕೆಟ್ ತಂಡದ ಪರವಾಗಿ ಪಾಕ್ ಮೂಲದ ಯೂಟ್ಯೂಬರ್ ಓರ್ವ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ICC)ಗೇ ಬೆದರಿಕೆ ಹಾಕಿರುವ ಘಟನೆ ನಡೆದಿದೆ.
ಹೌದು.. ಭಾರತದ ವಿರುದ್ಧದ ಪಂದ್ಯವನ್ನು ನಿಷೇಧಿಸುವ ಕುರಿತು ಘೋಷಣೆ ಮಾಡಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಐಸಿಸಿಯ ನಿರ್ಬಂಧದ ತೂಗುಗತ್ತಿ ತೂಗುತ್ತಿದೆ. ಈ ನಡುವೆ ಪಾಕಿಸ್ತಾನದ ಯೂಟ್ಯೂಬರ್ ಒಬ್ಬರು ಭಾರತದ ವಿರುದ್ಧದ ಐಸಿಸಿ ಟಿ20 ಪುರುಷರ ವಿಶ್ವಕಪ್ 2026 ಪಂದ್ಯವನ್ನು ಬಹಿಷ್ಕರಿಸುವ ನಿರ್ಧಾರಕ್ಕೆ ಸಂಬಂಧಿಸಿದಂತೆ ವೀಡಿಯೊವನ್ನು ಹಂಚಿಕೊಂಡಿದ್ದಾರೆ.
ಪಾಕಿಸ್ತಾನ ಮೂಲದ ಯೂಟ್ಯೂಬರ್ ಅರ್ಸ್ಲಾನ್ ನಸೀರ್ (Arslan Naseer) ಭಾರತ ತಂಡ, ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಮತ್ತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ.
ಅರ್ಸ್ಲಾನ್ ನಸೀರ್ ತಮ್ಮ ಯೂಟ್ಯೂಬ್ ಖಾತೆಯಲ್ಲಿ 15 ನಿಮಿಷಗಳ ವೀಡಿಯೊವನ್ನು ಹಂಚಿಕೊಂಡಿದ್ದು, "ಸಿಬಿಎ ಅರ್ಸ್ಲಾನ್ ನಸೀರ್ ಎಂಬ ಯೂಟ್ಯೂಬ್ ಖಾತೆಯಲ್ಲಿ ಈ ವೀಡಿಯೊ ಹಂಚಿಕೊಂಡಿದ್ದಾರೆ. ಭಾರತೀಯ ಅಭಿಮಾನಿಗಳಿಗೆ ಹಾಸ್ಯಮಯ ಕ್ರಿಕೆಟ್ ವಿಮರ್ಶೆ ನೀಡುತ್ತಲೇ ಹಾಸ್ಯ ವ್ಯಾಖ್ಯಾನ, ತಮಾಷೆಯ ಪ್ರತಿಕ್ರಿಯೆಗಳು ಮತ್ತು ಮರೆಯಲಾಗದ ಭಾರತ vs ಪಾಕಿಸ್ತಾನ ಕ್ಷಣಗಳನ್ನು ಆನಂದಿಸಿ" ಎಂಬ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಹಂಚಿಕೊಂಡಿದ್ದಾರೆ.
ವಿಡಿಯೋದಲ್ಲಿ ಭಾರತೀಯ ನಾಯಕ ಸೂರ್ಯಕುಮಾರ್ ಯಾದವ್ ಬಗ್ಗೆ ಮಾತನಾಡುವಾಗಲೂ ಬೆಲ್ಟ್ ಬಿಚ್ಚಿ ಅಸಭ್ಯವಾಗಿ ವರ್ತಿಸಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ಐಸಿಸಿಗೆ ಬೆದರಿಕೆ
ಫೆಬ್ರವರಿ 15 ರಂದು ಶ್ರೀಲಂಕಾದ ಕೊಲಂಬೊದಲ್ಲಿರುವ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ಭಾರತ ವಿರುದ್ಧದ ಪಂದ್ಯವನ್ನು ಪಾಕಿಸ್ತಾನ ಸರ್ಕಾರ ಬಹಿಷ್ಕರಿಸುವುದಾಗಿ ಹೇಳಿದ ನಂತರ ಪಾಕಿಸ್ತಾನಿ ಯೂಟ್ಯೂಬರ್ ಹೇಳಿಕೆ ನೀಡಿದ್ದು ಮಾತ್ರವಲ್ಲದೇ ಐಸಿಸಿಗೆ ಬೆದರಿಕೆ ಹಾಕಿದ್ದಾರೆ. ವಿಡಿಯೋದಲ್ಲಿ ಆತ ಐಸಿಸಿ ಕಚೇರಿಗೆ ಬಾಂಬ್ ಹಾಕುವುದಾಗಿಯೂ ಬೆದರಿಕೆ ಹಾಕಿದ್ದಾರೆ.
ಐಸಿಸಿ ಕಚೇರಿ ದುಬೈನಲ್ಲಿದೆ, ಅದಕ್ಕಾಗಿಯೇ ಅವರು ಸುರಕ್ಷಿತವಾಗಿದ್ದಾರೆ. ಒಂದು ವೇಳೆ ಅವರ ಕಚೇರಿ ಭಾರತದಲ್ಲಿದ್ದಿದ್ದರೆ, ನಮ್ಮ ಜನರು ಅವರ ಪ್ರಧಾನ ಕಚೇರಿ ಮತ್ತು ಹತ್ತಿರದ ಪ್ರದೇಶಗಳ ಮೇಲೆ ಬಾಂಬ್ ದಾಳಿ ಮಾಡುತ್ತಿದ್ದರು ಎಂದು ಹೇಳಿದ್ದಾನೆ.
ಹ್ಯಾಂಡ್ಶೇಕ್ ವಿವಾದ
ಭಾರತ ಮತ್ತು ಪಾಕಿಸ್ತಾನ ನಡುವಿನ 2026ರ ಏಷ್ಯಾ ಕಪ್ ಹ್ಯಾಂಡ್ಶೇಕ್ ವಿವಾದದಿಂದ ಆರ್ಸ್ಲಾನ್ ಭಾರಿ ಹತಾಶೆಗೊಂಡಿದ್ದ. 26 ಜನರ ಪ್ರಾಣವನ್ನು ಬಲಿ ಪಡೆದ ಪಹಲ್ಗಾಮ್ ದಾಳಿಯನ್ನು ಪ್ರತಿಭಟಿಸಿ ಭಾರತೀಯ ಕ್ರಿಕೆಟ್ ತಂಡವು ಪಾಕಿಸ್ತಾನಿ ಆಟಗಾರರೊಂದಿಗೆ ಹಸ್ತಲಾಘವ ಮಾಡಲು ನಿರಾಕರಿಸಿತ್ತು. ಇದು ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು. ಇದೇ ಟೂರ್ನಿಯಲ್ಲಿ
ಭಾರತ ತಂಡವು ಟೂರ್ನಿ ಗೆದ್ದಾಗ ಏಷ್ಯಾ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಅಧ್ಯಕ್ಷ ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರಿಂದ ಏಷ್ಯಾ ಕಪ್ 2026 ಟ್ರೋಫಿಯನ್ನು ಸ್ವೀಕರಿಸಲು ನಿರಾಕರಿಸಿತ್ತು.
ಈ ವೇಳೆ ನಖ್ವಿ ತಮ್ಮೊಂದಿಗೆ ಟ್ರೋಫಿಯನ್ನು ತೆಗೆದುಕೊಂಡು ಹೋಗಿದ್ದೂ ವಿವಾದಕ್ಕೆ ಕಾರಣವಾಗಿತ್ತು. ನಖ್ವಿ ಈವರೆಗೂ ಆ ಟ್ರೋಫಿಯನ್ನು ಭಾರತ ತಂಡಕ್ಕೆ ನೀಡಿಲ್ಲ. ಈ ಬಗ್ಗೆ ಐಸಿಸಿ ಸಾಕಷ್ಟು ಬಾರಿ ಜಾಡಿಸಿದ್ದರೂ ನಖ್ವಿಗೆ ಬುದ್ದಿ ಬಂದಂತಿಲ್ಲ.