ಗುರುವಾರ ನಡೆಯಲಿರುವ ಭಾರತ ಮತ್ತು ನಮೀಬಿಯಾ ನಡುವಿನ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಅದೃಷ್ಟ ಒಲಿಯುವ ಸಾಧ್ಯತೆಯಿದೆ. ಜ್ವರ ಮತ್ತು ಹೊಟ್ಟೆ ನೋವಿನಿಂದ ಬಳಲುತ್ತಿರುವ ಅಭಿಷೇಕ್ ಶರ್ಮಾ, ಮಂಗಳವಾರ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಅಭ್ಯಾಸ ಅವಧಿಯಿಂದ ಹೊರಗುಳಿದಿದ್ದರು. ವಾಸ್ತವವಾಗಿ, ಅವರು ತಂಡದೊಂದಿಗೆ ದೆಹಲಿಗೆ ಪ್ರಯಾಣ ಬೆಳೆಸಿಲ್ಲ. ಟಿ20 ವಿಶ್ವಕಪ್ನ ಗ್ರೂಪ್ ಎ ಪಂದ್ಯಕ್ಕೆ ಕೇವಲ 48 ಗಂಟೆ ಬಾಕಿ ಉಳಿದಿದ್ದು, ಮುಂದಿನ ಪಂದ್ಯದಿಂದ ಅವರು ಹೊರಗುಳಿಯುವ ಸಾಧ್ಯತೆ ಇದೆ. ಕಳಪೆ ಪ್ರದರ್ಶನಗಳಿಂದಾಗಿ ಪ್ಲೇಯಿಂಗ್ XI ನಿಂದ ಕೈಬಿಟ್ಟಿದ್ದ ಸಂಜು ಸ್ಯಾಮ್ಸನ್ಗೆ ಇದು ನೆರವಾಗುವ ಸಾಧ್ಯತೆಯಿದೆ.
ವರದಿಗಳ ಪ್ರಕಾರ, ಜ್ವರದಿಂದ ಬಳಲುತ್ತಿದ್ದ ಅಭಿಷೇಕ್ ಶರ್ಮಾ ಯುಎಸ್ಎ ವಿರುದ್ಧದ ಪಂದ್ಯದಲ್ಲಿ ಗೋಲ್ಡನ್ ಡಕ್ ಆದರು. ಪೆವಿಲಿಯನ್ಗೆ ಹಿಂತಿರುಗಿದ ನಂತರ ಅವರು ಮೈದಾನಕ್ಕೆ ಇಳಿಯಲಿಲ್ಲ. ಫೆಬ್ರುವರಿ 15 ರಂದು ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ವೇಳೆಗೆ ಅವರು ಸಂಪೂರ್ಣ ಫಿಟ್ನೆಸ್ಗೆ ಮರಳಬೇಕೆಂದು ತಂಡ ಬಯಸುತ್ತದೆ. ಆದಾಗ್ಯೂ, ತಂಡದ ಆಡಳಿತವು ಅವರ ಲಭ್ಯತೆ ಬಗ್ಗೆ ರಹಸ್ಯ ಕಾಯ್ದುಕೊಂಡಿತ್ತು.
ತಂಡಕ್ಕೆ ಮರಳಿದ ವಾಷಿಂಗ್ಟನ್ ಸುಂದರ್
'ವಾಷಿಂಗ್ಟನ್ ಸುಂದರ್ ನಿನ್ನೆ ತಂಡವನ್ನು ಸೇರಿಕೊಂಡಿದ್ದು, ಇಂದು ತರಬೇತಿ ಪಡೆಯಲಿದ್ದಾರೆ. ಅಭಿಷೇಕ್ ಇನ್ನೂ ಕೆಲವು ಹೊಟ್ಟೆಯ ಸಮಸ್ಯೆಗಳನ್ನು ಹೊಂದಿದ್ದಾರೆ. ಕೆಲವೇ ದಿನಗಳಲ್ಲಿ ಅವರು ಪಂದ್ಯಕ್ಕೆ ಲಭ್ಯವಾಗುತ್ತಾರೆ ಎಂದು ನಾವು ಭಾವಿಸುತ್ತೇವೆ' ಎಂದು ಭಾರತದ ಸಹಾಯಕ ಕೋಚ್ ರಯಾನ್ ಟೆನ್ ಡೋಸ್ಚೇಟ್ ಮಂಗಳವಾರ ಹೇಳಿದ್ದಾರೆ.
ನಮೀಬಿಯಾ ವಿರುದ್ಧದ ಪಂದ್ಯಕ್ಕೆ ಸ್ಯಾಮ್ಸನ್?
ಸದ್ಯ, ಇಶಾನ್ ಕಿಶನ್ ಟಿ20 ವಿಶ್ವಕಪ್ನಲ್ಲಿ ಭಾರತದ ನಂಬರ್ 1 ಕೀಪರ್-ಬ್ಯಾಟರ್ ಆಗಿದ್ದಾರೆ. ಸಂಜು ಸ್ಯಾಮ್ಸನ್ ಅವರಿಗೆ ಅವಕಾಶ ಸಿಕ್ಕಿತ್ತು. ಆದರೆ, ಅವರು ಫಾರ್ಮ್ನಲ್ಲಿಲ್ಲದ ಕಾರಣ ಸ್ಥಾನವನ್ನು ಕಳೆದುಕೊಂಡರು. ಏಷ್ಯಾಕಪ್ನಲ್ಲಿ ಓಮನ್ ವಿರುದ್ಧ 56 ರನ್ ಗಳಿಸಿದ ನಂತರ, ಸ್ಯಾಮ್ಸನ್ 10 ಇನಿಂಗ್ಸ್ಗಳಲ್ಲಿ ಕೇವಲ 16.1 ಸರಾಸರಿ ಹೊಂದಿದ್ದಾರೆ. ಅವರ ಸ್ಟ್ರೈಕ್ ರೇಟ್ 133.05 ಆಗಿದೆ. ನ್ಯೂಜಿಲೆಂಡ್ ವಿರುದ್ಧ, ಅವರು ಐದು ಇನಿಂಗ್ಸ್ಗಳಲ್ಲಿ 9.2 ಸರಾಸರಿ ಗಳಿಸಿದ್ದಾರೆ. ಅವರು 10, 6, 0, 24 ಮತ್ತು 6 ರನ್ ಗಳಿಸಿದ್ದಾರೆ. ಇದು ಮುಖ್ಯ ಕೋಚ್ ಗೌತಮ್ ಗಂಭೀರ್ ಅವರು ಇಶಾನ್ ಕಿಶನ್ ಅವರನ್ನು ಆಯ್ಕೆ ಮಾಡಲು ಪ್ರೇರೇಪಿಸಿತು.
ಎರಡು ವರ್ಷಗಳ ನಂತರ ಭಾರತದ ಪ್ಲೇಯಿಂಗ್ XIಗೆ ಮರಳಿರುವ ಇಶಾನ್ ಕಿಶನ್, ಅರ್ಧಶತಕ ಮತ್ತು ಒಂದು ಶತಕ ಬಾರಿಸಿದ್ದಾರೆ. ನಾಲ್ಕು ಇನಿಂಗ್ಸ್ಗಳಲ್ಲಿ 56.75 ಸರಾಸರಿ ಮತ್ತು 218.26 ಸ್ಟ್ರೈಕ್ ರೇಟ್ ಹೊಂದಿದ್ದಾರೆ. ವಾಸ್ತವವಾಗಿ, ಅಂದಿನಿಂದ ಅವರು ಅಭಿಷೇಕ್ ಶರ್ಮಾಗಿಂತ ಉತ್ತಮ ಸ್ಟ್ರೈಕ್ ರೇಟ್ ಅನ್ನು ಹೊಂದಿದ್ದಾರೆ.
ಆದಾಗ್ಯೂ, ಗುರುವಾರ ನಡೆಯಲಿರುವ ಭಾರತ vs ನಮೀಬಿಯ ಪಂದ್ಯದಿಂದ ಅಭಿಷೇಕ್ ಶರ್ಮಾ ಹೊರಗುಳಿದರೆ, ಭಾರತವು ತನ್ನ ಕಾರ್ಯತಂತ್ರವನ್ನು ಪುನರ್ ವಿಮರ್ಶಿಸಿಕೊಳ್ಳಬೇಕಾಗುತ್ತದೆ. ಅಭಿಷೇಕ್ ಬದಲಿಗೆ ಸಂಜು ಸ್ಯಾಮ್ಸನ್ ತಂಡ ಸೇರಿಕೊಳ್ಳಬಹುದು. ಮಂಗಳವಾರದ ಅಭ್ಯಾಸ ಅವಧಿಯಲ್ಲಿ, ಸ್ಯಾಮ್ಸನ್ ಕಿಶನ್ ಜೊತೆಗೂಡಿ ಮೊದಲು ನೆಟ್ಸ್ನಲ್ಲಿ ಬ್ಯಾಟಿಂಗ್ ಮಾಡಿದರು. ಅಭಿಷೇಕ್ ಚೇತರಿಸಿಕೊಂಡರೆ, ಮುಂಬರುವ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ತಮ್ಮ ಸ್ಥಾನವನ್ನು ಮರಳಿ ಪಡೆಯುತ್ತಾರೆ.
ಆದರೆ ಭಾರತಕ್ಕೆ ಇತರ ಆಯ್ಕೆಗಳೂ ಇವೆ. ಉದಾಹರಣೆಗೆ, ಭಾರತವು ದೆಹಲಿಯಲ್ಲಿ ಈಗಾಗಲೇ ತಂಡವನ್ನು ಸೇರಿಕೊಂಡಿರುವ ವಾಷಿಂಗ್ಟನ್ ಸುಂದರ್ ಅವರೊಂದಿಗೆ ಆಡಬಹುದು. ಬಿಸಿಸಿಐ ಸಿಒಇಯಿಂದ ಅನುಮತಿ ಪಡೆದ ನಂತರ ಸುಂದರ್ ಮಂಗಳವಾರ ನೆಟ್ಸ್ನಲ್ಲಿ ಬೌಲಿಂಗ್ ಮಾಡಿದರು. ಅತ್ಯಂತ ಮಹತ್ವದ ಭಾರತ vs ಪಾಕ್ ಪಂದ್ಯ ಮತ್ತು ಸೂಪರ್ 8 ಬರುತ್ತಿರುವುದರಿಂದ, ಸುಂದರ್ ತನ್ನ ಲಯವನ್ನು ಮರಳಿ ಪಡೆಯಬೇಕೆಂದು ಭಾರತ ಬಯಸುತ್ತದೆ.
ಪಕ್ಕೆಲುಬಿನ ಮೂಳೆ ಮುರಿತದ ನಂತರ ಜನವರಿ 11 ರಿಂದ ವಾಷಿಂಗ್ಟನ್ ಸುಂದರ್ ಯಾವುದೇ ಪಂದ್ಯವನ್ನು ಆಡಿಲ್ಲ. ಆದಾಗ್ಯೂ, ಸುಂದರ್ ತಂಡಕ್ಕೆ ಮರಳಿರುವುದರಿಂದ, ಗೌತಮ್ ಗಂಭೀರ್ ಅವರನ್ನು ಪ್ಲೇಯಿಂಗ್ ಇಲೆವೆನ್ನಲ್ಲಿ ನೋಡಲು ಬಯಸಬಹುದು. ಆ ಸಂದರ್ಭದಲ್ಲಿ, ತಿಲಕ್ ವರ್ಮಾ ಅಥವಾ ಸೂರ್ಯಕುಮಾರ್ ಯಾದವ್ ಅವರನ್ನು ಇಶಾನ್ ಕಿಶನ್ ಜೊತೆ ಆರಂಭಿಕ ಬ್ಯಾಟಿಂಗ್ಗೆ ಬಡ್ತಿ ನೀಡಬಹುದು. ಇದು ಭಾರತಕ್ಕೆ ಬೌಲಿಂಗ್ ಆಯ್ಕೆಗಳನ್ನು ಮುಕ್ತವಾಗಿಡಲು ಸಹಾಯ ಮಾಡುತ್ತದೆ.