ಜಿಲ್ಲಾ ಸುದ್ದಿ

ಮತ್ತೆ ಸರಗಳ್ಳರ ಹಾವಳಿ

ಬೆಂಗಳೂರು: ನಗರದಲ್ಲಿ ಸರಗಳ್ಳರ ಹಾವಳಿ ಮತ್ತೆ ಆರಂಭವಾಗಿದೆ. ಚಂದ್ರಾಲೇಔಟ್ ಮತ್ತು ಹನುಮಂತನಗರದಲ್ಲಿ ಭಾನುವಾರ ನಡೆದ ಪ್ರತ್ಯೇಕ ಪ್ರಕರಣದಲ್ಲಿ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಇಬ್ಬರು ಮಹಿಳೆಯರ ಚಿನ್ನದ ಸರ ದೋಚಿ ಪರಾರಿಯಾಗಿದ್ದಾರೆ.

ಚಂದ್ರಾಲೇಔಟ್ ನಿಸರ್ಗ ಲೇ ಔಟ್ ನಲ್ಲಿ ದುಷ್ಕರ್ಮಿಗಳು ಶಾಂತಮ್ಮ(57) ಎಂಬುವವರ 40 ಗ್ರಾಂ ಚಿನ್ನದ ಸರ ದೋಚಿದ್ದಾರೆ. ನಿಸರ್ಗ ಲೈಔಟ್ ನಿವಾಸಿಯಾದ ಅವರು, ಸಂಬಂಧಿಯೊಬ್ಬರ ಅಂತ್ಯಕ್ರಿಯೆಗಾಗಿ ಶಿವಗಂಗೆಗೆ ಹೋಗಿದ್ದರು. ಭಾನುವಾರ ಮಧ್ಯಾಹ್ನ ಹಿಂತಿರುಗಿದ ಅವರು, ಆಟೋದಲ್ಲಿ ಬಂದು ಮನೆ ಸಮೀಪ ನಡೆದು ಹೋಗುತ್ತಿದ್ದರು. ಈ ವೇಳೆ ಹಿಂದಿನಿಂದ ಬಂದ ವ್ಯಕ್ತಿ ಸರ ದೋಚಿದ್ದಾನೆ. ಆಗ ಸಹಾಯಕ್ಕಾಗಿ ಕೂಗಿಕೊಂಡ ಶಾಂತಮ್ಮ, ಸರವನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ. ಹೆದರಿದ ಆರೋಪಿ ಕೈಗೆ ಸಿಕ್ಕ 40 ಗ್ರಾಂ ಸರ ದೋಚಿದ್ದು, ಸ್ವಲ್ಪ ದೂರದಲ್ಲಿ ನಿಂತಿದ್ದ ಸ್ನೇಹಿತನ ಜತೆ ಬೈಕ್ ನಲ್ಲಿ ಪರಾರಿಯಾಗಿದ್ದಾನೆ. 10 ಗ್ರಾಂ ಸರ ಮಾತ್ರ ಶಾಂತಮ್ಮನ ಕೈನಲ್ಲೇ ಉಳಿದುಕೊಂಡಿದೆ. ಈ ಸಂಬಂಧ ಚಂದ್ರಾಲೇಔಟ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಹನುಮಂತನಗರ 13ನೇ ಅಡ್ಡರಸ್ತೆ ನಿವಾಸಿ ಜಯಲಕ್ಷ್ಮಿ(60) ಅವರ ಸರವನ್ನೂ ದುಷ್ಕರ್ಮಿಗಳು ದೋಚಿದ್ದಾರೆ. ಔಷಧ ತರಲೆಂದು ಬೆಳಗ್ಗೆ ಶ್ರೀನಗರಕ್ಕೆ ಹೋಗುತ್ತಿದ್ದ ವೇಳೆ ಬೈಕ್ನಲ್ಲಿ ಬಂದ ಇಬ್ಬರು ದುಷ್ಕರ್ಮಿ ಗಳು, 90 ಗ್ರಾಂ ಸರ ದೋಚಿದ್ದಾರೆ. ಬೈಕ್ ಸವಾರ ಹೆಲ್ಮೆಟ್ ಧರಿಸಿದ್ದ. ಹಿಂದೆ ಕುಳಿತಿದ್ದ ವ್ಯಕ್ತಿ ಮಂಕಿ ಕ್ಯಾಪ್ ಹಾಕಿದ್ದ ಎಂದು ಜಯಲಕ್ಷ್ಮೀ ಹೇಳಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

SCROLL FOR NEXT