ಚಿಕ್ಕಬಳ್ಳಾಪುರ: ತುರ್ತು ಸಂದರ್ಭದಲ್ಲಿ ರಕ್ತವನ್ನು ಪೂರೈಸುವ ರೆಡ್ಕ್ರಾಸ್ ಸಂಸ್ಥೆಗೆ ದೇಣಿಗೆ ನೀಡಿ ಉತ್ತಮವಾಗಿ ಕಾರ್ಯ ನಿರ್ವಹಿಸಲು ಸಹಕರಿಸಬೇಕೆಂದು ಜಿಲ್ಲಾಧಿಕಾರಿ ಡಾ.ಆರ್. ವಿಶಾಲ್ ಕೋರಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ರೆಡ್ಕ್ರಾಸ್ನ ವಾರ್ಷಿಕ ಸಾಮಾನ್ಯ ಸಭೆ-2013 ರ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ರಕ್ತದ ಕೊರತೆಯಿಂದ ಹಲವರು ತಮ್ಮ ಪ್ರಾಣವನ್ನು ಕಳೆದುಕೊಳ್ಳುವ, ಮತ್ತೆ ಅನೇಕರು ಪರದಾಡುವಂತಹುದನ್ನು ನಾವು ಕಾಣುತ್ತೇವೆ. ರಕ್ತಕ್ಕಾಗಿ ಅಲೆದಾಡುವಾಗ ರಕ್ತದ ಮಹತ್ವ ತಿಳಿಯುತ್ತದೆ. ಇಂತಹ ಸಂದರ್ಭದಲ್ಲಿ ರೆಡ್ಕ್ರಾಸ್ ಕೊಡುಗೆ ಬಗ್ಗೆ ಅರಿವಾಗುತ್ತದೆ ಎಂದು ತಿಳಿಸಿದರು.
ರಕ್ತದಾನ ಮಾಡುವ ಮೂಲಕ ರಕ್ತದ ಕೊರತೆಯಿಂದ ಅನೇಕರು ಸಾವನ್ನಪ್ಪುವ ಪ್ರಕರಣಗಳು ನಡೆಯದಿರಲು ಪ್ರತಿಯೊಬ್ಬರು ರಕ್ತದಾನವನ್ನು ಮಾಡಬೇಕು. ರಕ್ತದಾನ ಮಹಾದಾನವಾಗಿದ್ದು ಇದು ತುರ್ತು ಸಂದರ್ಭದಲ್ಲಿ ರಕ್ತವನ್ನು ನಿರೀಕ್ಷಿಸುವವರ ಪ್ರಾಣವನ್ನು ಉಳಿಸುತ್ತದೆ ಎಂದ ಅವರು, ಚಿಕ್ಕಬಳ್ಳಾಪುರ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ರೆಡ್ಕ್ರಾಸ್ ವತಿಯಿಂದ ರಕ್ತ ನಿಧಿ ಕೇಂದ್ರ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು ರಕ್ತದ ಕೊರತೆಯಿಂದ ಜನರು ಪರದಾಡುವಂತಹುದನ್ನು ತಪ್ಪಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರಕ್ತ ನಿಧಿ ಕೇಂದ್ರವು ಇನ್ನೂ ಉತ್ತಮವಾಗಿ ಕಾರ್ಯ ನಿರ್ವಹಿಸಬೇಕಾಗಿರುವುದು ಅಗತ್ಯವಿದ್ದು ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ರೆಡ್ಕ್ರಾಸ್ನಲ್ಲಿ ಸದಸ್ಯತ್ವವನ್ನು ಪಡೆಯಬೇಕು. ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ದೇಣಿಗೆ ನೀಡಿ, ಇನ್ನೂ ಉಪಯುಕ್ತ ಕಾರ್ಯಕ್ರಮಗಳನ್ನು ಕೈಗೊಂಡು ರಕ್ತವನ್ನು ಪೂರೈಸಲು ಸಹಕಾರ ನೀಡಬೇಕೆಂದು ಕೋರಿದರು.
ತಹಸೀಲ್ದಾರ್ ಮತ್ತು ಕಾರ್ಯ ನಿರ್ವಹಣಾಧಿಕಾರಿಗಳು, ಸದಸ್ಯರು ರೆಡ್ಕ್ರಾಸ್ನ ಪ್ರಗತಿಪರ ಕಾರ್ಯಕ್ರಮಗಳನ್ನು ಕೈಗೊಳ್ಳಲು ಯೋಜನೆಯನ್ನು ರೂಪಿಸಿಕೊಳ್ಳಬೇಕು. ಅದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುವಂತೆ ಮಾಡಬೇಕೆಂದು ಸಲಹೆ ನೀಡಿದರು.
ರೆಡ್ಕ್ರಾಸ್ ಸಂಸ್ಥೆ, ರಕ್ತಬ್ಯಾಂಕ್ ಹಾಗೂ ಜಿಲ್ಲಾಸ್ಪತ್ರೆಗೆ ವೈದ್ಯಕೀಯ ಸಲಕರಣೆಗಳ ಕೊರತೆಯಿದ್ದು, ಅವನ್ನು ಕೊಂಡುಕೊಳ್ಳಬೇಕಾಗುತ್ತದೆ. ಇದಕ್ಕೆ ಇನೋವೇಟರ್ ಫಂಡ್ನಲ್ಲಿ ಸಹ ರೆಡ್ಕ್ರಾಸ್ಗೆ ಪ್ರಾಶಸ್ತ್ಯ ಕೊಟ್ಟು ಹಣ ಬಿಡುಗಡೆಗೊಳಿಸಲಾಗುವುದು. ಇನ್ನೂ ಈ ವರ್ಷ ರೆಡ್ಕ್ರಾಸ್ ಸಂಸ್ಥೆಗೆ 30 ಲಕ್ಷ ಅನುದಾನ ಈಗಾಗಲೇ ಬಿಡುಗಡೆಯಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಅನಾಥಶ್ರಮ ಸ್ಥಾಪಿಸಲು ಸಾಕಷ್ಟು ಪೂರ್ವ ಸಿದ್ಧತೆ ಅವಶ್ಯಕವಿರುವುದರಿಂದ ಮುಂಬರುವ ದಿನಗಳಲ್ಲಿ ಈ ಬಗ್ಗೆ ಯೋಚಿಸಲಾಗುವುದು. ಪ್ರತಿಯೊಬ್ಬರೂ ರೆಡ್ಕ್ರಾಸ್ಗೆ ತಮ್ಮ ಸಾಮರ್ಥ್ಯಕ್ಕೆ ಅನುಸಾರವಾಗಿ ದಾನ ಮಾಡಿದರೆ ಸಮಾಜಕ್ಕೆ ಒಳಿತಾಗುತ್ತದೆ ಎಂದವರು ತಿಳಿಸಿದರು.
ರೆಡ್ಕ್ರಾಸ್ನ ಜಿಲ್ಲಾ ಕಾರ್ಯದರ್ಶಿ ನಾರಾಯಣಚಾರ್ಯ ಮಾತನಾಡಿ, ರೆಡ್ಕ್ರಾಸ್ ರಕ್ತ ಬ್ಯಾಂಕ್ಗೆ 2012-13ನೇ ಸಾಲಿನಲ್ಲಿ ಜಿಲ್ಲೆಯಲ್ಲಿ 5188 ಯೂನಿಟ್ ರಕ್ತ ಶೇಖರಣೆಯಾಗಿದೆ. ಒಟ್ಟು 88 ರಕ್ತದಾನ ಶಿಬಿರಗಳನ್ನು ನಡೆಸಲಾಗಿದೆ ಎಂದರು.
ಅಧ್ಯಕ್ಷ ಡಾ. ಬಾಬುರೆಡ್ಡಿ, ಉಪಾಧ್ಯಕ್ಷ ಕೆ.ಪಿ. ಶ್ರೀನಿವಾಸಮೂರ್ತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಹೆಚ್.ವಿ. ರಂಗಸ್ವಾಮಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಅಜಿತ್ ಪ್ರಸಾದ್, ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಅಧ್ಯಕ್ಷ ಎಂ. ಜಯರಾಂ, ರೆಡ್ಕ್ರಾಸ್ನ ಖಜಾಂಚಿ ಆರ್.ವೆಂಕಟನಾರಾಯಣ್ ಮುಂತಾದವರು ಉಪಸ್ಥಿತರಿದ್ದರು.