ರಾಜ್ಯ

ಅಭಯಾರಣ್ಯ ಬೆಳೆಸಿದ ದಂಪತಿ: ಪ್ರಕೃತಿ ಪ್ರೇಮಕ್ಕೆ ಮಾದರಿ ಇವರು

Sumana Upadhyaya
ಮಡಿಕೇರಿ: ಮರುಕಳಿಸುವ ಬರಗಾಲಕ್ಕೆ ಅರಣ್ಯಗಳನ್ನು ಬೆಳೆಸಿ, ಸಂರಕ್ಷಿಸುವುದು ಕೊನೆಯ ಪರಿಹಾರ ಮತ್ತು ಇದು ಸರ್ಕಾರದ ಕರ್ತವ್ಯ, ಕೆಲಸ ಎಂದು ಎಲ್ಲರೂ ಭಾವಿಸುತ್ತಾರೆ.
ಆದರೆ ಇಲ್ಲೊಬ್ಬರು ಅನಿವಾಸಿ ಭಾರತೀಯ ದಂಪತಿ ಜನರು ವೈಯಕ್ತಿಕವಾಗಿ ಆಸಕ್ತಿ ಬೆಳೆಸಿಕೊಂಡು ಅರಣ್ಯವನ್ನು ಬೆಳೆಸಿ ಸಂರಕ್ಷಿಸಬಹುದು ಎಂದು ತೋರಿಸಿಕೊಟ್ಟಿದ್ದಾರೆ.
ಕೊಡಗು ಜಿಲ್ಲೆಯ ನಾಗರಹೊಳೆ ರಾಷ್ಟ್ರೀಯ ಅಭಯಾರಣ್ಯದಲ್ಲಿ ಪ್ರಾಣಿಗಳನ್ನು ರಕ್ಷಿಸಿ ಅಭಿಯಾನವನ್ನು ಇವರು ನಡೆಸುತ್ತಿದ್ದು ಅರಣ್ಯಗಳನ್ನು ಬೆಳೆಸುವುದಕ್ಕೆ ಉತ್ತೇಜನ ನೀಡುತ್ತಾರೆ. ದಕ್ಷಿಣ ಭಾರತದಲ್ಲಿ ಇದು ಮೊದಲ ಖಾಸಗಿ ಅಭಯಾರಣ್ಯವಾಗಿದ್ದು 300 ಎಕರೆ ಪ್ರದೇಶದಲ್ಲಿ ಹರಡಿದೆ. ಈ ದಂಪತಿಯ ಹೆಸರು ಪಮೇಲಾ ಮತ್ತು ಡಾ.ಎ.ಕೆ. ಮಲ್ಹೋತ್ರಾ.
ಅಭಯಾರಣ್ಯದಲ್ಲಿ ಬೇಕಾದಷ್ಟು ಮರಗಳಿದ್ದು ಇಲ್ಲಿ ಈಗ ಗಿಡ-ಮರ ಮತ್ತು ಪ್ರಾಣಿ, ಪಕ್ಷಿಗಳು ಪೂರಕವಾಗಿ ಬದುಕುತ್ತಿವೆ.
ಅಷ್ಟಕ್ಕೂ ಈ ಅಭಯಾರಣ್ಯ ಹೇಗೆ ಹುಟ್ಟಿಕೊಂಡಿತು, ದಂಪತಿ ಹೇಗೆ ಬೆಳೆಸಿದರು ಎಂಬುದಕ್ಕೆ ಕಥೆಯಿದೆ.  
ಎರಡು ದಶಕಗಳ ಹಿಂದೆ ಮಲ್ಹೋತ್ರಾ ಅವರಿಗೆ ಹಿಮಾಲಯದಲ್ಲಿ ಅಭಯಾರಣ್ಯ ಮಾಡಬೇಕು ಎಂಬ ಆಲೋಚನೆ ಹುಟ್ಟಿಕೊಂಡಿತು. ಆದರೆ ಅಲ್ಲಿನ ಕಾನೂನಿನ ಪ್ರಕಾರ ವ್ಯಕ್ತಿ ಅಥವಾ ಖಾಸಗಿ ಸಂಸ್ಥೆಗಳು 12 ಎಕರೆ ಪ್ರದೇಶಕ್ಕಿಂತ ಜಾಸ್ತಿ ಭೂಮಿಯನ್ನು ಹೊಂದಿರಬಾರದು. ಅಷ್ಟು ಭೂಮಿ ಅಭಯಾರಣ್ಯಕ್ಕೆ ಸಾಲದು ಎಂದು ದಂಪತಿಗೆ ಅನ್ನಿಸಿತು. 
ಆಗ ನೇರವಾಗಿ ಅವರು ಬಂದಿದ್ದು ದಕ್ಷಿಣ ಭಾರತದ ಕೊಡಗು ಜಿಲ್ಲೆಗೆ. ಜೀವ ವೈವಿಧ್ಯಮಯ ಸ್ಥಳ ಕಂಡು ಖುಷಿಯಾದ ದಂಪತಿ ಆರಂಭದಲ್ಲಿ 55 ಎಕರೆ ಜಮೀನನ್ನು 1993ರಲ್ಲಿ ತೆರಾಲು ಗ್ರಾಮದಲ್ಲಿ ಖರೀದಿಸಿದರು. ಕೃಷಿ ಭೂಮಿಯನ್ನು ಅಭಯಾರಣ್ಯವನ್ನಾಗಿ ಪರಿವರ್ತಿಸಿದರು. ಇಂದು ಇವರು ಬೆಳೆಸಿದ ಅರಣ್ಯ ಸಾಂಬಾರ್, ಮುಂಟ್ ಜಾಕ್, ಕಾಡು ಗಂಡು, ಚಿರತೆಗಳು, ಕಾಡು ನಾಯಿಗಳು, ಹುಲಿಗಳು ಮತ್ತು ಆನೆಗಳಿಗೆ ಆಶ್ರಯ ತಾಣವಾಗಿದೆ.
ದಂಪತಿ 10-12 ಎಕರೆ ಪ್ರದೇಶದಲ್ಲಿ ಕಾಫಿ, 15 ಎಕರೆ ಪ್ರದೇಶದಲ್ಲಿ ಏಲಕ್ಕಿ ಬೆಳೆಸಿದ್ದಾರೆ. ಸಾವಯವ ಕೃಷಿಯ ಮೂಲಕ ಹಣ್ಣು, ತರಕಾರಿ, ಭತ್ತವನ್ನು ಬೆಳೆಸಿದ್ದಾರೆ.
ದಂಪತಿ ಅರಣ್ಯದಲ್ಲಿ ಯಾವುದೇ ಗಿಡ-ಮರಗಳನ್ನು ತುಂಡು ಮಾಡಲಿಲ್ಲವಂತೆ. ಎಲ್ಲವೂ ಸಹಜವಾಗಿ ಬೆಳೆದಂತವು. ಪ್ರಾಣಿಗಳು ಸಹ ತಾವಾಗಿಯೇ ಅಲ್ಲಿಗೆ ಬಂದು ಜೀವಿಸುತ್ತವಂತೆ. ಅಭಯಾರಣ್ಯದಲ್ಲಿ ಹರಿದು ಹೋಗುವ ನದಿಯಿಂದ ಪ್ರಾಣಿಗಳಿಗೆ ನೀರು ಸಿಗುತ್ತದೆ.
ಅಭಯಾರಣ್ಯದಲ್ಲಿ ದಂಪತಿ ಹೋಂ ಸ್ಟೇಯನ್ನು ಸ್ಥಾಪಿಸಿದ್ದಾರೆ. ಅಲ್ಲಿ ಆಲ್ಕೋಹಾಲ್ ಸೇವನೆ, ಧೂಮಪಾನವನ್ನು ನಿಷೇಧಿಸಲಾಗಿದೆ. 
SCROLL FOR NEXT