ನವದೆಹಲಿ: ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ.ಶಶಿಕಲಾ ಅವರಿಗೆ ಕಾರಾಗೃಹದಲ್ಲಿ ವಿಐಪಿ ಆತಿಥ್ಯ ನೀಡಲಾಗುತ್ತಿದೆ ಎಂಬ ಆರೋಪಕ್ಕೆ ಸಂಬಂಧಪಟ್ಟಂತೆ ಮಾಜಿ ಉಪ ಪೊಲೀಸ್ ಮಹಾ ನಿರ್ದೇಶಕಿ ಡಿ.ರೂಪಾ ಮತ್ತೊಂದು ವಿಷಯ ಬಹಿರಂಗಪಡಿಸಿದ್ದಾರೆ. ಈ ವಿವಾದದ ಹಿಂದೆ ವ್ಯಕ್ತಿಯೊಬ್ಬರ ಹೆಸರನ್ನು ಉಲ್ಲೇಖಿಸಿದ್ದಾರೆ.
ರೂಪಾ ಅವರು ಇಂದು ಸಲ್ಲಿಸಿದ ವರದಿಯಲ್ಲಿ ಆಸ್ಟ್ರೆಲಿಯನ್ ಪ್ರಕಾಶ್ ಎಂದು ಜನಪ್ರಿಯವಾಗಿ ಕರೆಸಿಕೊಳ್ಳುವ ವಿ.ಎಸ್.ಪ್ರಕಾಶ್ ಹೆಸರನ್ನು ನಮೂದಿಸಿದ್ದು, ಅವರು ಮಲ್ಲಿಕಾರ್ಜುನ್ ಮತ್ತು ಶಶಿಕಲಾ ಮಧ್ಯೆ ಮಾತುಕತೆ ನಡೆಸಿದರು. ಮಲ್ಲಿಕಾರ್ಜುನ್ ಗೆ ಬೆಂಗಳೂರು ಪರಪ್ಪನ ಕಾರಾಗೃಹದಲ್ಲಿ ಹಲವು ಅಧಿಕಾರಿಗಳ ಪರಿಚಯವಿದೆ ಎಂದು ರೂಪಾ ವರದಿಯಲ್ಲಿ ಹೇಳಿದ್ದಾರೆ.
ಶಶಿಕಲಾ ತಮ್ಮನ್ನು ಭೇಟಿ ಮಾಡಲು ಬರುವವರನ್ನು ವಿಶೇಷ ಕೊಠಡಿಯಲ್ಲಿ ಭೇಟಿ ಮಾಡುತ್ತಾರೆ. ಅದು ಕೂಡ ವಿಶೇಷ ಆತಿಥ್ಯವಾಗಿದೆ. ಅಲ್ಲಿ ಸಿಸಿಟಿವಿ ಇರಲಿಲ್ಲ. ಆದರೆ ಅವರನ್ನು ಬಹಳ ಸಮಯದವರೆಗೆ ಭೇಟಿ ಮಾಡಲು ಆಗುವುದಿಲ್ಲ. ಇದಕ್ಕಾಗಿ ವಿ.ಎಸ್.ಪ್ರಕಾಶ್ ಮಾತುಕತೆ ನಡೆಸಿ ಶಶಿಕಲಾ ಅವರಿಗೆ ವಿಶೇಷ ಆತಿಥ್ಯ ಕೊಡಿಸಲು ಏರ್ಪಾಡು ಮಾಡಿದ್ದಾರೆ ಎಂದು ರೂಪಾ ಪತ್ರದಲ್ಲಿ ವಿವರಿಸಿದ್ದಾರೆ.
ವಿ.ಎಸ್.ಪ್ರಕಾಶ್ ಹಲವು ಬಾರಿ ಜೈಲಿನೊಳಗೆ ಹೋಗುತ್ತಾರೆ. ಕೆಲವು ಸಲ ಒಳಗೆ ಹೋದ ಬಗ್ಗೆ ದಾಖಲೆಯಲ್ಲಿ ಹೆಸರು ನಮೂದಿಸಿದ್ದರೆ ಇನ್ನು ಹಲವು ಬಾರಿ ದಾಖಲು ಮಾಡಿರುವುದೇ ಇಲ್ಲ. ಅವರಿಗೆ ಜೈಲಿನೊಳಗೆ ಪ್ರವೇಶಿಸಲು ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಗಜರಾಜ್ ಮಕನೂರ್ ಸಹಾಯ ಮಾಡುತ್ತಾರೆ. ಇದನ್ನು ಗೇಟ್ ಸಂಖ್ಯೆ 1 ಮತ್ತು ಗೇಟ್ ಸಂಖ್ಯೆ 2ರಲ್ಲಿ ಸಿಸಿಟಿವಿ ಕ್ಯಾಮರಾ ಸಂಖ್ಯೆ 8ರಲ್ಲಿ ದಾಖಲಾಗಿರುವುದನ್ನು ಪರಿಶೀಲಿಸಬಹುದು. ಜೈಲಿನ ಮುಖ್ಯಸ್ಥ ಕೃಷ್ಣ ಕುಮಾರ್, ಜೈಲಿನ ಡಿಜಿ ಸತ್ಯನಾರಾಯಣ್ ರಾವ್ ಅವರ ಪರವಾಗಿ ವ್ಯವಹಾರ ಕುದುರಿಸಿ ಮಲ್ಲಿಕಾರ್ಜುನ್ ಮತ್ತು ಟಿಟಿವಿ ದಿನಕರನ್ ಬಳಿಯಿಂದ 2 ಕೋಟಿ ರೂಪಾಯಿ ಲಂಚ ಪಡೆದಿದ್ದಾರೆ ಎಂದು ರೂಪಾ ಸಲ್ಲಿಸಿದ ವರದಿಯಲ್ಲಿ ವಿವರಿಸಲಾಗಿದೆ.
ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ರೂಪಾ ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos