ರಾಜ್ಯ

ಪರೇಶ್ ಮೆಸ್ತಾ ಸಾವಿನ ಪ್ರಕರಣ ಸಿಬಿಐ ತನಿಖೆಗೆ ವಹಿಸಿದ ರಾಜ್ಯ ಸರ್ಕಾರ

Sumana Upadhyaya
ಬೆಂಗಳೂರು: ಹಿಂದು ಕಾರ್ಯಕರ್ತ ಪರೇಶ್​ ಮೇಸ್ತಾ ಅನುಮಾನಾಸ್ಪದ ಸಾವು ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.ನಿನ್ನೆ ಗೃಹ ಸಚಿವ ರಾಮಲಿಂಗಾರೆಡ್ಡಿ ಈ ವಿಷಯ ತಿಳಿಸಿದ್ದಾರೆ. 
ಉತ್ತರ ಕನ್ನಡದ ಸಿರ್ಸಿ ಮತ್ತು ಹೊನ್ನಾವರಗಳಲ್ಲಿ ತೀವ್ರ ಪ್ರತಿಭಟನೆ ನಡೆದು ಹಿಂಸಾಚಾರ ಘಟಿಸಿದ ಹಿನ್ನೆಲೆಯಲ್ಲಿ ತನಿಖೆಯನ್ನು ಸಿಬಿಐಗೆ ವಹಿಸಲಾಗಿದ್ದು ಯಾವಾಗ ಬೇಕಾದರೂ ತನಿಖೆ ಮಾಡಲಿ ಎಂದು ಹೇಳಿದರು. ಬಿಜೆಪಿಯ ಒತ್ತಾಯದ ಮೇರೆಗೆ ಸಿಬಿಐ ತನಿಖೆಗೆ ನೀಡಲು ತೀರ್ಮಾನಿಸಿದ್ದಲ್ಲ. ಕುಟುಂಬಸ್ಥರ ಮನವಿ ಮೇರೆಗೆ ಎಂದು ಮಾಧ್ಯಮಗಳಿಗೆ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದರು.
ಇದಕ್ಕೂ ಮೊದಲು ಸಿಬಿಐ ತನಿಖೆಗೆ ಒತ್ತಾಯಿಸುವಂತೆ ಹೋರಾಡಲು ಬಿಜೆಪಿ ಸಜ್ಜಾಗಿತ್ತು. ಪರೇಶ್​ ಮೇಸ್ತಾ ತಂದೆ ಕಮಲಾಕರ್ ಕೂಡ ಮಗನ ಕೊಲೆಯಾಗಿದ್ದು, ಪೊಲೀಸರ ಮೇಲೆ ನಂಬಿಕೆಯಿಲ್ಲ. ಪ್ರಕರಣವನ್ನು ಸಿಬಿಐ ಅಥವಾ ಎನ್ಐಎ ಗೆ ವಹಿಸಬೇಕೆಂದು ಆಗ್ರಹಿಸಿದ್ದರು.
ಕಳೆದ ಡಿಸೆಂಬರ್ 8ರಂದು ಪರೇಶ್ ನ ಮೃತದೇಹ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಕೆರೆಯಲ್ಲಿ ಕಂಡುಬಂದಿತ್ತು. ಮೇಸ್ತಾ ಅನುಮಾನಾಸ್ಪದ ಸಾವು ಖಂಡಿಸಿ ಶಿರಸಿಯಲ್ಲಿ ಬಿಜೆಪಿ ನೇತೃತ್ವದಲ್ಲಿ ಹಿಂದು ಸಂಘಟನೆಗಳು ನಡೆಸಿದ ಪ್ರತಿಭಟನೆ ವೇಳೆ ಕಲ್ಲು ತೂರಾಟವಾಗಿ ವಾತಾವರಣ ಪ್ರಕ್ಷುಬ್ಧವಾಗಿತ್ತು. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಚ್ ಮಾಡಿ ಅಶ್ರುವಾಯು ಸಿಡಿಸಿದ್ದರು. ಗಾಳಿಯಲ್ಲಿ ಗುಂಡು ಹಾರಿಸಿದ್ದರು. ಅದಕ್ಕೂ ಮುನ್ನ ಐಜಿಪಿ ಹೇಮಂತ್​ ನಿಂಬಾಳ್ಕರ್ ಅವರ ಕಾರಿಗೆ ಉದ್ರಿಕ್ತರು ಬೆಂಕಿ ಹಚ್ಚಿದ್ದರು.
ಪರೇಶ್ ನನ್ನು ಕತ್ತರಿಸಿ ಹಾಕಿ ಮೃತದೇಹವನ್ನು ಸುಟ್ಟುಹಾಕಿ ಕತ್ತಿಯಿಂದ ಶಿರಚ್ಛೇದ ಮಾಡಲಾಗಿತ್ತು ಎಂದು ಆರೋಪಿಸಲಾಗುತ್ತಿದೆ. ಆದರೆ ಇವೆಲ್ಲ ವದಂತಿಯಾಗಿದ್ದು ಕೋಮು ಸಾಮರಸ್ಯ ಹದಗೆಡುವಂತೆ ಮಾಡುವ ದುರುದ್ದೇಶವಾಗಿದೆ. ಸಮಾಜವನ್ನು ಹದಗೆಡುವಂತೆ ಮಾಡಿ ಹಿಂಸಾಚಾರ ಉಂಟುಮಾಡಲು ಪ್ರಯತ್ನಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ರಾಮಲಿಂಗಾ ರೆಡ್ಡಿ ಇದೇ ಸಂದರ್ಭದಲ್ಲಿ ಎಚ್ಚರಿಕೆ ನೀಡಿದರು.
ಬಿಜೆಪಿಯವರು ಆಧಾರರಹಿತವಾಗಿ ಆರೋಪಗಳನ್ನು ಮಾಡುತ್ತಿದ್ದು ಪರಿಸ್ಥಿತಿಯ ಅನುಕೂಲತೆ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಪರೇಶ್ ಹಿಂದೂ ಪರ ಸಂಘಟನೆಯ ಸದಸ್ಯನಾಗಿದ್ದ ಎಂದು ಬಿಜೆಪಿಯವರು ಹೇಳುತ್ತಾರೆ. ಆದರೆ ತಮ್ಮ ಮಗ ಯಾವುದೇ ಸಂಘಟನೆ ಜೊತೆ ಗುರುತಿಸಿಕೊಂಡಿರಲಿಲ್ಲ ಎಂದು ಪರೇಶ್ ನ ತಂದೆಯೇ ಸ್ಪಷ್ಟಪಡಿಸಿದ್ದಾರೆ ಎಂದು ರಾಮಲಿಂಗಾ ರೆಡ್ಡಿ ಹೇಳಿದರು.
SCROLL FOR NEXT