ಡಾನ್ ಬಾಸ್ಕೋ ಸಂಸ್ಥೆ ವತಿಯಿಂದ ನಗರದಲ್ಲಿ ಆಯೋಜಿಸಿದ್ದ ಸಂವಾದದಲ್ಲಿ ಪಾಲ್ಗೊಂಡಿದ್ದ ಪಾದ್ರಿ ಟಾಮ್ ಉಳುನ್ನಲಿಲ್
ಬೆಂಗಳೂರು: ಇಸಿಸ್ ಉಗ್ರರ ಕಪಿಮುಷ್ಟಿಯಲ್ಲಿ ಸಿಲುಕಿಕೊಂಡು ನರಕಯಾತನೆ ಅನುಭವಿಸಿದ್ದ ಕೇರಳ ಮೂಲದ ಪಾದ್ರಿ ಟಾಮ್ ಉಳುನ್ನಲಿಲ್ ಅವರು ರಕ್ಷಣೆಗೊಳಗೊಂಡು ಕೊನೆಗೂ ತಾಯ್ನಾಡಿಗೆ ಆಗಮಿಸಿದ್ದು, ಸಾವಿನ ಮನೆಯಲ್ಲಿ ತಾವು ಅನುಭವಿಸಿದ್ದ ಯಾತನೆಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಇಸಿಸ್ ಉಗ್ರರ ಕಪಿಮುಷ್ಟಿಯಲ್ಲಿದ್ದರೂ ನಾನೆಂದಿಗೂ ನಂಬಿಕೆಗಳನ್ನು ಕಳೆದುಕೊಂಡಿರಲಿಲ್ಲ. ಜನರ ಪ್ರಾರ್ಥನೆಗಳು ನನ್ನನ್ನು ಸಾವಿನ ಮನೆಯಿಂದ ಹೊರ ತಂದಿತು ಎಂದು ಹೇಳಿದ್ದಾರೆ.
ಡಾನ್ ಬಾಸ್ಕೋ ಸಂಸ್ಥೆ ವತಿಯಿಂದ ನಗರದಲ್ಲಿ ಆಯೋಜಿಸಿದ್ದ ಸಂವಾದದಲ್ಲಿ ಪಾಲ್ಗೊಂಡಿದ್ದ ಅವರು, ಉಗ್ರರ ವಶದಲ್ಲಿದ್ದ ಸಂದರ್ಭದಲ್ಲಿ ತಾವು ಅನುಭವಿಸಿದ್ದ ಯಾತನೆಯನ್ನು ವಿವರಿಸಿದ್ದಾರೆ.
2016 ಮಾರ್ಚ್.4 ಶುಕ್ರವಾರದಂದು ನಾನು ಪ್ರಾರ್ಥನೆಯಲ್ಲಿ ತೊಡಗಿದ್ದೆ. ಇದ್ದಕ್ಕಿದ್ದಂತೆ ಹೊರಗಡೆಯಿಂದ ಗುಂಡು ಹಾರಿಸುತ್ತಿರುವ ಶಬ್ಧ ಕೇಳಿ ಬಂದಿತ್ತು. ಈ ವೇಳಿ ಬೆಚ್ಚಿಬಿದ್ದು ಪ್ರಾರ್ಥನಾ ಮಂದಿರದಿಂದ ಹೊರಗೆ ಬಂದಿದ್ದೆ. ಈ ವೇಳೆ ಭದ್ರತಾ ಸಿಬ್ಬಂದಿಗಳು ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂದಿತ್ತು. ಬಳಿಕ ಕೆಲ ಅಪರಿಚತ ವ್ಯಕ್ತಿಗಳು ನನ್ನ ಬಳಿ ಬಂದು ನನ್ನು ಗುರ್ತಿಕೆಯನ್ನು ಕೇಳಿದರು.
ನಾನು ಭಾರತೀಯನೆಂದು ಅವರಿಗೆ ಹೇಳಿದೆ. ಬಳಿಕ ನನ್ನನ್ನು ಭದ್ರತಾ ಸಿಬ್ಬಂದಿಗಳ ಕೊಠಡಿಯಲ್ಲಿ ಕೂರಿಸಿದರು. ಸ್ಥಳದಲ್ಲಿ ರಕ್ತದ ಕೋಡಿಯೇ ಹರಿದಿತ್ತು. ನನ್ನ ಕಣ್ಣ ಮುಂದೆಯೇ ನಾಲ್ವರ ಹತ್ಯೆ ನಡೆದಿತ್ತು. ಮುಂದಿನ ಸರದಿ ನನ್ನದೇ ಎಂದು ಮನಸ್ಸಿನಲ್ಲಿ ತೀರ್ಮಾನಿಸಿದ್ದೆ. ಆದರೆ, ಅವರು ನನ್ನನ್ನು ಸಾಯಿಸಲಿಲ್ಲ. ನನ್ನ ಕೈ ಕಾಲುಗಳನ್ನು ಕಟ್ಟಿ ವಾಹನವೊಂದರಲ್ಲಿ ಹಾಕಿಕೊಂಡು ಹೋದರು. ಬಳಿಕ ನನ್ನನ್ನು ಮತ್ತೊಂದು ಭಯೋತ್ಪಾದಕ ಗುಂಪಿಗೆ ಹಸ್ತಾಂತರಿಸಿದರು.
ಉಗ್ರರು ನನಗೆ ಯಾವುದೇ ರೀತಿಯ ಕಿರುಕುಳವನ್ನು ನೀಡಲಿಲ್ಲ. ಊಟವನ್ನು ನೀಡುತ್ತಿದ್ದರು. ಎರಡು ಬಾರಿ ನಾನು ಅನಾರೋಗ್ಯ ಪೀಡಿತನಾಗಿದ್ದೆ. ಈ ವೇಳೆ ಔಷಧಿಗಳನ್ನು ನೀಡಿದ್ದರು. ಸಕ್ಕರೆ ಕಾಯಿಲೆಯಿದ್ದುದ್ದರಿಂದ ನಾನು ಇನ್ಸುಲಿನ್ ಪಡೆದುಕೊಳ್ಳುತ್ತಿದ್ದೆ. ಆದರೆ, ಅದು ಅಲ್ಲಿ ಸಿಗುತ್ತಿರಲಿಲ್ಲ. ವೈದ್ಯರ ಬಳಿ ಚಿಕಿತ್ಸೆ ಕೊಡಿಸಿದ ಬಳಿಕ ಮೂರು ದಿನಗಳ ಕಾಲ ಇನ್ಸುಲಿನ್ ನೀಡಿದ್ದರು. ಬಳಿಕ ನನಗೆ ಮಾತ್ರೆಗಳನ್ನು ಕೊಟ್ಟಿದ್ದರು.
ಉಗ್ರರು ಅರೆಬಿಕ್ ಭಾಷೆಯಲ್ಲಿ ಮಾತನಾಡುತ್ತಿದ್ದರು. ನಾನು ಇಂಗ್ಲಿಷ್ ನಲ್ಲಿ ಮಾತನಾಡುತ್ತಿದ್ದೆ. ಅರೆಬಿಕ್ ನಲ್ಲಿ ಅವರೊಂದಿಗೆ ಮಾತನಾಡಲು ಕಷ್ಟವಾಗುತ್ತಿತ್ತು. ಅವರಿಗೆ ಇಂಗ್ಲಿಷ್ ಅರ್ಥವಾಗುತ್ತಿರಲಿಲ್ಲ. ವೆಂಟಿಲೇಷನ್ ಇದ್ದ ರೂಮ್ ವೊಂದನ್ನು ನನಗೆ ನೀಡಲಾಗಿತ್ತು. ಬೆಡ್ ವೊಂದರ ಮೇಲೆ ಕುಳಿತು, ಅಲ್ಲೇ ಮಲಗುತ್ತಿದ್ದೆ. ಅಪಹರಣಕ್ಕೊಳಗಾಗಿದ್ದಾಗ ನನ್ನ ತೂಕ 82 ಇತ್ತು. ಇದೀಗ 55 ಕೆಜಿ ಯಾಗಿದ್ದೇನೆ. ಕೊಠಡಿಯಲ್ಲಿ ನಾನೊಬ್ಬನೇ ಇರುತ್ತಿದ್ದೆ. ಈ ವೇಳೆ ಹಾಡುಗಳನ್ನು ಹಾಡುತ್ತಿದ್ದೆ. ಇಡೀ ವಿಶ್ವದ ಜನತೆ ನನಗಾಗಿ ಪ್ರಾರ್ಥಿಸುತ್ತಿದ್ದರಿಂದ ಉಗ್ರರಿಗೂ ನನ್ನನ್ನು ಏನೂ ಮಾಡಲಾಗಲಿಲ್ಲ. ಹೀಗಾಗಿ ನಾನು ಸಾವಿನಮನೆಯಿಂದ ಬಿಡುಗಡೆಯಾಗಿ ಬಂದೆ. ಜನರ ಪ್ರಾರ್ಥನೆಯೇ ನನ್ನನ್ನು ಉಳಿಸಿತು. ಜನರ ಪ್ರಾರ್ಥನೆಗೆ ಅಷ್ಟು ಶಕ್ತಿಯಿದೆ ಎಂದು ಹೇಳಿಕೊಂಡಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos