ಬೆಂಗಳೂರು: ಕೇವಲ ಆಸ್ತಿಗಾಗಿ ಯುವಕನೊಬ್ಬ ತನ್ನ ತಂದೆಯ ಕಣ್ಣನ್ನೇ ಕಿತ್ತು ಹಾಕಿದ ದಾರುಣ ಘಟನೆ ಬೆಂಗಳೂರಿನ ಶಾಕಾಂಬರಿ ನಗರದಲ್ಲಿ ಮಂಗಳವಾರ ನಡೆದಿದೆ.
65 ವರ್ಷದ ತನ್ನ ತಂದೆ, ನಿವೃತ್ತ ಸರ್ಕಾರಿ ನೌಕರ ಪರಮೇಶ್ ಅವರ ಕಣ್ಣು ಕಿತ್ತುಹಾಕಿದ ಅವರ ಪುತ್ರ ಚೇತನ್ ನನ್ನು ಜೆ.ಪಿ. ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಗಾಂಜಾ ವ್ಯ,ಸನಿಯಾಗಿದ್ದ ಚೇತನ್ ಕೈ ಬೆರಳಿನಿಂದ ತನ್ನ ತಂದೆಯ ಒಂದು ಕಣ್ಣು ಗುಡ್ಡೆ ಕಿತ್ತು ಹಾಕಿದ್ದು, ಪರಮೇಶ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಪರಮೇಶ್ ಅವರು ಡ್ರಗ್ಸ್ ವ್ಯಸನಿಯಾಗಿದ್ದ ಪುತ್ರ ಚೇತನನ್ನು ಮನೆಯಿಂದ ಹೊರಗೆ ಹಾಕಿದ್ದರು. ಇತ್ತೀಚಿಗೆ ಸಂಬಂಧಿಕರೆಲ್ಲರೂ ಸೇರಿ ತಂದೆ ಮಗನ ನಡುವೆ ರಾಜಿ ಪಂಚಾಯಿತಿ ಮಾಡಿ ಇಬ್ಬರನ್ನೂ ಒಂದು ಮಾಡಿದ್ದರು. ಚೇತನ್ ಕುಟುಂಬ ಸೇರಿದರೂ ಮನೆಯ ಮೇಲೆ ಸಣ್ಣದೊಂದು ಕೊಠಡಿಯಲ್ಲಿ ವಾಸ ಮಾಡುತ್ತಿದ್ದ. ಹೀಗಿರುವಾಗಲೇ ತಿಂಗಳ ಹಿಂದೆ ಪರಮೇಶ್ ಅವರ ಪತ್ನಿ ತೀರಿಕೊಂಡಿದ್ದರು.
ತಾಯಿ ಸಾವಿಗೀಡಾಗುತ್ತಿದ್ದಂತೆ ಆಸ್ತಿ ಮೇಲೆ ಕಣ್ಣು ಹಾಕಿದ ಚೇತನ್, ಇದೇ ವಿಚಾರವಾಗಿ ತಂದೆಯೊಂದಿಗೆ ಜಗಳ ತೆಗೆದಿದ್ದಾನೆ. ಆಸ್ತಿ ಬರೆದುಕೊಡುವಂತೆ ಮಂಗಳವಾರವೂ ತಂದೆಯನ್ನು ಪೀಡಿಸಿದ್ದ. ಹೀಗಾಗಿ ತಂದೆ ಮಗನ ನಡುವೆ ಜೋರು ಜಗಳ ನಡೆದಿದೆ. ಕೊನೆಗೆ ಚೇತನ್ ತನ್ನ ತಂದೆ ಪರಮೇಶ್ ಅವರ ಕಣ್ಣನ್ನೇ ಕಿತ್ತು ಹಾಕಿದ್ದಾನೆ. ಪರಮೇಶ್ ಅವರನ್ನು ಕೂಡಲೇ ಹತ್ತಿರದ ಕಣ್ಣಿನ ಆಸ್ಪತ್ರೆಗೆ ದಾಖಲಿಸಲಾಗಿದೆ.