ಬೆಂಗಳೂರು: ವ್ಯಕ್ತಿಯೊಬ್ಬರ ಮೇಲೆ ನಲಪಾಡ್ ಹ್ಯಾರಿಸ್ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಶಾಸಕ ಎನ್ ಎ ಹ್ಯಾರಿಸ್ ಹಲ್ಲೆ ಘಟನೆ ಕುರಿತಂತೆ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿನ್ನೆ ಹಲ್ಲೆಗೊಳಗಾಗಿದ್ದ ವಿದ್ವತ್ ಚಿಕಿತ್ಸೆ ಪಡೆಯುತ್ತಿರುವ ಮಲ್ಯಾ ಆಸ್ಪತ್ರೆಗೆ ಭೇಟಿ ನೀಡಿದ್ದ ಶಾಸಕ ಹ್ಯಾರಿಸ್, ವಿದ್ವತ್ ಆರೋಗ್ಯ ವಿಚಾರಿಸಿದರು. ಬಳಿಕ ವಿದ್ವತ್ ಪೋಷಕರಿಗೆ ಸಾಂತ್ವನ ಹೇಳಿದ ಶಾಸಕ ಹ್ಯಾರಿಸ್ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ, ಘಟನಾ ಸ್ಥಳದಲ್ಲಿ ಏನಾಯಿತು ಎಂದು ತಿಳಿದಿಲ್ಲ. ಆದರೆ ಇಂತಹ ಕೃತ್ಯ ಯಾರೇ ಮಾಡಿದರೂ ಅದು ತಪ್ಪು.. ನನ್ನ ಮಗನೋ ಅಥವಾ ಶಾಸಕನ ಮಗನೋ.. ಇದು ಯಾರೇ ಮಾಡಿದರೂ ತಪ್ಪೇ.. ಇಂತಹ ಕೃತ್ಯಗಳಲ್ಲಿ ಭಾಗಿಯಾಗದಂತೆ ಹಲವು ಬಾರಿ ನನ್ನ ಮಗನಿಗೆ ಸಲಹೆ ನೀಡಿದ್ದೆ ಎಂದು ಹೇಳಿದ್ದಾರೆ.
ಹಲ್ಲೆಗೊಳಗಾಗಿರುವ ವಿದ್ವತ್ ತಂದೆ ಲೋಕನಾಥ್ ನನಗೆ ಪರಿಚಿತರು. ತುಂಬಾ ವರ್ಷಗಳಿಂದ ನಾನು ಲೋಕನಾಥ್ ಅವರನ್ನು ನೋಡಿದ್ದೇನೆ. ನನಗೆ ಆತ್ಮೀಯರೂ ಕೂಡ. ಅವರು ಒಂದು ರೀತಿಯ ದುಃಖದಲ್ಲಿದ್ದಾರೆ ಎಂದು ಹೇಳಿದ್ದಾರೆ. ಅಂತೆಯೇ ನಲಪಾಡ್ ಜೊತೆ ಈ ಬಗ್ಗೆ ನಾನು ಮಾತನಾಡಿದ್ದು, ಪ್ರಸ್ತುತ ಆತ ಎಲ್ಲಿದ್ದಾನೆ ಎಂದು ನನಗೆ ತಿಳಿಯದು. ಆತನ ಫೋನ್ ಸ್ವಿಚ್ ಆಫ್ ಆಗಿದೆ ಎಂದು ಹ್ಯಾರಿಸ್ ಹೇಳಿದ್ದಾರೆ.