ರಾಜ್ಯ

ಪೋಂಜಿ ಹಗರಣ: ಬ್ಯಾಂಕ್ ಖಾತೆ ಮುಟ್ಟುಗೋಲು ಹಾಕಿದ್ದರ ವಿರುದ್ಧ ಪ್ರಕಾಶ್ ಪಡುಕೋಣೆ ಹೈಕೋರ್ಟ್ ಗೆ ದೂರು

Sumana Upadhyaya

ಬೆಂಗಳೂರು: ವಿಕ್ರಂ ಹೂಡಿಕೆ ಹಗರಣಕ್ಕೆ ಸಂಬಂಧಪಟ್ಟಂತೆ ಬನಶಂಕರಿ ಠಾಣೆ ಪೊಲೀಸರು ತನಿಖೆ ಕೈಗೊಂಡಿರುವುದರಿಂದ ಐಡಿಬಿಐ ಬ್ಯಾಂಕಿನಲ್ಲಿರುವ ತಮ್ಮ ಜಂಟಿ ಖಾತೆಯನ್ನು ಹಠಾತ್ ಮುಟ್ಟುಗೋಲು ಹಾಕಿರುವುದನ್ನು ಖಂಡಿಸಿ ಮಾಜಿ ಬ್ಯಾಡ್ಮಿಂಟನ್ ತಾರೆ ಪ್ರಕಾಶ್ ಪಡುಕೋಣೆ ಮತ್ತು ಅವರ ಕುಟುಂಬ ವರ್ಗ ಹೈಕೋರ್ಟ್ ಗೆ ದೂರು ಸಲ್ಲಿಸಿದೆ.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಎಸ್ ಬೋಪಣ್ಣ, ಬನಶಂಕರಿ ಪೊಲೀಸ್ ಠಾಣೆ ಮತ್ತು ಮಲ್ಲೇಶ್ವರದ ಐಡಿಬಿಐ ಬ್ಯಾಂಕ್ ಮೂಲಕ ರಾಜ್ಯ ಸರ್ಕಾರಕ್ಕೆ ನೊಟೀಸ್ ಜಾರಿ ಮಾಡಿದ್ದಾರೆ. ಈ ಕೇಸಿನಲ್ಲಿ ಪೊಲೀಸ್ ಇಲಾಖೆಯಿಂದ ಸಲಹೆಗಳನ್ನು ಪಡೆಯುವಂತೆ ಸರ್ಕಾರದ ಪರ ವಕೀಲರಿಗೆ ಸೂಚಿಸಿದ್ದಾರೆ.

ತಮ್ಮ ಜಂಟಿ ಖಾತೆಯನ್ನು ಮುಟ್ಟುಗೋಲು ಹಾಕುವುದರ ಬಗ್ಗೆ ಪೊಲೀಸರಿಂದಾಗಲಿ, ಬ್ಯಾಂಕಿನಿಂದಾಗಲಿ ತಮಗೆ ನೊಟೀಸ್ ಬಂದಿಲ್ಲ ಎಂದು ಪ್ರಕಾಶ್ ಪಡುಕೋಣೆ ಮತ್ತು ಅವರ ಕುಟುಂಬ ವರ್ಗ ಆರೋಪಿಸಿದೆ.

ವಿಕ್ರಂ ಸಂಸ್ಥೆ ವಿರುದ್ಧ ಕ್ರಮ ಕೈಗೊಂಡ ಕೂಡಲೇ ತಮ್ಮ ಖಾತೆಯನ್ನು ಮುಟ್ಟುಗೋಲು ಹಾಕುವುದಾಗಿ ಕೂಡ ನಮಗೆ ಮಾಹಿತಿ ನೀಡಿಲ್ಲ. ಸಂಸ್ಥೆಗೆ ಪಾವತಿಸಿದ ಹಣದಲ್ಲಿ ಕೆಲವು ಕಾನೂನುಬಾಹಿರತೆ ಇರಬಹುದು, ಆದರೆ ಒಪ್ಪಿಕೊಳ್ಳದೆ, ಅರ್ಜಿದಾರರಿಗೆ ತಮ್ಮ ಖಾತೆಯನ್ನು ಬಳಸುವುದನ್ನು ಮುಂದುವರೆಸಲು ಅವಕಾಶ ನೀಡಿಲ್ಲ ಎಂದು ಅವರು ಹೇಳಿದ್ದಾರೆ.

ಖಾತೆಯಲ್ಲಿನ ತಮ್ಮ ಹಣದ ವಹಿವಾಟು ನಡೆಸುವ ಹಕ್ಕನ್ನು ತಿರಸ್ಕರಿಸಲಾಗಿದೆ. ಇದು ಕಾನೂನುಬಾಹಿರ ಮತ್ತು ಅಸಂವಿಧಾನಿಕ ಕ್ರಮವಾಗಿದೆ ಎಂದು ಪ್ರಕಾಶ್ ಪಡುಕೋಣೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

SCROLL FOR NEXT