ಮೈಸೂರು:: ಹಿರಿಯ ರಂಗ ಕಲಾವಿದೆ ರಂಗನಾಯಕಮ್ಮ(80) ವಿಧಿವಶರಾಗಿದ್ದಾರೆ. ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ರಂಗನಾಯಕಮ್ಮ ಭಾನುವಾರ ರಾತ್ರಿ ಅಸುನೀಗಿದ್ದಾರೆ.
ಬೆಂಗಳುರಿನಲ್ಲಿ ವಾಸವಿದ್ದ ಇವರು ಅನಾರೋಗ್ಯದ ಕಾರಣ ಇತ್ತೀಚೆಗೆ ಮೈಸೂರಿನ ತಮ್ಮ ಪುತ್ರಿಯ ನಿವಾಸದಲ್ಲಿ ನೆಲೆಸಿದ್ದರು.ಭಾನುವಾರ ಉಸಿರಾಟದ ಸಮಸ್ಯೆ ಕಂಡುಬಂದಾಗ ಅವರನ್ನು ಮೈಸೂರಿನ ಕಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾರೆ.
ನಾಟಕ ಕಂಪನಿ ಮ್ಯಾನೇಜರ್ ಆಗಿದ್ದ ನಂಜಪ್ಪನವರ ಪತ್ನಿ ರಂಗನಾಯಕಮ್ಮ ವೃತ್ತಿ ರಂಗಭೂಮಿಯಲ್ಲಿ ಸಾಕಷ್ಟು ಹೆಸರು ಗಳಿಸಿದ್ದರು.
ಗುಬ್ಬಿ ವೀರಣ್ನ, ಹೊನ್ನಪ್ಪ ಭಾಗವತರ್, ಸುಬ್ಬಯ್ಯ ನಾಯ್ಡು ಮಹಂತೇಶ ಶಾಸ್ತ್ರಿ ಸೇರಿದಂತೆ ಹಲವಾರು ಜನರ ನಾಟಕ ಕಂಪನಿಗಳಲ್ಲಿ ಅರವತ್ತಕ್ಕೆ ಹೆಚ್ಚು ವರ್ಷಗಳ ಕಾಲ ರಂಗನಾಯಕಮ್ಮ ಸೇವೆ ಸಲ್ಲಿಸಿದ್ದರು.ವೈವಿದ್ಯಮಯ ಪಾತ್ರಗಳಲ್ಲಿ ನಟಿಸಿದ್ದ ಅವರ ಕಲಾಸೇವೆಗೆ 2014ರಲ್ಲಿ ಗುಬ್ಬಿ ವೀರಣ್ಣ ಪ್ರಶಸ್ತಿ ಒಲಿದು ಬಂದಿತ್ತು.
ರಂಗನಾಯಕಮ್ಮ ಅವರ ಮೂಲ ಹೆಸರು ನಿರ್ಮಲಾ ಎಂದಿದ್ದು ಚಿಕ್ಕ ವಯಸ್ಸಿಗೇ ರಂಗಭೂಮಿಗೆ ಪ್ರವೇಶಿಸಿದ್ದ ಈಕೆಯಅಭಿನಯ ಚಾತುರ್ಯವನ್ನು ಮೆಚ್ಚಿ ಸುಬ್ಬಯ್ಯ ನಾಯ್ಡು ಅವರಿಗೆ "ರಂಗನಾಯಕಮ್ಮ" ಎಂದು ನಾಮಕರಣ ಮಾಡಿದ್ದರು. ಮುಂದೆ ಅದುವೇ ಅವರ ಹೆಸರಾಗಿ ಉಳಿಯಿತು.
ಪ್ರಸಿದ್ದ ಹಾಸ್ಯ ನಟ ಡಿಂಗ್ರಿ ನಾಗರಾಜ್ ಅವರ ಸೋದರಿಯಾಗಿರುವ ರಂಗನಾಯಕಮ್ಮನವರ ಅಂತ್ಯ ಸಂಸ್ಕಾರವು ಇಂದು ಸಂಜೆ ಮೈಸೂರಿನಲ್ಲಿ ನೆರವೇರಲಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos