ಬೆಂಗಳೂರು: ಶಿಕ್ಷಣ ಹಕ್ಕು ಕಾಯ್ದೆಯಡಿ ಸಾರ್ವಜನಿಕ ಶಿಕ್ಷಣ ಇಲಾಖೆ 2019-20ನೇ ಸಾಲಿಗೆ ಅರ್ಜಿ ಸಲ್ಲಿಸಲು ವೇಳಾಪಟ್ಟಿ ಬಿಡುಗಡೆ ಮಾಡಿದೆ. ಸರ್ಕಾರಿ ಶಾಲೆಗಳು ಇರದ ಕಡೆ ಬಡ ಮಕ್ಕಳು ಅನುದಾನ ಮತ್ತು ಅನುದಾನರಹಿತ ಶಾಲೆಗಳಲ್ಲಿ ಶೇ.25ರಷ್ಟುಸೀಟು ಪಡೆಯುವ ಸೌಲಭ್ಯ ಇದಾಗಿದೆ. ಮಾ.20ರಿಂದ ಏ.15 ರ ವರೆಗೆ ಪೋಷಕರು ಅರ್ಜಿ ಸಲ್ಲಿಸಬಹುದು.
ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಸೂಚನೆ ಹೊರಡಿಸಿದೆ. ಮೇ 1ರಂದು ಆನ್ಲೈನ್ ಮೂಲಕ ಮೊದಲ ಸುತ್ತಿನ ಸೀಟು ಹಂಚಿಕೆ ಮಾಡಲಿದ್ದು, ಎರಡನೇ ಸುತ್ತಿನ ಸೀಟು ಹಂಚಿಕೆ ಮೇ 25ರಂದು ನಡೆಯಲಿದೆ ಎಂದು ಶಿಕ್ಷಣ ಇಲಾಖೆ ಆಯುಕ್ತ ಪಿ.ಸಿ. ಜಾಫರ್ ತಿಳಿಸಿದ್ದಾರೆ.
2015ರ ಏ.1ರ ನಂತರ ಬರಗಾಲದ ಕಾರಣ ಆತ್ಯಹತ್ಯೆ ಮಾಡಿಕೊಂಡ ರೈತರ ಮಕ್ಕಳು, ವಿಶೇಷ ಪ್ರವರ್ಗಕ್ಕೆ ಸೇರಿo ಅನಾಥ ಮಗು, ಎಚ್ಐವಿ ಬಾಧಿತ/ಸೋಂಕಿತ ಮಗು, ಮಂಗಳಮುಖಿ ಮಗು, ವಿಶೇಷ ಅಗತ್ಯತೆಯುಳ್ಳ ಮಗು, ವಲಸೆ ಮತ್ತು ಬೀದಿ ಮಕ್ಕಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.
ಅರ್ಜಿ ಸಲ್ಲಿಸಲು ಪೋಷಕರ ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ದೃಢೀಕರಣ ಪತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಅರ್ಜಿ ಸಲ್ಲಿಕೆ ಬಳಿಕ ದಾಖಲೆಗಳಲ್ಲಿ ದೋಷಗಳನ್ನು ಸರಿಪಡಿಸುವಂತೆ ಪೋಷಕರ ಮೊಬೈಲ್ ಸಂಖ್ಯೆಗೆ ಮೆಸೇಜ್ ಕಳುಹಿಸಲಾಗುತ್ತದೆ.