ಬೆಂಗಳೂರು: ಮಗನನ್ನ ಕೊಲೆ ಮಾಡಿ ತಂದೆ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಬೆಂಗಳೂರಿನ ಸಂಪಂಗಿರಾಮನಗರದಲ್ಲಿ ನಡೆದಿದೆ.
ಸಂಪಂಗಿರಾಮನಗರದಲ್ಲಿ ತಂದೆಯೇ ತನ್ನ ಮಗನನ್ನು ಕೊಲೆ ಮಾಡಿದ್ದಾನೆ. 11 ವರ್ಷದ ಉದಯ್ ಸಾಯಿ ಮೃತ ಬಾಲಕ. ಆರೋಪಿ ತಂದೆ ಸುರೇಶ್ ನಿನ್ನೆ ರಾತ್ರಿ ಹೆಂಡತಿ ಪಕ್ಕ ಮಲಗಿದ್ದ ಮಗನನ್ನು ನೀರಿನ ಸಂಪ್ ಗೆ ಹಾಕಿದ್ದಾನೆ. ಮತ್ತು ತಾನು ನೇಣು ಹಾಕಿಕೊಂಡು ಸಾವಿಗೆ ಶರಣಾಗಿದ್ದಾನೆ.
ಹುಟ್ಟಿದಾಗಿನಿಂದ ಮಾತು ಬರದ, ಕಿವಿಯೂ ಕೇಳದ ಬಾಲಕ ಉದಯ್ ಸಾಯಿ ನೀರಿನಲ್ಲಿ ಮುಳುಗಿ ಪ್ರಾಣ ಬಿಟ್ಟಿದ್ದಾನೆ. ಬೆಳಗಿನ ಜಾವ ತಾಯಿ ಎದ್ದು ನೋಡಿದಾಗ ಮಗನ ಶವ ಪತ್ತೆಯಾಗಿದೆ. ಗಂಡ ಸುರೇಶ್ ನಾಪತ್ತೆಯಾಗಿರುವುದು ತಿಳಿದು ಬಂದಿದೆ. ಕೂಡಲೇ ಮೃತ ಬಾಲಕನ ತಾಯಿ ಲಕ್ಷ್ಮಿ ನೆರೆಹೊರೆಯವರಿಗೆ ವಿಷಯ ತಿಳಿಸಿದ್ದಾಳೆ, ಬಾಲಕ ಸಂಪ್ ನಲ್ಲಿ ಪತ್ತೆಯಾಗಿದ್ದಾನೆ, ನಂತರ ಆಕೆ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
11 ವರ್ಷದ ಉದಯ್ ಸಾಯಿ ಎಂಬ ಮಗನನ್ನ ಮುಂಜಾನೆ 6.30 ಮನೆ ನೀರಿನ ಸಂಪ್ ನಲ್ಲಿ ಎಸೆದು ತಂದೆ ಸುರೇಶ್ ಶೇಷಾದ್ರಿ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸುರೇಶ್ ಆಟೋ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದರು. ಸುರೇಶ್ ಸ್ಪೈನಲ್ ಕಾರ್ಡ್ ಸಮಸ್ಯೆಯಿಂದ ಬಳಲುತ್ತಿದ್ದು ಮಗನ ಸಮಸ್ಯೆಯಿಂದಾಗಿ ಮಾನಸಿಕ ಖಿನ್ನತೆಗೊಳಗಾಗಿದ್ದರು.
ಮಗುವನ್ನು ನೋಡಿಕೊಳ್ಳಲು ಲಕ್ಷ್ಮಿ ಇತ್ತೀಚೆಗೆ ಕೆಲಸ ತೊರೆದಿದ್ದರು, ಆಕೆಯ ಹೇಳಿಕೆ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ.