ರಾಜ್ಯ

ಹುಲಿ ಕಾಣಿಸಿಕೊಂಡ ಕುರಿತು ನಕಲಿ ಚಿತ್ರ ಪೋಸ್ಟ್: ಖಾಸಗಿ ರೆಸಾರ್ಟ್ ಗಳ ವಿರುದ್ದ ಅರಣ್ಯ ಇಲಾಖೆ ದೂರು!

Srinivasamurthy VN

ಬೆಂಗಳೂರು: ಅರಣ್ಯದ ಅಂಚಿನಲ್ಲಿರುವ ಹೋಂ ಸ್ಟೇ ಮತ್ತು ರೆಸಾರ್ಟ್‌ಗಳಿಗೆ ಪ್ರವಾಸಿಗರನ್ನು ಸೆಳೆಯಲು ಹುಲಿ ಅಥವಾ ಚಿರತೆ ಕಾಣಿಸಿಕೊಂಡ ಕುರಿತ ಗಿಮಿಕ್‌ಗೆ ಕಡಿವಾಣ ಹಾಕಲು ಅರಣ್ಯಾಧಿಕಾರಿಗಳು ನಿರ್ಧರಿಸಿದ್ದು, ಕೆಲ ಖಾಸಗಿ ರೆಸಾರ್ಟ್ ಗಳ ವಿರುದ್ಧ ದಾರು ದಾಖಲಿಸಿದ್ದಾರೆ.

ಚಿಕ್ಕಮಗಳೂರಿನ ಗಾಲ್ಫ್ ಕ್ಲಬ್ ರಸ್ತೆಯಲ್ಲಿ ಸೋಮವಾರ ತಡರಾತ್ರಿಯಿಂದ ಎರಡು ಹುಲಿಗಳು ಕಾಣಿಸಿಕೊಂಡಿರುವ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ಹರಿದಾಡುತ್ತಿದ್ದು, ಅದರಂತೆ ರೆಸಾರ್ಟ್ ಮಾಲೀಕರು ಹಾಗೂ ಜನರ ವಿರುದ್ಧ ರೇಂಜ್ ಫಾರೆಸ್ಟ್ ಆಫೀಸರ್ ಸ್ವಾತಿ ಎಲ್ ಮಂಗಳವಾರ ದೂರು ದಾಖಲಿಸಿದ್ದಾರೆ. ಚಿಕ್ಕಮಗಳೂರಿನ ಸಿಇಎನ್ ಪೊಲೀಸರು ನಾನ್ ಕಾಗ್ನೈಸಬಲ್ ವರದಿ ದಾಖಲಿಸಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಅರಣ್ಯಾಧಿಕಾರಿಗಳು ಸೈಯದ್ ಮಸೂದ್ ಮತ್ತು ಸಮೀರ್ ಹುಸೇನ್ ಎಂಬ ಇಬ್ಬರು ವ್ಯಕ್ತಿಗಳನ್ನು ಕೂಡ ವಿಚಾರಣೆಗೆ ಕರೆದೊಯ್ದರು ಎಂದು ತಿಳಿದುಬಂದಿದೆ. 

ಸೈಯದ್ ಮತ್ತು ಸಮೀರ್ ಅವರನ್ನು ವಿಚಾರಣೆಗೊಳಪಡಿಸಲಾಗಿದ್ದು, ಫೋಟೋಗಳು ಮತ್ತು ವೀಡಿಯೊಗಳನ್ನು ಡಿಲೀಟ್ ಮಾಡಲಾಗಿದೆ ಎಂದು  ರೇಂಜ್ ಫಾರೆಸ್ಟ್ ಆಫೀಸರ್ ಸ್ವಾತಿ ಎಲ್ ಅವರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ. ಅಲ್ಲದೆ ಹೋಮ್ ಸ್ಟೇ ಮತ್ತು ರೆಸಾರ್ಟ್ ಬಳಿ ಹುಲಿ ಕಾಣಿಸಿಕೊಂಡ ಕುರಿತ ಸುದ್ದಿಕೇಳಿ ಸ್ಥಳೀಯ ಜನರು ಗಾಬರಿಗೊಂಡಿದ್ದಾರೆ. ಹೀಗಾಗಿ ದೂರು ದಾಖಲಾಗಿದೆ. ಚಿಕ್ಕಮಗಳೂರು ಹುಲಿಗಳ ಸಂಭಾವ್ಯ ಆವಾಸಸ್ಥಾನವಾಗಿದೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಉಲ್ಲೇಖಿಸಿದ ಪ್ರದೇಶದಲ್ಲಿ ಹುಲಿಗಳ ಕುರುಹು ಇಲ್ಲ. ಪ್ರವಾಸಿಗರನ್ನು ಸೆಳೆಯಲು ತೀವ್ರ ಪೈಪೋಟಿಯಿಂದಾಗಿ ರೆಸಾರ್ಟ್ ಗಳು ಇಂತಹ ಕೃತ್ಯವೆಸಗುತ್ತಿದ್ದಾರೆ ಎಂದು ಪರಿಸರ ಸಂರಕ್ಷಣಾ ವಾದಿಗಳು ಆರೋಪಿಸುತ್ತಿದ್ದಾರೆ ಎಂದು ಹೇಳಿದರು.

ಈ ನಕಲಿ ಫೋಟೋ ಮತ್ತು ಸಂದೇಶಗಳನ್ನು ಪ್ರಸಾರ ಮಾಡಿದ ಬೆಂಗಳೂರಿನ ಮುಸ್ತಫಾ ಎಂಬಾತನನ್ನೂ ಪೊಲೀಸರು ಮತ್ತು ಅರಣ್ಯಾಧಿಕಾರಿಗಳು ಪತ್ತೆ ಹಚ್ಚಿದ್ದು, ಇತರೆ ವಿವರಗಳನ್ನು ಪತ್ತೆ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹೋಮ್ ಸ್ಟೇ ಮತ್ತು ರೆಸಾರ್ಟ್ ಮಾಲೀಕರಿಂದ ಇಂತಹ ನಕಲಿ ವೀಡಿಯೊಗಳು ಮತ್ತು ಫೋಟೋಗಳನ್ನು ಪ್ರಸಾರ ಮಾಡುತ್ತಿರುವುದು ಇದೇ ಮೊದಲಲ್ಲ ಎಂದು ಪರಿಸರ ಸಂರಕ್ಷಣಾ ತಜ್ಞರು ಹೇಳಿದ್ದಾರೆ. 

"ಅವರು ಪ್ರವಾಸಿಗರನ್ನು ಸೆಳೆಯಲು ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಲೈಕ್ ಮತ್ತು ವೀಕ್ಷಣೆ ಪಡೆಯಲು ಇದನ್ನು ಮಾಡುತ್ತಾರೆ. ಆದರೆ ಇಂತಹ ಕೃತ್ಯಗಳ ವಿರುದ್ಧ ಆರ್‌ಎಫ್‌ಒ ಕ್ರಮ ಕೈಗೊಂಡಿರುವುದು ಇದೇ ಮೊದಲು. ಅಲ್ಲದೆ ತಕ್ಷಣವೇ ಎಲ್ಲಾ ವಿವರಗಳನ್ನು ಅಧಿಕಾರಿಗಳು ಡಿಲೀಟ್ ಮಾಡಿದ್ದಾರೆ. ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿರುವ ಫೋಟೋಗಳು ತಡೋಬಾದಲ್ಲಿರುವ ಎರಡು ಹುಲಿಗಳ ಫೋಟೋ ಆಗಿದ್ದು, 2019ರಲ್ಲಿ ಹಿರಿಯ ಐಎಫ್‌ಎಸ್ ಅಧಿಕಾರಿಯೊಬ್ಬರು ಇದನ್ನು ಸೆರೆಹಿಡಿದಿದ್ದರು.

ಕಳೆದ ವರ್ಷ, ಹೋಮ್ ಸ್ಟೇ ಮತ್ತು ರೆಸಾರ್ಟ್‌ಗಳಿಗೆ ಸಂಬಂಧಿಸಿದ ಸ್ಥಳೀಯರೊಬ್ಬರು ರಸ್ತೆಯ ಬಳಿ ಹುಲಿ ಅಲೆದಾಡುತ್ತಿರುವುದನ್ನು ಕಂಡು ಇದೇ ರೀತಿಯ ವದಂತಿಯನ್ನು ಹರಡಿದ್ದರು. ಅರಣ್ಯ ಇಲಾಖೆ ಮತ್ತು ಪೊಲೀಸರು ಆತನಿಗೆ ಲಿಖಿತವಾಗಿ ಸಾರ್ವಜನಿಕ ಕ್ಷಮೆಯಾಚನೆ ಮಾಡುವಂತೆ ಮಾಡಿದ್ದರು.
 

SCROLL FOR NEXT