ರಾಜ್ಯ

ನಾಡಿನಾದ್ಯಂತ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ: ಮಳೆಯ ಅಬ್ಬರದ ನಡುವೆ ತಗ್ಗದ ಜನರ ಉತ್ಸಾಹ

Sumana Upadhyaya

ಬೆಂಗಳೂರು: ನಾಡಿನೆಲ್ಲೆಡೆ ಇಂದು ಶ್ರಾವಣ ಶುಕ್ರವಾರ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ. ರಾಜ್ಯಾದ್ಯಂತ ವಿಪರೀತ ಮಳೆ, ಹಲವೆಡೆ ಜಲ ಪ್ರಳಯ, ಪ್ರಾಣಹಾನಿ, ಆಸ್ತಿಪಾಸ್ತಿ ನಷ್ಟ, ತೊಂದರೆಗಳು ಸಂಭವಿಸುತ್ತಿವೆ.

ಆದರೂ ಅನೇಕ ಕಡೆ ಹಬ್ಬದ ಆಚರಣೆಯಿಂದ ಜನರು ಹಿಂದೆಬಿದ್ದಿಲ್ಲ. ನಿನ್ನೆ ಸಂಜೆಯಿಂದ ರಾಜಧಾನಿ ಬೆಂಗಳೂರಿನಲ್ಲಿ ಜಿಟಿಜಿಟಿ ಮಳೆ ಬರುತ್ತಿದ್ದರೂ ಲೆಕ್ಕಿಸದೆ ಮಾರುಕಟ್ಟೆಯಲ್ಲಿ ಹೂವು-ಹಣ್ಣು, ತರಕಾರಿ, ದಿನಸಿ ಸಾಮಾನುಗಳನ್ನು ಖರೀದಿಸುವುದರಲ್ಲಿ ಜನರು ನಿರತರಾಗಿದ್ದರು. 

ಗಗನಕ್ಕೇರಿದ ಬೆಲೆ: ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆಯಲ್ಲಿ ಹೂವು, ಹಣ್ಣು- ತರಕಾರಿ ಬೆಲೆ ಗಗನಕ್ಕೇರಿದೆ. 

ಬೆಳಗ್ಗೆಯೇ ಹಬ್ಬಕ್ಕೆ ತಯಾರಿ; ಸಂಪತ್ತಿನ ಅಧಿದೇವತೆ ಲಕ್ಷ್ಮಿಯನ್ನು ಪೂಜಿಸುವ ಹಬ್ಬ ವರಮಹಾಲಕ್ಷ್ಮಿ, ಶ್ರಾವಣ ಮಾಸದ ಎರಡನೇ ಶುಕ್ರವಾರ ಆಡಿ ಶುಕ್ರವಾರದಂದು ಆಚರಿಸಲಾಗುತ್ತದೆ. ಹಾಗಾಗಿ ಧನಕನಕಾದಿ ಐಶ್ವರ್ಯಗಳನ್ನು ಕರುಣಿಸು ಎಂದು ಭಕ್ತರು ತಮ್ಮ ಮನೆಗಳಲ್ಲಿ ಇಷ್ಟಾನುಸಾರ, ಶಕ್ತಿಯಾನುಸಾರ ಪೂಜೆ ಮಾಡುತ್ತಾರೆ.

ವರಮಹಾಲಕ್ಷ್ಮಿ ದೇವಿಗೆ ಸೀರೆ ಉಡಿಸಿ, ಕಲಶ ಇಟ್ಟು ವಸ್ತ್ರ, ಒಡವೆ, ಧನಕನಕಾದಿಗಳನ್ನಿಟ್ಟು, ಫಲವಸ್ತುಗಳು, ಅರಶಿನ ಕುಂಕುಮ, ನೈವೇದ್ಯಕ್ಕೆ ಹಣ್ಣು, ತರಕಾರಿ, ಬಗೆಬಗೆಯ ತಿನಿಸುಗಳನ್ನು ತಯಾರಿಸಿ ಮಹಾಲಕ್ಷ್ಮಿ ದೇವಿಯ ಮುಂದಿಟ್ಟು ಪೂಜಿಸುತ್ತಾರೆ. ಮಹಿಳೆಯರೇ ಮಾಡುವ ಹಬ್ಬ ಇದಾಗಿರುವುದರಿಂದ ಮಹಿಳೆಯರು ನಸುಕಿನಲ್ಲಿಯೇ ಎದ್ದು ಮನೆಯ ಮುಂದೆ ಸಾರಿಸಿ ರಂಗೋಲಿ ಬಳಿದು ಸ್ನಾನ ಮಾಡಿ ಬಂದು ಹೊಸ ಉಡುಗೆ ತೊಟ್ಟು ದೇವಿಗೆ ಮುಂದೆ ಕುಳಿತು ಸಂಕಲ್ಪ ಮಾಡಿ ವ್ರತ ಕೈಗೊಳ್ಳುತ್ತಾರೆ.

ನಂತರ ದೇವಿಗೆ ಬಗೆಬಗೆಯ ತಿನಿಸುಗಳನ್ನು ತಯಾರಿಸಿ ದೇವರ ಮುಂದಿಡುತ್ತಾರೆ. ಹಲವೆಡೆ ಸಾಯಂಕಾಲ ಶುಕ್ರವಾರ ವರಮಹಾಲಕ್ಷ್ಮಿಗೆ ಪೂಜೆ ಮಾಡುತ್ತಾರೆ. ಸಾಯಂಕಾಲ ಹೊತ್ತು ಮುತ್ತೈದೆಯರನ್ನು ಅರಶಿನ ಕುಂಕುಮಕ್ಕೆ ಕರೆಯುವುದು ಬಹುತೇಕ ಕಡೆ ವಾಡಿಕೆಯಿದೆ.

ವರಮಹಾಲಕ್ಷ್ಮಿ ಹಬ್ಬಕ್ಕೆ ಹಲವು ವಸ್ತುಗಳನ್ನು ಮಾರುಕಟ್ಟೆಯಿಂದ ತರಬೇಕಾಗುತ್ತದೆ. ವಸ್ತುಗಳನ್ನು ತಂದು ಒಪ್ಪ ಓರಣವಾಗಿ ಜೋಡಿಸಿಟ್ಟು ಹಬ್ಬಕ್ಕೆ ಅಡುಗೆ ಮಾಡುವುದೇ ಮುಖ್ಯವಾದ ಕೆಲಸ.

ವರಮಹಾಲಕ್ಷ್ಮಿ ಹಬ್ಬಕ್ಕೆ ನಾಡಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ರಾಜಕೀಯ ನಾಯಕರು, ಗಣ್ಯರು, ಸಿನಿಮಾ ಕಲಾವಿದರು ಶುಭ ಹಾರೈಸಿದ್ದಾರೆ. 

SCROLL FOR NEXT