ಬೆಂಗಳೂರು: ಮನೆಯಲ್ಲಿ ಒಂಟಿಯಾಗಿದ್ದ 57 ವರ್ಷದ ಮಹಿಳೆಯನ್ನು ಹತ್ಯೆ ಮಾಡಿ, ಬೆಲೆಬಾಳುವ ವಸ್ತುಗಳೊಂದಿಗೆ ಪರಾರಿಯಾಗಿದ್ದ ಬಿಹಾರ ಮೂಲದ ಇಬ್ಬರು ಹಂತಕರನ್ನು ದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಜುಲೈ 15 ರಂದು ಈ ಕೊಲೆ ನಡೆದಿತ್ತು. ಆರೋಪಿಗಳನ್ನು ಬಿಹಾರ ಮೂಲದ ಪಶುಪತಿ ಅಲಿಯಾಸ್ ಪಾಪಯ್ಯ ಮತ್ತು ಧೀರಜ್ ಕುಮಾರ್ ಎಂದು ಗುರುತಿಸಲಾಗಿದೆ. ದೇವನಹಳ್ಳಿಯ ಡಿಫೆನ್ಸ್ ಲೇಔಟ್ನಲ್ಲಿರುವ ಮನೆಯಲ್ಲಿ ಮಹಿಳೆ ಅಂಚಲಾ ತುಳಸಿಯನ್ ಕೊಲೆಯಾಗಿತ್ತು.
ಕೊಲೆಯಾದ ಮಹಿಳೆಯ ಕುಟುಂಬಸ್ಥರು ನಡೆಸುತ್ತಿದ್ದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಹಾಗೂ ಅಲ್ಲಿಯೇ ಮನೆಯೊಂದರಲ್ಲಿ ವಾಸವಿದ್ದ ಆರೋಪಿಗಳು ಕೆಲ ತಿಂಗಳ ಹಿಂದೆ ಕೆಲಸ ತೊರೆದಿದ್ದರು. ಎಲ್ಲರೂ ಕೆಲಸಕ್ಕೆ ಹೋದ ನಂತರ ಮಹಿಳೆ ಒಂಟಿಯಾಗುತ್ತಾರೆ ಎಂದು ತಿಳಿದ ಅವರು, ಜುಲೈ 15 ರಂದು ಮಧ್ಯಾಹ್ನ ಆಕೆಯನ್ನು ಕೊಲೆ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆಯ ನಂತರ, ಆರೋಪಿಗಳು ಬಿಹಾರಕ್ಕೆ ಪರಾರಿಯಾಗಿದ್ದರು. ಅಲ್ಲಿಂದ ಅವರನ್ನು ಬಂಧಿಸಲಾಗಿದೆ. ಹತ್ಯೆಯಾದ ಮಹಿಳೆಯ ಮನೆಯಿಂದ ಕಳವು ಮಾಡಿದ್ದ 11 ಲಕ್ಷ ರೂ. ವಶಕ್ಕೆ ಪಡೆಯಲಾಗಿದೆ. ಈ ಪ್ರಕರಣದಲ್ಲಿ ಇತರರು ಇದ್ದಾರೆಯೇ ಎಂಬುದನ್ನು ತಿಳಿಯಲು ತನಿಖೆ ಮುಂದುವರೆಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.