ರಾಜ್ಯ

ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಅವಹೇಳನಕಾರಿ ಹೇಳಿಕೆಗಳ ನೀಡದಿರಿ: ಸ್ಪೀಕರ್ ಯುಟಿ ಖಾದರ್

Manjula VN

ವಿಜಯಪುರ: ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಆಕ್ಷೇಪಾರ್ಹ ಅಥವಾ ಅವಹೇಳನಕಾರಿ ಭಾಷೆಯನ್ನು ಬಳಸಲು ಯಾವುದೇ ಸಂವಿಧಾನವು ಅನುಮತಿಸುವುದಿಲ್ಲ ಎಂದು ವಿಧಾನಸಭಾಧ್ಯಕ್ಷ ಯುಟಿ ಖಾದರ್ ಅವರು ಗುರುವಾರ ಹೇಳಿದರು.

ಸಿಂದಗಿ ಪಟ್ಟಣದ ಹೆಚ್.ಜಿ.ಕಾಲೇಜು ಸಭಾಭವನದಲ್ಲಿ ಟಿಎಸ್'ಪಿಎಸ್ ಮಂಡಳಿ ವತಿಯಿಂದ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವವನ್ನು ಕಾಪಾಡಿಕೊಳ್ಳುವಲ್ಲಿ ಸಂವಿಧಾನದ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು.

ಬೇಜವಾಬ್ದಾರಿ ಭಾಷಣದಿಂದ ಅನೇಕ ಪ್ರತಿಕೂಲ ಪರಿಣಾಮಗಳು ಎದುರಾಗುವುದನ್ನು ನಾವು ನೋಡಿದ್ದೇವೆ, ಅಂತಹ ಭಾಷಣಗಳಿಂದ ಉಂಟಾದ ಹಾನಿಗಳನ್ನು ಸರಿಪಡಿಸಲು ಅಮೂಲ್ಯವಾದ ಸಮಯ ವ್ಯರ್ಥವಾಗುತ್ತದೆ" ಎಂದು ಹೇಳಿದರು.

ಸಮಾಜದ ಹಿತಾಸಕ್ತಿ, ಜನಕಲ್ಯಾಣ ವಿಚಾರದಲ್ಲಿ ರಾಜಿಯಾಗದಂತೆ ಮಾಡಬೇಕು. ವಿಧಾನಸಭಾಧ್ಯಕ್ಷರ ಪಾತ್ರ ಅತ್ಯಂತ ಗೌರವಯುತ ಮತ್ತು ಅತ್ಯಂತ ಜವಾಬ್ದಾರಿಯುತವಾಗಿದ್ದು, ಸಂವಿಧಾನದ ತತ್ವಗಳನ್ನು ರಕ್ಷಿಸುವುದು ಮತ್ತು ಉತ್ತೇಜಿಸುವುದು ಸ್ಪೀಕರ್ ಅವರ ಕೆಲಸವಾಗಿದೆ. ಸಂವಿಧಾನದ ಆದರ್ಶಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಮಾತ್ರ ಸದೃಢ ಪ್ರಜಾಪ್ರಭುತ್ವ ಸಂರಕ್ಷಣೆ ಸಾಧ್ಯ. ಪ್ರಜಾಪ್ರಭುತ್ವವನ್ನು ಪ್ರಸ್ತುತ ಮತ್ತು ಮುಂದಿನ ಪೀಳಿಗೆಗೆ ರಕ್ಷಿಸುವ ಸಾಮೂಹಿಕ ಜವಾಬ್ದಾರಿಯನ್ನು ನಾಗರಿಕರು ತೆಗೆದುಕೊಳ್ಳಬೇಕು ಎಂದು ತಿಳಿಸಿದರು.

ನಾವು ವಿದೇಶಕ್ಕೆ ಹೋದಾಗ ಮಾತ್ರ ನಮ್ಮ ದೇಶದ ಮೌಲ್ಯ ಮತ್ತು ಶ್ರೀಮಂತಿಕೆ ಅರಿವಾಗುತ್ತದೆ. ಕರಾವಳಿ ಭಾಗದ ಅನೇಕ ವಿದ್ಯಾರ್ಥಿಗಳು ತಮ್ಮ ವ್ಯಾಸಂಗದ ಅವಧಿಯಲ್ಲಿಯೇ ಪಾಸ್‌ಪೋರ್ಟ್‌ ಸಿದ್ಧಪಡಿಸಿ ವ್ಯಾಸಂಗದ ನಂತರ ಸಂಪಾದನೆಗಾಗಿ ವಿದೇಶಗಳಿಗೆ ತೆರಳುತ್ತಾರೆ. ಆದರೆ, ವಿದೇಶಕ್ಕೆ ಹೋದಾಗ, ತಮ್ಮ ದೇಶದೊಂದಿಗೆ ಹೊಂದಿರುವ ಆಳವಾದ ಬಾಂಧವ್ಯವನ್ನು ಅರಿತುಕೊಳ್ಳುತ್ತಾರೆ ಎಂದರು.

ಇದೇ ವೇಳೆ ಕೇವಲ ನಕಾರಾತ್ಮಕ ಅಂಶಗಳ ಮೇಲೆ ಕೇಂದ್ರೀಕರಿಸದೆ ದೇಶದ ಸಕಾರಾತ್ಮಕ ಅಂಶಗಳ ಮೇಲೆ ಕೇಂದ್ರೀಕರಿಸುವಂತ ಜನತೆಗೆ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಶಾಸಕ ಅಶೋಕ ಮನಗೂಳಿ, ಕಾಂಗ್ರೆಸ್‌ ಮುಖಂಡ ಎಸ್‌ಎಂ ಪಾಟೀಲ್‌ ಗಣಿಹಾರ್‌, ಡಿಸಿ ಟಿ ಭೂಬಾಲನ್‌, ಜಿಪಂ ಸಿಇಒ ರಾಹುಲ್‌ ಶಿಂಧೆ ಮತ್ತಿತರರು ಉಪಸ್ಥಿತರಿದ್ದರು.

SCROLL FOR NEXT